ಬೆಂಗಳೂರು: ಚಲನಚಿತ್ರ ಮಂದಿರಗಳಲ್ಲಿ ತಕ್ಷಣಕ್ಕೆ ಶೇ 100 ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈಗ ಶೇ 50 ರಷ್ಟು ಪ್ರೇಕ್ಷಕರಿಗೆ ಸಿನಿಮಾ ವೀಕ್ಷಣೆಗೆ ಅವಕಾಶ ನೀಡಲಾಗಿದ್ದು, ಅದನ್ನು ಮುಂದುವರಿಸಲಾಗುವುದು. ಶೇ 100 ರಷ್ಟು ಅವಕಾಶ ನೀಡಬೇಕೆಂಬ ಬೇಡಿಕೆಯ ಬಗ್ಗೆ ತಜ್ಞರ ಸಮಿತಿ ನಿರ್ಧರಿಸಬೇಕಾಗುತ್ತದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪ್ರತಿನಿಧಿಗಳು ತಮ್ಮ ಭೇಟಿಯ ವೇಳೆ ಶೇ 100 ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದರು.
ಚಲನಚಿತ್ರ ಚಿತ್ರೀಕರಣ ವೇಳೆ ಅವಘಡಗಳನ್ನು ತಡೆಗಟ್ಟಲು ಕಟ್ಟುನಿಟ್ಟಾದ ಹೊಸ ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು ಎಂದೂ ಬೊಮ್ಮಾಯಿ ತಿಳಿಸಿದರು.
2011 ರಲ್ಲಿ ಈ ಸಂಬಂಧ ಕಾನೂನು ಮಾಡಲಾಗಿತ್ತು. ಅದರ ಪಾಲನೆ ಸರಿಯಾಗಿ ಆಗುತ್ತಿಲ್ಲ. ಅದನ್ನು ಪಾಲಿಸಲು ಇನ್ನಷ್ಟು ಬಿಗಿ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದೂ ಅವರು ಹೇಳಿದರು.