ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಈಶ್ವರಪ್ಪ ವಜಾಕ್ಕೆ ‘ಕೈ’ ಪಟ್ಟು; ರಾಜ್ಯಪಾಲರಿಗೆ ಮನವಿ

ಕ್ರಮ ತೆಗೆದುಕೊಳ್ಳದಿದ್ದರೆ ತೀವ್ರ ಹೋರಾಟ: ಕಾಂಗ್ರೆಸ್‌ ನಾಯಕರ ಎಚ್ಚರಿಕೆ
Last Updated 13 ಏಪ್ರಿಲ್ 2022, 11:32 IST
ಅಕ್ಷರ ಗಾತ್ರ

ಬೆಂಗಳೂರು: ‘ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆಗೆ ನೇರ ಕಾರಣವೆಂಬ ಆರೋಪ ಎದುರಿಸುತ್ತಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಅವರನ್ನು ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟದಿಂದ ವಜಾಗೊಳಿಸಬೇಕು. ಕೆ.ಎಸ್. ಈಶ್ವರಪ್ಪ ಮತ್ತು ಅವರ ಮಿತ್ರರ ಕುಮ್ಮಕ್ಕಿನಿಂದ ಸಂತೋಷ್ ಪಾಟೀಲ ಆತ್ಮಹತ್ಯೆಗೆ ಶರಣಾದ ಬಗ್ಗೆ ಗಮನಹರಿಸಲು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಬೇಕು’ ಎಂದು ಆಗ್ರಹಿಸಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರಿಗೆ ಕಾಂಗ್ರೆಸ್‌ ನಿಯೋಗ ಬುಧವಾರ ಮನವಿ ಸಲ್ಲಿಸಿದೆ.

‘ಈಶ್ವರಪ್ಪ ವಿರುದ್ಧ ಕೊಲೆ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆ, ಹಾಗೂ ಕಾನೂನಿನ ಇತರ ನಿಬಂಧನೆಗಳ ಅಡಿಯಲ್ಲಿ ಶಿಕ್ಷಾರ್ಹ ಕ್ರಿಮಿನಲ್ ಮೊಕದ್ದಮೆಯನ್ನು ತಕ್ಷಣ ದಾಖಲಿಸಬೇಕು. ನ್ಯಾಯ ಮತ್ತು ಸಮಾನತೆಯನ್ನು ಎತ್ತಿಹಿಡಿಯುವ ದೃಷ್ಟಿಯಿಂದ ಈಶ್ವರಪ್ಪ ಅವರನ್ನು ಬಂಧಿಸಬೇಕು’ ಎಂದೂ ಮನವಿಯಲ್ಲಿ ನಿಯೋಗ ಒತ್ತಾಯಿಸಿದೆ.

ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ‘ನಾವೆಲ್ಲರೂ ರಾಜ್ಯಪಾಲರನ್ನು ಭೇಟಿ ಮಾಡಿದ್ದೇವೆ. ರಾಜ್ಯಪಾಲರು ಗುಜರಾತ್‌ಗೆ ಹೊರಟಿದ್ದರು. ಆದರೂ ನಮಗೆ ಸಮಯ ಕೊಟ್ಟಿದ್ದಾರೆ. ಈ ಘಟನೆ ರಾಜ್ಯಕ್ಕೆ ಕಪ್ಪು ಚುಕ್ಕಿ. ಕೇಂದ್ರದ ನಾಯಕರಿಗೆ, ಮುಖ್ಯಮಂತ್ರಿಗೆ ಪತ್ರ ಬರೆದು, ಸಂತೋಷ್‌ ಪಾಟೀಲ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದರು.

‘ಭ್ರಷ್ಟಾಚಾರದ ವಿರುದ್ಧ ವಿಧಾನ ಮಂಡಲ ಅಧಿವೇಶನದಲ್ಲಿ ನಾವು (ಕಾಂಗ್ರೆಸ್‌) ನಿಲುವಳಿ ಸೂಚನೆಗೆ ಕೊಟ್ಟಿದ್ದೆವು. ಆದರೆ, ಚರ್ಚೆಗೆ ಅವಕಾಶ ನೀಡಲಿಲ್ಲ. ಚರ್ಚೆಗೆ ಅವಕಾಶ ನೀಡಿರುತ್ತಿದ್ದರೆ ಈ ಸಾವು ಆಗುತ್ತಿರಲಿಲ್ಲ. ಸಚಿವರ ಹೆಸರು ಬರೆದಿಟ್ಟು ಸಂತೋಷ್‌ ಪಾಟೀಲ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದರು.

‘ನಾನು ಹೆಚ್ಚೇನೂ ಮಾತನಾಡುವುದಿಲ್ಲ. ಎಫ್‌ಐಆರ್‌ ಆಧರಿಸಿ ಸಚಿವರ ಬಂಧನ ಆಗಬೇಕು. ಭ್ರಷ್ಟಾಚಾರದ ಪ್ರಕರಣ ದಾಖಲಾಗಬೇಕು. ಮೊದಲು ಸಚಿವರ ಬಂಧನ ಆಗಬೇಕು. ನನಗೆ ಗೊತ್ತೇ ಇಲ್ಲ ಎಂದು ಸಚಿವರು ಹೇಳಿದ್ದಾರೆ. ಈ ಹೋರಾಟವನ್ನು ಇಲ್ಲಿಗೆ ಬಿಡುವ ಪ್ರಶ್ನೆಯೇ ಇಲ್ಲ. ರಾಜ್ಯದ ಜನರ ಪ್ರಶ್ನೆ. ಎಲ್ಲ ರೀತಿಯ ಹೋರಾಟಗಳಿಗೆ ನಾವು ಸಿದ್ಧ’ ಎಂದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ‘ಇವತ್ತು ನಾನು, ನಮ್ಮ ಪಕ್ಷದ ಅಧ್ಯಕ್ಷ, ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಹರಿಪ್ರಸಾದ್ ಎಲ್ಲರೂ ಸೇರಿ ರಾಜ್ಯಪಾಲರನ್ನು ಭೇಟಿ ಮಾಡಿದ್ದೇವೆ ಮನವಿ ಕೊಟ್ಟಿದ್ದೇವೆ. ಸಂತೋಷ್ ಪಾಟೀಲ ಎಂಬ ಗುತ್ತಿಗೆದಾರ, ಬಿಜೆಪಿ ಕಾರ್ಯಕರ್ತ. ಬೆಳಗಾವಿ ಗ್ರಾಮಾಂತರ ಕ್ಷೇತ್ರಕ್ಕೆ ಸೇರಿದವನು. ಹಳ್ಳಿ ರಸ್ತೆಗಳನ್ನು ಮಾಡಲು ಸಚಿವರು ಹೇಳಿದರು ಎಂದು ಕಾಮಗಾರಿ ಮಾಡಿದ್ದ. ಆದರೆ, ಕಾರ್ಯಾದೇಶ ಕೊಡಲು ಹಾಗೂ ಬಿಲ್ ಬಿಡುಗಡೆ ಮಾಡಲು ಶೇ 40 ಕಮಿಷನ್ ಬೇಡಿಕೆ ಇಟ್ಟಿದ್ದಾರೆ. ಅವನಿಗೆ ತಿರುಗಿ ತಿರುಗಿ ಸಾಕಾಗಿದೆ. ಏನೇ ಮಾಡಿದರೂ ಶೇ 40 ಕಮಿಷನ್ ಇಲ್ಲದೇ ಕಾರ್ಯಾದೇಶ ಕೊಡಲ್ಲ, ಬಿಲ್ ಬಿಡುಗಡೆ ಮಾಡಲ್ಲ ಅಂದಿದ್ದಾರೆ. ಹೀಗಾಗಿ, ಪ್ರಧಾನಿ, ಕೇಂದ್ರ ಸಚಿವರು ಹಾಗೂ ಆರೆಸ್ಸೆಸ್‌ನ ಬಿ.ಎಲ್. ಸಂತೋಷ್‌ಗೆ ಸಂತೋಷ್ ಪಾಟೀಲ್ ದೂರು ಕೊಟ್ಟಿದಾರೆ. ಗುತ್ತಿಗೆದಾರರ ಸಂಘದ ಕೆಂಪಣ್ಣ ಕೂಡ ಶೇ 40 ಸರ್ಕಾರ ಎಂದು ಆರೋಪಿಸಿದ್ದರು. ಸರ್ಕಾರದ ಎಲ್ಲ ಇಲಾಖೆಗಳಲ್ಲೂ ಶೇ 40 ಕಮಿಷನ್ ಇಲ್ಲದೇ ಯಾವುದೇ ಕೆಲಸ ಆಗುತ್ತಿಲ್ಲ‘ ಎಂದು ದೂರಿದರು.

‘ಇಷ್ಟೆಲ್ಲ ನಡೆದರೂ ಪ್ರಧಾನಿ, ಮುಖ್ಯಮಂತ್ರಿ ಏನೂ ಕ್ರಮ ಕೈಗೊಳ್ಳಲಿಲ್ಲ. ಕೊನೆಗೆ ಪಾಪ ಸಂತೋಷ್ ಪಾಟೀಲ ಆತ್ಮಹತ್ಯೆ ಮಾಡಿಕೊಂಡ. ಇಷ್ಟು ಭ್ರಷ್ಟಾಚಾರದ ಸರ್ಕಾರ ಇತಿಹಾಸದಲ್ಲೇ ಕಂಡಿಲ್ಲ. ಸಂತೋಷ್ ಪಾಟೀಲ ಉಡುಪಿಗೆ ಹೋಗಿದ್ದೇ ಮುಖ್ಯಮಂತ್ರಿಯನ್ನು ಭೇಟಿ ಮಾಡಲು. ಕೊನೆಗೆ ಅಲ್ಲೇ ಮರಣಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನ್ನ ಸಾವಿಗೆ ಈಶ್ವರಪ್ಪ ನೇರ ಕಾರಣ ಎಂದು ಮರಣಪತ್ರದಲ್ಲಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭ್ರಷ್ಟಾಷಾರ ತಡೆ ಕಾಯ್ದೆಯ ಅಡಿಯಲ್ಲಿ ಈಶ್ವರಪ್ಪ ವಿರುದ್ಧ ಪ್ರಕರಣ ದಾಖಲಿಸಬೇಕು‘ ಎಂದು ಆಗ್ರಹಿಸಿದರು.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ, ಪಕ್ಷದ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್, ಈಶ್ವರ ಖಂಡ್ರೆ, ದಿನೇಶ್‌ ಗುಮಡೂರಾವ್‌, ಕೆ.ಜೆ. ಜಾರ್ಜ್‌, ಡಿ.ಕೆ. ಸುರೇಶ್‌ ಇದ್ದರು.

ರಾಜ್ಯಪಾಲರಿಗೆ ಕಾಂಗ್ರೆಸ್‌ ನಿಯೋಗ ಸಲ್ಲಿಸಿದ ಮನವಿಯ ಪೂರ್ಣ ರೂಪ:

‘ನಾವು ತಮ್ಮಲ್ಲಿ ಗೌರವಪೂರ್ವಕವಾಗಿ ಮನವಿ ಮಾಡುವುದೇನೆಂದರೆ, ಬೆಳಗಾವಿ ಜಿಲ್ಲೆಯ ಸಂತೋಷ್‌ ಪಾಟೀಲ ಒಬ್ಬ ಗುತ್ತಿಗೆದಾರ ಮತ್ತು ಹಿಂದೂ ವಾಹಿನಿಯ ರಾಷ್ಟ್ರೀಯ ಕಾರ್ಯದರ್ಶಿ. ಅವರು ಉಡುಪಿಯ ಶಾಂಭವಿ ಹೊಟೇಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ತಮ್ಮ ಸಾವಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ನೇರ ಹೊಣೆ ಎಂದು ಸಾಮಾಜಿಕ ಜಾಲತಾಣದ ಮೂಲಕ ಸಂದೇಶ ರವಾನಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ, ಸಚಿವರು ಆತ್ಮಹತ್ಯೆಗೆ ನೇರ ಹೊಣೆಯಾಗಿದ್ದು ಅವರಿಗೆ ತಕ್ಕ ಶಿಕ್ಷೆ ಆಗಬೇಕು. ಅಲ್ಲದೆ, ಪ್ರಧಾನಿ, ಮುಖ್ಯಮಂತ್ರಿ ಮತ್ತು ಇತರ ಹಿರಿಯ ನಾಯಕರಲ್ಲಿ ತಮ್ಮ ಪತ್ನಿ ಮತ್ತು ಮಗುವಿಗೆ ಸಹಾಯ ಮಾಡುವಂತೆ ಸಂತೋಷ್‌ ಮನವಿ ಮಾಡಿದ್ದಾರೆಂದು ಹೇಳಲಾದ ವಾಟ್ಸ್‌ ಆ್ಯಪ್‌ ಸಂದೇಶದ ಪ್ರತಿಯನ್ನು ಇಲ್ಲಿ ಲಗತ್ತಿಸಲಾಗಿದೆ.

ವಾಟ್ಸ್‌ ಆ್ಯಪ್‌ ಸಂದೇಶದ ಮಾಹಿತಿ ಆಧಾರ, ಮಾರ್ಚ್‌ 11ರಂದು ಪ್ರಧಾನಿಗೆ ಮತ್ತು ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವರಿಗೆ ಸಂತೋಷ ಪಾಟೀಲ ಬರೆದ ಪತ್ರದ ಪ್ರಕಾರ, ಈಶ್ವರಪ್ಪ ಅವರ ಮೌಖಿಕ ಸೂಚನೆಯ ಮೇರೆಗೆ, ಅಂದರೆ ಸಚಿವರಿಂದಾಗಲಿ ಅಥವಾ ಸಂಬಂಧಿತ ಅಧಿಕಾರಿಗಳಿಂದ ಕೆಲಸದ ಆದೇಶ ಪ್ರತಿ ಪಡೆಯದೆ ಬೆಳಗಾವಿ ಜಿಲ್ಲೆಯಲ್ಲಿ ₹ 4 ಕೋಟಿಗೂ ಹೆಚ್ಚು ಮೌಲ್ಯದ 108 ಸರ್ಕಾರಿ ಗುತ್ತಿಗೆ ಕಾಮಗಾರಿಗಳನ್ನು ಮಾಡಿದ್ದಾರೆ. ಈ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಿದ ನಂತರವೂ ಅವರಿಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಕೆಲಸದ ಆದೇಶವಾಗಲೀ ಅಥವಾ ಕಾಮಗಾರಿಗಳಿಗೆ ಅನುದಾನ ಪಾವತಿಯಾಗಿಲ್ಲ. ಹಣ ಬಿಡುಗಡೆ ಮತ್ತು ಕೆಲಸದ ಆದೇಶಕ್ಕಾಗಿ ಗುತ್ತಿಗೆದಾರರು ಸಚಿವರು ಮತ್ತು ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಅವರು ಮೊದಲು ಕಮಿಷನ್ ಪಾವತಿಸಬೇಕು ನಂತರ ಮಾತ್ರ ಕೆಲಸದ ಆದೇಶ ಮತ್ತು ಹಣ ಬಿಡುಗಡೆ ಮಾಡಲಾಗುವುದು ಎಂದು ಅವರಿಂದ ಕಮಿಷನ್‌ಗಾಗಿ ಒತ್ತಾಯಿಸುತ್ತಿದ್ದರು. ಈ 108 ಕಾಮಗಾರಿಗಳನ್ನು ಕೈಗೊಳ್ಳಲು ಖಾಸಗಿ ಲೇವಾದೇವಿದಾರರಿಂದ ಅಧಿಕ ಬಡ್ಡಿಗೆ ಸಾಲ ಪಡೆದಿದ್ದರು. ಕಾಮಗಾರಿ ಪೂರ್ಣಗೊಂಡ ನಂತರ ಸಂಬಂಧಪಟ್ಟ ಅಧಿಕಾರಿಗಳಿಂದ ಹಣ ಬಿಡುಗಡೆ ಮಾಡುವುದಾಗಿ ಈಶ್ವರಪ್ಪ ಭರವಸೆ ನೀಡಿದ್ದರು. ಆದರೆ, ಈ ಕಾಮಗಾರಿಗಳು ಪೂರ್ಣಗೊಂಡ ನಂತರವೂ ಅವರ ನೈಜ ಮನವಿಗೆ ಸಚಿವರಾಗಲಿ ಅಥವಾ ಅಧಿಕಾರಿಗಳಾಗಲಿ ಸ್ಪಂದಿಸಿಲ್ಲ.

ಬೇರೆ ದಾರಿಯಿಲ್ಲದೆ, ಅವರು ಮಾರ್ಚ್‌ 11ರಂದು ಪ್ರಧಾನಿಗೆ ಮತ್ತು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಾದ ಗಿರಿರಾಜ್ ಸಿಂಗ್ ಅವರಿಗೆ ಪತ್ರ ಬರೆದು ತಮ್ಮ ಕರುಣಾಜನಕ ಸ್ಥಿತಿಯನ್ನು ವಿವರಿಸಿದರು. ಕರ್ನಾಟಕ ರಾಜ್ಯ ಆರ್‌ಡಿಪಿಆರ್ ಸಚಿವರಿಗೆ ಅಥವಾ ಕರ್ನಾಟಕ ಸರ್ಕಾರ ಆರ್‌ಡಿಪಿಆರ್‌ನ ಪ್ರಧಾನ ಕಾರ್ಯದರ್ಶಿಗೆ ಬಿಲ್‌ ಬಿಡುಗಡೆ ಮಾಡಲು ಮತ್ತು ತಕ್ಷಣವೇ ಕೆಲಸದ ಆದೇಶಗಳನ್ನು ನೀಡುವಂತೆ ನಿರ್ದೇಶಿಸಬೇಕು. ಇಲ್ಲದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದರು. ಮಾರ್ಚ್‌ 11ರಂದು ತಿಳಿಸಲಾದ ಪತ್ರದ ಪ್ರತಿಯನ್ನು ಇಲ್ಲಿ ಲಗತ್ತಿಸಲಾಗಿದೆ.

ಈ ಪತ್ರದ ಹೊರತಾಗಿ ಅವರು ಬಿಜೆಪಿ ರಾಷ್ಟ್ರೀಯ ನಾಯಕ ಅರುಣ್ ಸಿಂಗ್ ಮತ್ತು ಬಿ.ಎಲ್. ಸಂತೋಷ್ ಅವರನ್ನು ಸಹಾಯಕ್ಕಾಗಿ ಸಂಪರ್ಕಿಸಿದ್ದರು. ಈ ನಿಟ್ಟಿನಲ್ಲಿ ಬಿಜೆಪಿ ನಾಯಕರು ಅವರಿಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಕುರಿತು ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಪ್ರಧಾನಿ ಮತ್ತು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಿಗೆ ಪತ್ರಗಳನ್ನು ಬರೆದಿದ್ದರೂ ಮತ್ತು ಬಿಜೆಪಿ ನಾಯಕರ ಭರವಸೆಗಳ ಹೊರತಾಗಿಯೂ ಅವರಿಗೆ ಬಿಲ್ ಪಾವತಿ ಮಾಡಲಾಗಿಲ್ಲ. ಅವರು ಸಾಲದ ರೂಪದಲ್ಲಿ ಪಡೆದ ಹಣದ ಅಸಲು ಮತ್ತು ಬಡ್ಡಿಯನ್ನು ಮರುಪಾವತಿಸುವ ಸ್ಥಿತಿಯಲ್ಲಿರಲಿಲ್ಲ. ಸಾಕಷ್ಟು ಒತ್ತಡಗಳಿಂದಾಗಿ ಅವರು ಮತ್ತು ಅವರ ಸ್ನೇಹಿತರು ಉಡುಪಿಗೆ ಹೋಗಿ ಶಾಂಭವಿ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದಾರೆ. ಈ ವೇಳೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬಗ್ಗೆ ವಾಟ್ಸ್ ಆ್ಯಪ್‌ ಸಂದೇಶ ರವಾನಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ದುರಂತ ಸಾವಿಗೆ ಈಶ್ವರಪ್ಪ ಅವರೇ ನೇರ ಹೊಣೆಯಾಗಿದ್ದು, ಅವರಿಗೆ ಶಿಕ್ಷೆಯಾಗಬೇಕು. ಈ ವಾಟ್ಸ್‌ ಆ್ಯಪ್‌ ಸಂದೇಶವು ಕಾನೂನಿನ ನಿಬಂಧನೆಗಳ ಪ್ರಕಾರ ಸತ್ತವರ ಮರಣಪತ್ರ ಹೊರತು ಬೇರೇನೂ ಅಲ್ಲ. ಮರಣಪತ್ರದ ಪ್ರಕಾರ ಈಶ್ವರಪ್ಪ ಮತ್ತು ಅವರ ಸಹಚರರು ಎಸಗಿದ ನಿರಂತರ ಕಿರುಕುಳ ಮತ್ತು ಕ್ರೌರ್ಯವು ಆತ್ಮಹತ್ಯೆಗೆ ಪ್ರಚೋದನೆಯಾಗಿದೆ.

ಒಬ್ಬ ವ್ಯಕ್ತಿಯ ಜೀವ ಅಮೂಲ್ಯವಾದುದು. ಅದಕ್ಕಾಗಿಯೇ ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಯಾವುದೇ ರೀತಿಯಲ್ಲಿ ವೈಯಕ್ತಿಕ ಸ್ವಾತಂತ್ರ್ಯದ ಅತಿಕ್ರಮಣವನ್ನು ತಡೆಗಟ್ಟಲು ಬದುಕುವ ಮತ್ತು ಸ್ವಾತಂತ್ರ್ಯದ ಹಕ್ಕು ಕಲ್ಪಿಸಲಾಗಿದೆ. ಒಬ್ಬ ವ್ಯಕ್ತಿಗೆ ಅಗತ್ಯವಾದ ಎಲ್ಲ ಮಾನವ ಹಕ್ಕುಗಳನ್ನು ನೀಡಲಾಗಿದೆ. ಅನುಚ್ಛೇದ-21 ರಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಮಾನವ ಹಕ್ಕುಗಳನ್ನು ಸಂರಕ್ಷಿಸಲು ಸಾಂವಿಧಾನಿಕ ಆಜ್ಞೆಯಾಗಿದೆ.ಮೃತ ಸಂತೋಷ್ ಪಾಟೀಲ ಪ್ರಕರಣದಲ್ಲಿ ಈಶ್ವರಪ್ಪ ಅವರು ಈ ಕಾನೂನು ಉಲ್ಲಂಘಿಸಿದ್ದಾರೆ.

ದೇಶದ ಹಿತಾಸಕ್ತಿ ಕಾಪಾಡಲು ನಾನು ಚೌಕಿದಾರ್ ಮತ್ತು ‘ನಾ ಖಾವೂಂಗಾ, ನಾ ಖಾನೆ ದುಂಗಾ’ (ನಾನು ತಿನ್ನುವುದಿಲ್ಲ ಮತ್ತು ಇತರರಿಗೆ ಲಂಚ ತಿನ್ನಲು ಬಿಡುವುದಿಲ್ಲ) ಎಂದು ಹೇಳಿಕೊಳ್ಳುತ್ತಿರುವ ಪ್ರಧಾನಿ ಮತ್ತು ಸಂಬಂಧಪಟ್ಟವರು, ಕೇಂದ್ರ ಸಚಿವರು ಮತ್ತು ಬಿಜೆಪಿ ರಾಷ್ಟ್ರೀಯ ನಾಯಕರು ಮೃತ ವ್ಯಕ್ತಿಗೆ ಪರಿಹಾರ ನೀಡಲು ವಿಫಲರಾಗಿದ್ದಾರೆ ಹಾಗೂ ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತಡೆಗಟ್ಟಲು ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಈ ಘಟನೆಯು ಕರ್ನಾಟಕದ ಭ್ರಷ್ಟಾಚಾರವು ಹದ್ದು ಮೀರಿರುವುದಕ್ಕೆ ಸ್ಪಷ್ಟ ನಿದರ್ಶನ. ಕೆ.ಎಸ್. ಈಶ್ವರಪ್ಪ ಮತ್ತು ಅವರ ಸಂಗಡಿಗರನ್ನು ಅತಿಯಾಗಿ ನಂಬಿ ₹ 4 ಕೋಟಿ ವೆಚ್ಚದಲ್ಲಿ 108 ಕಾಮಗಾರಿಗಳನ್ನು ಕಾಮಗಾರಿ ಆದೇಶವಿಲ್ಲದೆ ನಿರ್ವಹಿಸಿದ ಅಮಾಯಕನೊಬ್ಬ ವಿಷಮ ಪರಿಸ್ಥಿತಿಗೆ ಬಲಿಯಾಗಿದ್ದಾನೆ. ಈಶ್ವರಪ್ಪ ಮತ್ತು ಅವರ ಮಿತ್ರರು ಸಂತೋಷ್ ಪಾಟೀಲ ಅವರ ಆತ್ಮಹತ್ಯೆಗೆ ಪ್ರಮುಖ ಕಾರಣರಾಗಿದ್ದಾರೆ. ಇದು ಐಪಿಸಿಯ ಸೆಕ್ಷನ್ -306 ಮತ್ತು ಭ್ರಷ್ಟಾಚಾರ ತಡೆ ಕಾಯಿದೆಯ ಸೆಕ್ಷನ್ -13 ರ ಅಡಿಯಲ್ಲಿ ಮರಣದಂಡನೆ ವಿಧಿಸಬಹುದಾದ ಅಪರಾಧ. ಮಾಡಿದ ಕೆಲಸಗಳ ಹಣ ಬಿಡುಗಡೆಗೆ ಕಮಿಷನ್ ಕೇಳುವುದು ಶಿಕ್ಷಾರ್ಹ ಅಪರಾಧವಲ್ಲದೆ ಬೇರೇನೂ ಅಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT