ಚಿಕ್ಕಬಳ್ಳಾಪುರ: ತಾಲ್ಲೂಕಿನ ನಂದಿ ಗಿರಿಧಾಮಕ್ಕೆ ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದ್ದು ಅವರಿಗೆ ಅವಕಾಶ ನೀಡದೆ ಅವರನ್ನು ಅಲ್ಲಿನ ಅಧಿಕಾರಿಗಳು ವಾಪಸ್ ಕಳುಹಿಸಿದ್ದಾರೆ.
ರಾಜ್ಯದ ಎಲ್ಲೆಡೆ ವಾರಾಂತ್ಯದ ಕರ್ಫ್ಯೂ ತೆರವಾಗಿದೆ. ಆದರೆ ನಂದಿ ಗಿರಿಧಾಮದಲ್ಲಿ ಮಾತ್ರ ವಾರಾಂತ್ಯದ ಕರ್ಫ್ಯೂ ಮುಂದುವರಿದಿದೆ. ಪ್ರತಿ ವಾರಾಂತ್ಯದಲ್ಲಿ ಹೆಚ್ಚಿನ ಪ್ರವಾಸಿಗರು ಗಿರಿಧಾಮಕ್ಕೆ ಭೇಟಿ ನೀಡಿ ಪ್ರವೇಶ ಇಲ್ಲ ಎನ್ನುವುದನ್ನು ತಿಳಿದು ಅಸಮಾಧಾನ ಹೊರಹಾಕುತ್ತಿದ್ದಾರೆ.
ಈ ಎರಡು ದಿನಗಳಲ್ಲಿ ಗಿರಿಧಾಮದಲ್ಲಿನ ವಸತಿ ನಿಲಯಗಳಲ್ಲಿ ಕೊಠಡಿಗಳನ್ನು ಕಾಯ್ದಿರಿಸಿದವರಿಗೆ ಮಾತ್ರ ಪ್ರವೇಶವಿದೆ. ಸಾಮಾನ್ಯ ಪ್ರವಾಸಿಗರಿಗೆ ಪ್ರವೇಶವಿಲ್ಲ.
ಸಾಮಾನ್ಯವಾಗಿ ವಾರಾಂತ್ಯದ ದಿನಗಳಲ್ಲಿ 10 ರಿಂದ 15 ಸಾವಿರ ಪ್ರವಾಸಿಗರು ಭೇಟಿ ನೀಡುವರು. ಶನಿವಾರ ಮತ್ತು ಭಾನುವಾರ ಪ್ರವೇಶ ದ್ವಾರದಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ಕಾವಲಿಗೆ ಇರುವರು. ಈ ವೇಳೆ ಪ್ರವಾಸಿಗರು ಪೊಲೀಸರ ಜತೆ ವಾಗ್ವಾದ ನಡೆಸಿದ ನಿದರ್ಶನಗಳಿವೆ.
ಬೇಸಿಗೆಯ ಈ ದಿನಗಳಲ್ಲಿ ಗಿರಿಧಾಮಕ್ಕೆ ಬರುವವರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಆದರೆ ವಾರಾಂತ್ಯದಲ್ಲಿ ಗಿರಿಧಾಮಕ್ಕೆ ಅವಕಾಶ ನೀಡದಿರುವುದು ಪ್ರವಾಸಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಈ ನಡುವೆ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಪ್ರವಾಸಿಗರ ಪ್ರವೇಶಕ್ಕೆ ಮಿತಿ ಹೇರಿದೆ. ನಿತ್ಯ 2,500 ಮಂದಿಗೆ ಮಾತ್ರ ಗಿರಿಧಾಮ ಪ್ರವೇಶಕ್ಕೆ ಅವಕಾಶವಿದೆ. ಇದರಲ್ಲಿ 1,250 ಟಿಕೆಟ್ ಗಳನ್ನು ಆನ್ ಲೈನ್ ಮೂಲಕ ಮತ್ತು 1,250 ಟಿಕೆಟ್ ಗಳನ್ನು ಆಪ್ ಲೈನ್ ನಲ್ಲಿ ಖರೀದಿಸಬಹುದು.