ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಗತ್ಯ ಹುದ್ದೆಗಳ ರದ್ದು: ಸಂಪುಟ ಉಪಸಮಿತಿ ಸಭೆ ಬಳಿಕ ಸಚಿವ ಅಶೋಕ ಮಾಹಿತಿ

Last Updated 5 ಏಪ್ರಿಲ್ 2022, 20:03 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಕ್ಕೆ ‘ಬಿಳಿಯಾನೆ’ಯಾಗಿರುವ ವಿವಿಧ ಇಲಾಖೆಗಳಲ್ಲಿರುವ ಅನಗತ್ಯ ಹುದ್ದೆಗಳನ್ನು ರದ್ದು ಮಾಡುವುದು ಮತ್ತು ಇಲಾಖೆಗಳ ವಿಲೀನಕ್ಕೆ ಸಂಬಂಧಿಸಿದಂತೆ ಮಂಗಳವಾರ ಸಂಪುಟ ಉಪಸಮಿತಿಯಲ್ಲಿ ಕೆಲವು ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ.

ರಾಜ್ಯದಲ್ಲಿ ಈಗ ಇರುವ ನಾಲ್ಕು ವಿಭಾಗೀಯಾಧಿಕಾರಿ ಹುದ್ದೆಗಳನ್ನು ರದ್ದು ಮಾಡುವುದು, ಜಿಲ್ಲೆಗೆ ಒಬ್ಬ ಡಿಸಿಎಫ್‌ ಮಾತ್ರ ನೇಮಿಸುವುದು. ಈಗ ಕೆಲವು ಜಿಲ್ಲೆಗಳಲ್ಲಿ 3 ರಿಂದ 4 ನಾಲ್ಕು ಡಿಸಿಎಫ್‌ಗಳಿದ್ದಾರೆ. ಅಷ್ಟು ಡಿಸಿಎಫ್‌ಗಳ ಅಗತ್ಯವಿಲ್ಲ. ಅಧಿಕಾರಿಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಫಾರೆಸ್ಟರ್‌ಗಳನ್ನು ನೇಮಿಸಿಕೊಳ್ಳಲು ಸೂಚಿಸಲಾಗಿದೆ ಎಂದುಕಂದಾಯ ಸಚಿವ ಆರ್‌.ಅಶೋಕ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಕೃಷಿ ಇಲಾಖೆಗೆ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯನ್ನು ವಿಲೀನಗೊಳಿಸುವುದು, ಅರಣ್ಯ ಇಲಾಖೆಯಲ್ಲಿ ಇರುವ ಮೂರು ಮಂಡಳಿಗಳನ್ನು ರದ್ದು ಮಾಡಿ ಒಂದು ಮಂಡಳಿಯನ್ನು ಮಾತ್ರ ಉಳಿಸಿಕೊಳ್ಳಲು ತೀರ್ಮಾನಿಸಲಾಗಿದೆ ಎಂದರು.

ಅಲ್ಲದೆ, ಕೆಲವು ಜಿಲ್ಲೆಗಳಲ್ಲಿ ಅಭಿವೃದ್ಧಿಗಾಗಿ ಹಲವು ಮಂಡಳಿಗಳನ್ನು ರಚಿಸಲಾಗಿದೆ. ಒಂದಕ್ಕಿಂತ ಹೆಚ್ಚು ಮಂಡಳಿಗಳು ಇದ್ದರೆ ಅವುಗಳನ್ನು ರದ್ದು ಮಾಡಿ, ಒಂದನ್ನು ಮಾತ್ರ ಉಳಿಸಿಕೊಳ್ಳುವುದು ಸೂಕ್ತ ಎಂದು ತೀರ್ಮಾನಿಸಲಾಯಿತು. ಉದಾಹರಣೆಗೆ ಬೆಂಗಳೂರು ಸುತ್ತಮುತ್ತ ರಾಮನಗರ, ಮಾಗಡಿ, ಆನೇಕಲ್‌, ದೇವನಹಳ್ಳಿ ಅಭಿವೃದ್ಧಿ ಮಂಡಳಿಗಳಿವೆ. ರಾಮನಗರ ಮತ್ತು ಮಾಗಡಿ ಮಂಡಳಿಗಳನ್ನು ಒಂದು ಮಾಡಬಹುದು. ಜಿಲ್ಲೆಗೆ ಒಂದು ಅಭಿವೃದ್ಧಿ ಮಂಡಳಿ ಇದ್ದರೆ ಸಾಕಾಗುತ್ತದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.

ಇದೇ ರೀತಿ ಬೆಂಗಳೂರಿನಲ್ಲೂ ಹಲವು ಮಂಡಳಿಗಳು ಇವೆ. ಅವುಗಳನ್ನು ಬಿಎಂಎಆರ್‌ಡಿಯಲ್ಲಿ ವಿಲೀನಗೊಳಿಸುವ ಬಗ್ಗೆಯೂ ಸಲಹೆ ಕೇಳಿ ಬಂದಿತು. ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆಯಲ್ಲಿರುವ ಆಡಳಿತ ಸುಧಾರಣೆ ವಿಭಾಗದಲ್ಲಿರುವ ಮನೀಷ್ ಮೌದ್ಗಿಲ್‌ ಅವರು, ತಮಗೆ ಇಲ್ಲಿ ಕೆಲಸವೇ ಇಲ್ಲ. ಈ ವಿಭಾಗದ ಅಗತ್ಯವೇ ಇಲ್ಲ ಎಂದು ಹೇಳಿದರು. ಅದೇ ರೀತಿವಾರ್ತಾ ಇಲಾಖೆಯೂ ಅನುತ್ಪಾದಕವಾಗಿದ್ದು ಇಲ್ಲೂ ಕೆಲವು ಸುಧಾರಣೆ ಮಾಡಲು ಸಲಹೆಗಳು ಸಭೆಯಲ್ಲಿ ಕೇಳಿ ಬಂದಿದೆ ಎಂದರು.

ಹಿಂದೆ ಅನಗತ್ಯವಾಗಿ ಹಲವು ಮಂಡಳಿ, ವಿಭಾಗ, ಇಲಾಖೆಗಳು ಮತ್ತು ಹುದ್ದೆಗಳನ್ನು ಸೃಷ್ಟಿಸಲಾಗಿತ್ತು. ಈಗ ಇವು ಆರ್ಥಿಕವಾಗಿ ಹೊರೆಯಾಗಿ ಪರಿಣಮಿಸಿವೆ. ಯಾವುದನ್ನು ರದ್ದು ಮಾಡಬೇಕು, ಯಾವುದನ್ನು ವಿಲೀನಗೊಳಿಸಬೇಕು ಎಂಬ ಬಗ್ಗೆ ಮಧ್ಯಂತರ ವರದಿಯನ್ನು ಮುಖ್ಯಮಂತ್ರಿಯವರಿಗೆ ನೀಡಿ, ಜಾರಿಗೊಳಿಸಲು ಸಲಹೆ ನೀಡಲಾಗುವುದು ಎಂದೂ ಅಶೋಕ ಹೇಳಿದರು.

ಅನಗತ್ಯ ಹುದ್ದೆಗಳನ್ನು ರದ್ದು ಮಾಡುವ ಬಗ್ಗೆ ಅಧಿಕಾರಿಗಳ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಅದಕ್ಕೆ ಸೊಪ್ಪು ಹಾಕುವ ಪ್ರಶ್ನೆಯೇ ಇಲ್ಲ. ಸರ್ಕಾರದ ಹೊರೆ ತಗ್ಗಿಸುವುದು, ಎಲ್ಲ ಸಿಬ್ಬಂದಿ ಮತ್ತು ನೌಕರರಿಗೂ ಕೆಲಸ ಇರಬೇಕು. ಕೆಲಸ ಮಾಡದೇ ಯಾರೂ ಕೂರಬಾರದು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT