ಬೆಂಗಳೂರು: ದುಡಿಯುವ ಮಹಿಳೆಯರನ್ನು ಅಪಮಾನಿಸಿರುವ ಶಾಸಕ ಪ್ರಿಯಾಂಕ್ ಖರ್ಗೆ ಬೇಷರತ್ ಆಗಿ ಕ್ಷಮೆ ಕೇಳದಿದ್ದರೆ, ಮಹಿಳಾಮೋರ್ಚಾ ವತಿಯಿಂದ ಚಿತ್ತಾಪುರ ಕ್ಷೇತ್ರ ಚಲೋ ನಡೆಸಲಾಗುವುದು ಎಂದು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ವಿವೇಕಾನಂದ ಎಚ್ಚರಿಕೆ ನೀಡಿದ್ದಾರೆ.
ಸರ್ಕಾರಿ ನೌಕರಿ ಗಿಟ್ಟಿಸಲು ಮಂಚ ಹತ್ತಬೇಕು, ಯುವಕರು ಲಂಚ ನೀಡಬೇಕು ಎಂದು ಹೇಳುವ ಮೂಲಕ ಪ್ರಿಯಾಂಕ್ ಅವರು ದುಡಿಯುವ ಮಹಿಳೆಯರಿಗೆ ಅಪಮಾನ ಮಾಡಿದ್ದಾರೆ. ಖರ್ಗೆ ವಿರುದ್ಧ ಮಹಿಳಾ ಮೋರ್ಚಾ ಎಲ್ಲ ಜಿಲ್ಲೆಗಳಲ್ಲೂ ಪ್ರತಿಭಟನೆ ನಡೆಸಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಿಯಾಂಕ್ ಪ್ರಬಲ ರಾಜಕಾರಣಿ ಆಗಿರುವುದರಿಂದ ದುಡಿಯುವ ಮಹಿಳೆಯರು ದೂರು ಕೊಡಲು ಮತ್ತು ಪ್ರತಿಭಟನೆ ನಡೆಸಲು ಹೆದರುತ್ತಿದ್ದಾರೆ. ಇದೇ ತಿಂಗಳ ಕೊನೆಯೊಳಗೆ ಕ್ಷಮೆ ಕೇಳದಿದ್ದರೆ ಸೆಪ್ಟೆಂಬರ್ನಲ್ಲಿ ಚಿತ್ತಾಪುರ ಚಲೋ ಮಾಡಿ, ಅವರ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದು ಹೇಳಿದರು.
ಪ್ರಿಯಾಂಕ ಖರ್ಗೆ ಅವರು ತಮ್ಮನ್ನು ಚಾಲ್ತಿಯಲ್ಲಿಡಲು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಇವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಿತ್ತು. ಆ ರೀತಿ ಮಾಡದೇ ಅವರಿಗೆ ಉತ್ತೇಜನ ನೀಡಿದೆ ಎಂದು ಅವರು ಕಿಡಿಕಾರಿದರು.