ಮಂಡ್ಯ: ಭಾನುವಾರ ನಗರಕ್ಕೆ ಬರಬೇಕಾಗಿದ್ದ ಚಿತ್ರನಟ ಚೇತನ್ ಅವರನ್ನು ಕಾನೂನು– ಸುವ್ಯವಸ್ಥೆ ನೆಪವೊಡ್ಡಿ ಪೊಲೀಸರು ತಡೆದಿದ್ದಾರೆ ಎಂದು ವಿವಿಧ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಅಂಬೇಡ್ಕರ್ ಭವನದಲ್ಲಿ ನಿಗದಿಯಾಗಿದ್ದ ನಗರ, ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ಪೌರಕಾರ್ಮಿಕರ ಸಮಾವೇಶವನ್ನು ಚೇತನ್ ಉದ್ಘಾಟಿಸಬೇಕಿತ್ತು. ‘ಕಾಂತಾರ’ ಚಲನಚಿತ್ರ ಕುರಿತು ಚೇತನ್ ಮಾಡಿರುವ ಟ್ವೀಟ್ ಕುರಿತಂತೆ ಅವರ ವಿರುದ್ಧ ವಿವಿಧೆಡೆ ಹಲವು ಪ್ರಕರಣ ದಾಖಲಾಗಿವೆ.
ಜೊತೆಗೆ ಚೇತನ್ ಬರುತ್ತಿರುವ ಹಿನ್ನೆಲೆಯಲ್ಲಿ ಕಿಡಿಗೇಡಿಗಳು ನಗರದ ವಿವಿಧೆಡೆ ಅವರ ಫ್ಲೆಕ್ಸ್ ಹರಿದಿದ್ದಾರೆ. ಇದಕ್ಕೆ ಬೆದರಿದ ಪೊಲೀಸರು ಚೇತನ್ ಬರುವುದನ್ನೇ ತಡೆದಿದ್ದಾರೆ ಎಂದು ಕಾರ್ಯಕ್ರಮದ ಸಂಘಟಕರು ಆರೋಪಿಸಿದ್ದಾರೆ.
‘ಚೇತನ್ ಅವರು ಕಾಂತಾರ ಚಿತ್ರ ಕುರಿತು ವಿಮರ್ಶಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ. ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಅಭಿವ್ಯಕ್ತಿ ಸ್ವಾತಂತ್ರ್ಯ ಚೇತನ್ ಸೇರಿದಂತೆ ಎಲ್ಲರಿಗೂ ಇದೆ. ಗಲಾಟೆಯಾಗಬಹುದು ಎಂಬ ಕಾರಣಕ್ಕೆ ಪೌರ ಕಾರ್ಮಿಕರ ಸಮಾವೇಶದಲ್ಲಿ ಪಾಲ್ಗೊಳ್ಳದಂತೆ ತಡೆದಿರುವುದು ಖಂಡನೀಯ’ ಎಂದು ಮುಖಂಡ ಡಾ.ಎಚ್.ಎನ್.ರವೀಂದ್ರ ಆಕ್ರೋಶ ವ್ಯಕ್ತಪಡಿಸಿದರು.
‘ಚೇತನ್ ಅವರು ಮಂಡ್ಯಕ್ಕೆ ಬರಲು ಸಿದ್ಧರಾಗಿದ್ದರು. ಕಾನೂನು ಸುವ್ಯವಸ್ಥೆ ನೆಪವೊಡ್ಡಿ ಮಂಡ್ಯಕ್ಕೆ ತೆರಳದಂತೆ ಬೆಂಗಳೂರು ಪೊಲೀಸರು ಅವರನ್ನು ತಡೆದಿದ್ದಾರೆ’ ಎಂದು ಕಾರ್ಮಿಕ ಮುಖಂಡ ಎಂ.ಬಿ.ನಾಗಣ್ಣಗೌಡ ತಿಳಿಸಿದರು.