ಬೆಂಗಳೂರು: ‘ರಾಜ್ಯದ 150 ಸರ್ಕಾರಿ ಐಟಿಐಗಳನ್ನು ₹ 5 ಸಾವಿರ ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲು ‘ಉದ್ಯೋಗ’ ಎಂಬ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ’ ಎಂದು ಕೌಶಲಾಭಿವೃದ್ಧಿ, ಜೀವನೋಪಾಯ, ಉದ್ಯಮಶೀಲತೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಈ ಉದ್ದೇಶಕ್ಕಾಗಿ ಟಾಟಾ ಟೆಕ್ನಾಲಜೀಸ್ ಸೇರಿ 20 ಖಾಸಗಿ ಕಂಪನಿಗಳ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಸುಮಾರು ₹ 250 ಕೋಟಿ ವೆಚ್ಚದಲ್ಲಿ ಮೂಲಸೌಕರ್ಯ ಒದಗಿಸಲಾಗುತ್ತಿದೆ’ ಎಂದರು.
‘ಐಟಿಐಗಳಲ್ಲಿ 75 ಹಳೆಯ ಲ್ಯಾಬ್ಗಳಿದ್ದು, ಅವುಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಇನ್ನು 75 ಕಡೆ ಲ್ಯಾಬ್ಗಳು ಇಲ್ಲ. ಅಂಥ ಕಡೆ ಲ್ಯಾಬ್ ಸ್ಥಾಪಿಸಲಾಗುವುದು’ ಎಂದು ಮಾಹಿತಿ ನೀಡಿದರು.
ಒಪ್ಪಂದಗಳು: ಐಟಿಐ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುವವರಿಗೆ ಉದ್ಯೋಗ ಕಲ್ಪಿಸಲು ದೊಡ್ಡ ದೊಡ್ಡ ಕೈಗಾರಿಕೆಗಳ ಜತೆ ಕೈಜೋಡಿಸಿ ತರಬೇತಿ ನೀಡಲಾಗುವುದು. ಇದಕ್ಕೆ ಸಂಬಂಧಿಸಿ ಹಲವು ಕಂಪನಿಗಳ ಜತೆ ಮುಖ್ಯಮಂತ್ರಿ ಸಮ್ಮುಖದಲ್ಲಿ ಒಪ್ಪಂದ ಏರ್ಪಡಲಿದೆ’ ಎಂದರು.
ಉದ್ಯೋಗ ಮೇಳ: ‘ಆನ್ಲೈನ್ ಉದ್ಯೋಗ ಮೇಳಗಳನ್ನು ವರ್ಷವಿಡೀ ಹಮ್ಮಿಕೊಳ್ಳಲು ನಿಶ್ಚಯಿಸಲಾಗಿದ್ದು, ಅದಕ್ಕೂ ಮುಖ್ಯಮಂತ್ರಿ ಚಾಲನೆ ನೀಡಲಿದ್ದಾರೆ’ ಎಂದರು.