ಹೊಸಪೇಟೆ (ವಿಜಯನಗರ): 'ಮುಸ್ಲಿಂ ಗೂಂಡಾಗಳು ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆ, ಆಸ್ಪತ್ರೆ ಹಾಗೂ ವಾಹನಗಳ ಮೇಲೆ ದಾಳಿ ನಡೆಸಿದ್ದಾರೆ. ಪೊಲೀಸ್ ಠಾಣೆ, ಪೊಲೀಸರನ್ನು ಟಾರ್ಗೆಟ್ ಮಾಡಿ ಈ ದಾಳಿ ನಡೆಸಿದ್ದಾರೆ. ರಾಜ್ಯ ಸರ್ಕಾರ ತಕ್ಷಣವೇ ಇವರನ್ನು ಗೂಂಡಾ ಕಾಯ್ದೆ, ಭಯೋತ್ಪಾದಕ ಕಾಯ್ದೆ ಅಡಿ ಬಂಧಿಸಬೇಕು' ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದರು.
ಭಾನುವಾರ ಇಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ಭಾಗವಹಿಸುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೋ ಒಬ್ಬ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ಚಿಕ್ಕ ಘಟನೆ ವಿಚಾರವಾಗಿ ಸಂಬಂಧಿಸಿದವರನ್ನು ಬಂಧಿಸಿ ಶಿಕ್ಷೆ ಕೊಡಬೇಕೆಂದು ಹೇಳಬೇಕಿತ್ತು. ಅದಕ್ಕೆ ಸರ್ಕಾರವೂ ಸಿದ್ಧವಿದೆ. ಆದರೆ, ಸರ್ಕಾರದ ವ್ಯವಸ್ಥೆಗೆ ಸವಾಲೊಡ್ಡುವ ಶಕ್ತಿಯನ್ನು ಸಹಿಸಿಕೊಳ್ಳಬಾರದು. ಸರ್ಕಾರ ಬಿಗಿ ಕ್ರಮ ಕೈಗೊಂಡು ಉಗ್ರ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ಹುಬ್ಬಳ್ಳಿ, ಡಿ.ಜೆ.ಹಳ್ಳಿ, ಕೆ.ಜೆ. ಹಳ್ಳಿಯ ಘಟನೆಗಳು ಸಾಮಾನ್ಯವಾದವಲ್ಲ. ಪೊಲೀಸರನ್ನೇ ಹೆದರಿಸುವ ಘಟನೆಗಳಿವು. ಹರ್ಷನ ಕೊಲೆಯಾದ ಮೇಲೆ ಶಿವಮೊಗ್ಗದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಹಾಡಹಗಲೇ ಪೊಲೀಸರ ಎದುರು ಲಾಂಗು, ಮಚ್ಚು ಹಿಡಿದುಕೊಂಡು ಓಡಾಡುವ ಸ್ಥಿತಿ ಎದುರಾಯಿತು. ಇದನ್ನು ನಮ್ಮ ಸಮಾಜ ಎಷ್ಟು ದಿನ ಸಹಿಸಿಕೊಳ್ಳಬೇಕು. ಯಾವುದನ್ನು ಕೇರಳ, ಕಾಶ್ಮೀರ, ಪಶ್ಚಿಮ ಬಂಗಾಳದಲ್ಲಿ ಮಾಡುತ್ತಿದ್ದಾರೋ, ಅದೇ ರೀತಿ ಕರ್ನಾಟಕದಲ್ಲಿ ಮಾಡಲು ಆ ಸಮುದಾಯ ಹೊರಟಿದೆ ಎಂದರು.
ಹಿಜಾಬ್, ಹಲಾಲ್ ಮುಂದಿಟ್ಟುಕೊಂಡು ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡಲಾಗುತ್ತಿದೆ. ಈಗ ಮತ್ತೆ ಚಿಕ್ಕ ಘಟನೆಯ ಮೂಲಕ ಸವಾಲೊಡ್ಡಲಾಗುತ್ತಿದೆ. ನಮ್ಮ ರಾಜ್ಯ ಮತ್ತೊಂದು ಕೇರಳ, ಪಶ್ಚಿಮ ಬಂಗಾಳ, ಕಾಶ್ಮೀರ ಆಗಬಾರದು. ಇದು ನಮ್ಮ ಅಪೇಕ್ಷೆ. ಕರ್ನಾಟಕದ ಜನ ಶಾಂತಿ ಬಯಸುವ ಜನ. ಎಲ್ಲವನ್ನು ಸಹಿಸಿಕೊಂಡು ಬಂದಿದ್ದೇವೆ. ಹಂಪಿಯಲ್ಲಿ ಇದ್ದೇವೆ. ಶತಮಾನಗಳ ಹಿಂದೆ ಆಗಿರುವ ದೌರ್ಜನ್ಯ ನೋಡಿದ್ದೇವೆ. ಈಗ ಅದನ್ನು ಸಹಿಸಿಕೊಳ್ಳಬಾರದು. ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.