ಬೆಂಗಳೂರು: ಈಗ ನಡೆದಿರುವ ಪಿಎಸ್ಐ ಹಗರಣದ ಜೊತೆಗೆ ಸಿದ್ದರಾಮಯ್ಯ ಕಾಲದ ಎಲ್ಲ ಹಗರಣಗಳ ತನಿಖೆಗೆ ಒತ್ತಾಯಿಸಿ ಮುಖ್ಯಮಂತ್ರಿಗೆ ಪತ್ರ ಬರೆಯುತ್ತೇನೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ತಿಳಿಸಿದ್ದರು. ಈ ಕುರಿತು ‘ಪ್ರಜಾವಾಣಿ ವೆಬ್ಸೈಟ್’ ಗುರುವಾರ ವರದಿ ಮಾಡಿತ್ತು.
ಇದನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಕೈಲಾಗದವರು ಮೈ ಪರಚಿಕೊಂಡಂತಿದೆ ಸಚಿವ ಅಶ್ವತ್ಥನಾರಾಯಣ ಸ್ಥಿತಿ’ ಎಂದು ವ್ಯಂಗ್ಯವಾಡಿದೆ.
‘ಹಗರಣಗಳ ಮೂಟೆ ಹೊತ್ತಿರುವ ಬಿಜೆಪಿ ತಮಗೆ ಅಂಟಿರುವ ಕಳಂಕವನ್ನು ಕಾಂಗ್ರೆಸ್ ಕಡೆ ಬೆರಳು ತೋರಿಸಿ ತೊಳೆದುಕೊಳ್ಳುತ್ತೇವೆ ಎಂಬ ಭ್ರಮೆಗೆ ಬಿದ್ದಿದೆ’ ಎಂದು ಟೀಕಿಸಿದೆ.
‘ಸಚಿವರೇ, ನೀವು ಪತ್ರ ಬರೆಯುವುದಿರಲಿ, ಈಗಾಗಲೇ ಪ್ರಧಾನಿ ಕಚೇರಿ ತಲುಪಿದ ಪತ್ರಗಳ ಬಗ್ಗೆ ಮಾತನಾಡಲು ಧೈರ್ಯವಿದೆಯೇ?’ ಎಂದು ಕಾಂಗ್ರೆಸ್ ಪ್ರಶ್ನಿಸಿದ್ದಾರೆ.