ಬೆಂಗಳೂರು: ಕಾಂಗ್ರೆಸ್ನ ಒಕ್ಕಲಿಗ ಸಮುದಾಯದ ನಾಯಕರು ಬುಧವಾರ ರಾತ್ರಿ ಸಭೆ ಸೇರಿದ ಬೆನ್ನಲ್ಲೇ, ಪಕ್ಷದಲ್ಲಿ ಸಕ್ರಿಯರಾಗಿರುವ ಲಿಂಗಾಯತ ಸಮುದಾಯದ ಎರಡನೆಯ ಹಂತದ ನಾಯಕರು ಗುರುವಾರ ಸಭೆ ನಡೆಸಿದ್ದಾರೆ.
ಕಾಂಗ್ರೆಸ್ ಯುವ ನಾಯಕ ಬಸವನಗೌಡ ಬಾದರ್ಲಿ ನೇತೃತ್ವದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯರು, ಯುವ ಮುಖಂಡರು ಭಾಗವಹಿಸಿದ್ದರು.
ಪಕ್ಷದಲ್ಲಿ ಹುದ್ದೆ ನೀಡುವಾಗ, ಚುನಾವಣೆ ತಯಾರಿ ಹಾಗೂ ಸಂಘಟನೆಯ ವಿಚಾರದಲ್ಲಿ ಕಡೆಗಣಿಸಲಾಗುತ್ತಿದೆ. ಮೂರ್ನಾಲ್ಕು ಹಿರಿಯ ಲಿಂಗಾಯತ ನಾಯಕರನ್ನು ಬಿಟ್ಟರೆ ಉಳಿದವರಿಗೆ ಮನ್ನಣೆ ಸಿಗುತ್ತಿಲ್ಲ. ಈ ಬಗ್ಗೆ ವರಿಷ್ಠರ ಗಮನ ಸೆಳೆಯುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.
ಕಾಂಗ್ರೆಸ್ಗೆ ವೀರಶೈವ ಲಿಂಗಾಯತ ಸಮುದಾಯದ ಮತಗಳನ್ನು ಸೆಳೆಯಲು ಕಾರ್ಯತಂತ್ರ ರೂಪಿಸುವುದು, ಈ ಬಗ್ಗೆ ಮಠಾಧೀಶರ ಮನವೊಲಿಸುವುದು, ಎರಡನೇ ಹಂತದ ನಾಯಕರಿಗೆ ಪಕ್ಷದಲ್ಲಿ ಪ್ರಾತಿನಿಧ್ಯ ನೀಡುವ ಜೊತೆಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಪಡೆಯುವುದು, ಕೆಪಿಸಿಸಿ ಮತ್ತು ಎಐಸಿಸಿ ಮಟ್ಟದಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯುವಾಗ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವುದು, ಎಂಬ ವಿಷಯಗಳ ಕುರಿತು ಚರ್ಚೆ ನಡೆಯಿತು.
ಸಭೆ ಬಳಿಕ ಮಾತನಾಡಿದ ಬಾದರ್ಲಿ, 'ಕಾಂಗ್ರೆಸ್ ನಲ್ಲಿರುವ ವೀರಶೈವ ಲಿಂಗಾಯತ ನಾಯಕರ ಸಭೆ ಮಾಡಿದ್ದೇವೆ. ಪಕ್ಷಕ್ಕೆ ವೀರಶೈವ ಲಿಂಗಾಯತರನ್ನು ಸೆಳೆಯುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಬಗ್ಗೆ ಚರ್ಚೆ ಮಾಡಿದ್ದೇವೆ' ಎಂದರು. ನಾಗರಾಜ್ ಛಬ್ಬಿ ಮಾತನಾಡಿದರು.