ಬೆಂಗಳೂರು: ಸಿದ್ದರಾಮಯ್ಯ ಅವರು ಐದು ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಪರಿಶಿಷ್ಟ ಸಮುದಾಯಗಳನ್ನು ಸಂಪೂರ್ಣವಾಗಿ ಕಡೆಗಣಿಸಿದ್ದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ʼಒಳ ಮೀಸಲಾತಿ ಕಲ್ಪಿಸಲು ಸಚಿವ ಸಂಪುಟ ಉಪ ಸಮಿತಿ ನೇಮಿಸಿರುವುದು ಕಣ್ಣೊರೆಸುವ ತಂತ್ರʼ ಎಂಬ ಸಿದ್ದರಾಮಯ್ಯ ಹೇಳಿಕೆ ಕುರಿತು ಸುದ್ದಿಗಾರರಿಗೆ ಶುಕ್ರವಾರ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ʼಅವರು ಅಧಿಕಾರದಲ್ಲಿದ್ದಾಗ ಪರಿಶಿಷ್ಟರ ಕಣ್ಣೀರು ಒರೆಸುವುದಿರಲಿ, ಅವರತ್ತ ತಿರುಗಿಯೂ ನೋಡಿರಲಿಲ್ಲʼ ಎಂದರು.
ಒಳ ಮೀಸಲಾತಿ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ಆಯೋಗ ನೀಡಿದ್ದ ವರದಿಯನ್ನು ತೆರೆದು ನೋಡುವ ಧೈರ್ಯವೂ ಅವರಿಗೆ ಇರಲಿಲ್ಲ. ಹುಬ್ಬಳ್ಳಿಯಲ್ಲಿ ನಡೆದ ಸಮಾವೇಶದಲ್ಲಿ ದೀಪ ಹಚ್ಚಿ, ಮಾತನಾಡದೇ ಬಂದಿದ್ದರು. ಇಂಥವರಿಂದ ನಾವು ಪಾಠ ಕಲಿಯಬೇಕಿಲ್ಲ ಎಂದು ಹೇಳಿದರು.
ನಮ್ಮ ಬದ್ಧತೆ ಏನು ಎಂಬುದು ಎಲ್ಲ ಸಮುದಾಯಗಳಿಗೂ ತಿಳಿದಿದೆ. ಕಾನೂನು ಸ್ಥಾನಮಾನವೂ ನಮಗೆ ತಿಳಿದಿದೆ. ಪ್ರಮುಖ ವಿಚಾರಗಳಲ್ಲಿ ನಿರ್ಣಯ ಕೈಗೊಳ್ಳುವ ದಿಟ್ಟತನ ಸರ್ಕಾರಕ್ಕೆ ಇದೆ ಎಂಬುದನ್ನು ತೋರಿಸಿದ್ದೇವೆ. ಸಿದ್ದರಾಮಯ್ಯ ಅವರು ಇನ್ನೊಬ್ಬರ ಬಗ್ಗೆ ಮಾತನಾಡುವ ಮುನ್ನ ಹಿಂತಿರುಗಿ ನೋಡಿದರೆಉತ್ತಮಎಂದರು.