ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ನಾಯಕ ಮುದ್ದಹನುಮೇಗೌಡ ಮತ್ತು ನಟ ಶಶಿಕುಮಾರ್ ಬಿಜೆಪಿಗೆ ಸೇರ್ಪಡೆ

Last Updated 3 ನವೆಂಬರ್ 2022, 7:37 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್ ನಾಯಕ, ಮಾಜಿ ಸಂಸದ ಮುದ್ದಹನುಮೇಗೌಡ, ನಟ ಶಶಿಕುಮಾರ್, ನಿವೃತ್ತ ಐಎಎಸ್ ಅಧಿಕಾರಿ ಅನಿಲ್ ಕುಮಾರ್ ಸೇರಿ ಕಾಂಗ್ರೆಸ್‌ನ ಹಲವು ನಾಯಕರು ಗುರುವಾರ ಬಿಜೆಪಿ ಸೇರಿದರು.

ಪಕ್ಷದ ರಾಜ್ಯ ಘಟಕದ ಕಚೇರಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಮ್ಮುಖದಲ್ಲಿ ಸೇರ್ಪಡೆಗೊಂಡರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ನ ಎಚ್.ಡಿ.ದೇವೇಗೌಡರನ್ನು ಜೆಡಿಎಸ್- ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಲು, ಮುದ್ದಹನುಮೇಗೌಡರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ವಿಧಾನಪರಿಷತ್ ಗೆ ಅವಕಾಶ ನೀಡುವ ಭರವಸೆ ನೀಡಲಾಗಿತ್ತು. ಆದರೆ, ವಿಧಾನಪರಿಷತ್ತಿಗೆ ಅವಕಾಶ ನೀಡದ ಕಾರಣ ಅವರು ಮುನಿಸಿಕೊಂಡಿದ್ದರು. ಕುಣಿಗಲ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದ ಅವರಿಗೆ ಕಾಂಗ್ರೆಸ್ ಟಿಕೆಟ್ ಭರವಸೆ ನೀಡಿಲ್ಲ. ಅಲ್ಲಿ ಈಗ ಡಿ.ಕೆ.ಶಿವಕುಮಾರ್ ಅವರ ಸಂಬಂಧಿ ಡಾ.ರಂಗನಾಥ್ ಶಾಸಕರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಬಿಜೆಪಿ ಸೇರಿದ್ದಾರೆ.

ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜಕಾರಣದಲ್ಲಿ ಈಗ ಸಮೀಕರಣ ಆಗುತ್ತಿದೆ. ಧ್ರುವೀಕರಣ ಎಂದರೆ ಎರಡು ದಿಕ್ಕುಗಳಿಗೆ ಸೇರುವುದು. ಈಗ ಇನ್ನೊಂದು ದಿಕ್ಕು ಇಲ್ಲ. ಇರುವುದು ಬಿಜೆಪಿ ಮಾತ್ರ. ಗುರುತ್ವಾಕರ್ಷಣೆ ಬಲ ಇರುವ ಬಿಜೆಪಿಯತ್ತ ಎಲ್ಲರೂ ಸೇರುತ್ತಿದ್ದಾರೆ ಎಂದರು.

ಪಕ್ಷವನ್ನು ಸೇರಿದ ಎಲ್ಲರನ್ನೂ ಸಮಾನ ಪ್ರೀತಿ, ವಿಶ್ವಾಸ ಮತ್ತು ಗೌರವದಿಂದ ನೋಡೊಕೊಳ್ಳುತ್ತೇವೆ. ಪಕ್ಷದಲ್ಲಿ ಸ್ಥಾನಮಾನವನ್ನು ವರಿಷ್ಠರು ತೀರ್ಮಾನ ಮಾಡುತ್ತಾರೆ. ಚುನಾವಣೆ ಸಂದರ್ಭದಲ್ಲಿ ಟಿಕೆಟ್ ಅನ್ನು ಸಂಸದೀಯ ಮಂಡಳಿ ತೀರ್ಮಾನ ಮಾಡುತ್ತದೆ ಎಂದು ಸೂಚ್ಯವಾಗಿ ಹೇಳಿದರು.

ಮಾಜಿ ಸಂಸದ ಮುದ್ದ ಹನುಮೇಗೌಡ ಮಾತನಾಡಿ, ಹಿಂದೆ ಸಂಸದನಾಗಿ ಪ್ರಧಾನಿ ಮೋದಿ ಅವರ ಕೆಲಸಗಳನ್ನು ಹತ್ತಿರದಿಂದ ನೋಡಿದ್ದೇನೆ. ಪ್ರಧಾನಿ ಹುದ್ದೆಗೆ ಘನತೆ, ಗೌರವ ತಂದಿದ್ದಾರೆ. ಸದಾ ದೇಶದ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸುವ ಅವರು, ಭಾರತದ ಹಿರಿಮೆಯನ್ನು ವಿಶ್ವದಲ್ಲಿ ಅತಿ ಎತ್ತರಕ್ಕೆ ಒಯ್ದಿದ್ದಾರೆಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT