ಬೆಂಗಳೂರು: ಕರ್ನಾಟಕಕ್ಕೆ ವಿದೇಶಿ ಹೂಡಿಕೆ ಆಕರ್ಷಿಸಲು ಅಮೆರಿಕದಲ್ಲಿರುವ ಕನ್ನಡಿಗರು ನೆರವಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.
ಅಮೆರಿಕದ ವಾಷಿಂಗ್ಟನ್ನಲ್ಲಿ ಅಮೆರಿಕ ಕನ್ನಡ ಕೂಟಗಳ ಆಗರ (ಅಕ್ಕ) ಶನಿವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ವರ್ಚ್ಯುಯಲ್ ಆಗಿ ಉದ್ಘಾಟಿಸಿ ಮಾತನಾಡಿದ ಅವರು, ‘ಅಮೆರಿಕದಲ್ಲಿರುವ ಉದ್ಯಮಗಳ ಜತೆ ಅಲ್ಲಿನ ಕನ್ನಡಿಗರು ಚರ್ಚಿಸಬೇಕು. ಕರ್ನಾಟಕದಲ್ಲಿ ಹೂಡಿಕೆಗೆ ಇರುವ ಅವಕಾಶಗಳನ್ನು ಮನದಟ್ಟು ಮಾಡಬೇಕು. ಇಲ್ಲಿನ ಸರ್ಕಾರ ಹೂಡಿಕೆದಾರರನ್ನು ಬೆಂಬಲಿಸಲಿದೆ ಎಂಬುದನ್ನು ತಿಳಿಸಬೇಕು’ ಎಂದರು.
ಸಾಮಾನ್ಯ ಕನ್ನಡಿಗನಿಗೂ ಆರ್ಥಿಕ ಶಕ್ತಿ ನೀಡುವುದು ಈಗಿನ ಅಗತ್ಯ. ಅದಕ್ಕೆ ಪೂರಕವಾಗಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗದ ಅವಕಾಶಗಳನ್ನು ಸೃಷ್ಟಿಸಲಾಗುತ್ತಿದೆ. ಕೌಶಲ ತರಬೇತಿಗೆ ಸರ್ಕಾರ ಆದ್ಯತೆ ನೀಡಿದೆ ಎಂದು ಹೇಳಿದರು.
ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್, ಅಕ್ಕ ಅಧ್ಯಕ್ಷ ತುಮಕೂರು ದಯಾನಂದ್, ಉಪಾಧ್ಯಕ್ಷ ಡಾ. ಅಮರನಾಥ್ ತಾವರೆಕೆರೆ ಉಪಸ್ಥಿತರಿದ್ದರು.