ಬೆಂಗಳೂರು: ‘ಮೋಟಮ್ಮ ಇಷ್ಟು ಬೇಗ ಯಾಕೆ ಆತ್ಮಕಥನ ಬರೆದರೊ ಗೊತ್ತಿಲ್ಲ. ಅವರಿನ್ನೂ ಸಾಧಿಸಬೇಕಾದ್ದು ಬಹಳಷ್ಟಿದೆ’ ಎಂದು ಬಿಜೆಪಿ ನಾಯಕ ಎಸ್.ಎಂ.ಕೃಷ್ಣ ಅಭಿಪ್ರಾಯಪಟ್ಟರು.
ಕಾಂಗ್ರೆಸ್ ನಾಯಕಿ ಮೋಟಮ್ಮ ಅವರ, ‘ಬಿದಿರು ನೀನ್ಯಾರಿಗಲ್ಲದವಳು‘ ಆತ್ಮಕಥನವನ್ನು ಶನಿವಾರ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ನಾನು ಮುಖ್ಯಮಂತ್ರಿ ಆಗಿದ್ದ ವೇಳೆನನ್ನ ಮಂತ್ರಿಮಂಡಲದಲ್ಲಿ ಸಚಿವೆಯಾಗಿದ್ದ ಮೋಟಮ್ಮ ಸ್ತ್ರೀಶಕ್ತಿ ಸಂಘಗಳ ಮೂಲಕ ಮಹಿಳೆಯರ ಆರ್ಥಿಕ ಬದುಕಿಗೆ ಭದ್ರಬುನಾದಿ ದೊರೆಯುವಂತೆ ನೋಡಿಕೊಂಡರು. ಇವತ್ತು ಅವರು ತಮ್ಮ ಆತ್ಮಕಥನದ ಮೂಲಕ ರಾಜ್ಯ ರಾಜಕಾರಣದ ಭೂತ ಮತ್ತು ವರ್ತಮಾನಗಳ ಕೈಪಿಡಿಯನ್ನು ನಮ್ಮ ಮುಂದಿರಿಸಿದ್ದಾರೆ’ ಎಂದರು.
‘ದೇಶದಲ್ಲಿ 1977–1979ರ ರಾಜಕೀಯ ಕಾಲಘಟ್ಟದ ಸನ್ನಿವೇಶದಲ್ಲಿ, ಚಿಕ್ಕಮಗಳೂರಿನಂತಹ ಅತಿಸೂಕ್ಷ್ಮ ಕ್ಷೇತ್ರದಿಂದ ಮೋಟಮ್ಮ ರಾಜಕೀಯ ಜೀವನ ಆರಂಭಿಸಿದರು.ಅದು ಇಂದಿರಾಗಾಂಧಿ– ದೇವರಾಜ ಅರಸು ದೂರದೂರವಿದ್ದ ಕಾಲ. ಇಬ್ಬರ ಜೊತೆಗೆ ಸಮಾನ ನಿಕಟತೆ ಹೊಂದಿದ್ದು, ಯಾರನ್ನೂ ದೂಷಿಸದೆ ಮೋಟಮ್ಮ ರಾಜಕೀಯ ಮಾಡಿದವರು. ಅವರಿಗೆ ಉತ್ತಮ ಭವಿಷ್ಯವಿದೆ’ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ‘ಉತ್ತಮ ಅಥ್ಲೀಟ್ ಕೂಡಾ ಆದ ಮೋಟಮ್ಮ ರಾಜಕಾರಣಿಯಾಗಿ ರಾಜ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿ ದ್ದಾರೆ. ಮೋಟಮ್ಮನವರ ಸಾಮಾಜಿಕ ಮತ್ತು ರಾಜಕೀಯ ಬದುಕು ಇನ್ನಷ್ಟು ಉತ್ತಮವಾಗಲಿ’ ಎಂದು ಹಾರೈಸಿದರು.
ಕೃತಿ ಕುರಿತಂತೆ ಪತ್ರಕರ್ತ ದಿನೇಶ್ ಅಮಿನ್ ಮಟ್ಟು, 'ಪುಸ್ತಕದಲ್ಲಿ ಸುಳ್ಳುಗಳಿಲ್ಲ.ನಮ್ಮಲ್ಲಿ ಮಹಿಳೆಯರು ಆತ್ಮಕಥನ ಬರೆಯುವುದೇ ಕಡಿಮೆ. ಆದರೆ, ಮೋಟಮ್ಮ ಅನೇಕ ಸತ್ಯಗಳನ್ನು ಹೇಳದೇ ಉಳಿಸಿಕೊಂಡಿದ್ದಾರೆ. ಈ ಮೂಲಕ ಪುರುಷರ ಮಾನ ಕಾಪಾಡಿದ್ದಾರೆ. ಮಹಿಳೆಯರು ತಮ್ಮ ಆತ್ಮಕಥನಗಳಲ್ಲಿ ಎಲ್ಲವನ್ನೂ ಹೇಳಿದರೆ ಪರಿಸ್ಥಿತಿ ಹೇಗಿರುತ್ತಿತ್ತು ಎಂದು ಊಹಿಸಿಕೊಳ್ಳಬಹುದು' ಎಂದರು.
ನಿವೃತ್ತ ಪ್ರಾಧ್ಯಾಪಕ ಹಿ.ಶಿ.ರಾಮಚಂದ್ರೇಗೌಡ, ಕಾಂಗ್ರೆಸ್ ಮುಖಂಡರಾದ ವಿ.ಆರ್.ಸುದರ್ಶನ್, ಮಾರ್ಗರೇಟ್ ಆಳ್ವ, ಬಿ.ಎಲ್.ಶಂಕರ್, ವಿಕಾಸ ಪ್ರಕಾಶನದ ಆರ್.ಪೂರ್ಣಿಮಾ, ಆತ್ಮಕಥನದ ನಿರೂಪಕ ವೀರಣ್ಣ ಕಮ್ಮಾರ ಇದ್ದರು.
ಆತ್ಮಕಥನ: ಬಿದಿರು ನೀನ್ಯಾರಿಗಲ್ಲದವಳು ಬೆಲೆ: ₹ 400 ಪ್ರಕಾಶಕರು: ವಿಕಾಸ ಪ್ರಕಾಶನ, ಬೆಂಗಳೂರು