ಮಳವಳ್ಳಿ: ಪಟ್ಟಣದ ಕೋಟೆ ಬೀದಿಯ ಮನೆಯೊಂದರಲ್ಲಿ ಬಾಡಿಗೆಗೆ ವಾಸವಿದ್ದ ಮುಸ್ಲಿಂ ಕುಟುಂಬವೊಂದು ಮನೆ ಹಿಂದಿನ ಪಾಳುಕಟ್ಟಡದಲ್ಲಿ ಕಂದಕ ತೋಡಿ ಮಾರಕಾಸ್ತ್ರ ಸಂಗ್ರಹಿಸಿದ್ದಾರೆ ಎಂಬ ವದಂತಿ ಮಂಗಳವಾರ ಸ್ಥಳೀ ಯರನ್ನು ಆತಂಕಕ್ಕೆ ದೂಡಿತ್ತು.
ಮಾಲೀಕ ಪವಿತ್ರರಾಜು ಮನೆ ಯಲ್ಲಿದ್ದ ತಸ್ಲೀಂ ಹಾಗೂ ಅವರ ಐವರು ಮಕ್ಕಳು, ಹಿಂಭಾಗದ ಪಾಳು ಕಟ್ಟಡದಲ್ಲೂ ಇರುತ್ತಿದ್ದರು. ‘ಮನೆ ನೋಡಲು ಬಂದಾಗ ಮದ್ಯದ ಬಾಟಲಿ, ಮಾದಕ ವಸ್ತುಗಳ ಪಾಕೆಟ್ಗಳು ಸಿಕ್ಕಿ ದವು. ಅಲ್ಲೇ ಇದ್ದ ಕಂದಕದಲ್ಲಿ ಮಚ್ಚು, ಲಾಂಗು ಪತ್ತೆಯಾದವು’ ಎಂದು ಮಾಲೀಕ ದೂರಿದ್ದಾರೆ.
ಅದಾದ ಕೆಲವೇ ಹೊತ್ತಿನಲ್ಲಿ, ‘ಗುಹೆಯೊಳಗೆ ಶಸ್ತ್ರಾಸ್ತ್ರ ಸಂಗ್ರಹಿಸಿದ್ದಾರೆ. ಮಾದಕ ವಸ್ತು ಸೇವಿಸಿದ್ದಾರೆ’ ಎಂಬ ಕುರಿತ ವಿಡಿಯೊ, ಸುದ್ದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದವು. ನಂತರ ಡಿವೈಎಸ್ಪಿ ನವೀನ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.
‘ಮಾಲೀಕರ ದೂರಿನಲ್ಲಿ ಗೊಂದಲ ವಿದೆ. ಮಾರಕಾಸ್ತ್ರ ಸಂಗ್ರಹ ಕುರಿತ ಮಾಹಿತಿ ಇಲ್ಲ. ಮನೆ ಖಾಲಿ ಮಾಡಿಸಿ ಎಂದಷ್ಟೇ ದೂರು ನೀಡಿದ್ದಾರೆ. ಸ್ಥಳದಲ್ಲಿ ಮಾರಕಾಸ್ತ್ರಗಳು ಪತ್ತೆಯಾಗಿಲ್ಲ. ಆರೇಳು ಅಡಿಯ ಹಳ್ಳವೊಂದು ಕಂಡುಬಂದಿದೆ. ತಸ್ಲೀಂ ಮಾನಸಿಕ ಅಸ್ವಸ್ಥೆಯಾಗಿದ್ದು, ಅವರ ಮಕ್ಕಳನ್ನು ಕರೆದು ವಿಚಾರಣೆ ನಡೆಸಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ತಿಳಿಸಿದರು.