ದಾವಣಗೆರೆ: ‘ಕಾಂಗ್ರೆಸ್ನಲ್ಲಿ ಒಂದು ಮನೆಗೆ ಒಂದೇ ಟಿಕೆಟ್ ಎಂಬ ನಿಯಮ ನಮ್ಮ ಮನೆಗೆ ಅನ್ವಯವಾಗುವುದಿಲ್ಲ. ಗೆಲ್ಲುವವರು ಬೇಕು ಅಷ್ಟೇ. ಕೇಳಿದರೆ ನಮ್ಮ ಮನೆಯಲ್ಲೇ ನಾಲ್ವರಿಗೆ ಟಿಕೆಟ್ ಕೊಡುತ್ತಾರೆ’ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.
‘ನಾನು ಮುಂದಿನ ಚುನಾವಣೆಯಲ್ಲೂ ಸ್ಪರ್ಧಿಸುತ್ತೇನೆ. ಮುಖ್ಯಮಂತ್ರಿ ಆಗುತ್ತೇನೋ ಇಲ್ಲವೋ ಎಂಬುದು ಗೊತ್ತಿಲ್ಲ. ಬೇಕಿದ್ದರೆ ನೀವು ಈ ಬಗ್ಗೆ ಕೋಡಿಮಠದ ಸ್ವಾಮೀಜಿಯವರ ಬಳಿ ಭವಿಷ್ಯ ಕೇಳಬಹುದು’ ಎಂದು ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
‘ಶಾಸಕ ಜಗದೀಶ ಶೆಟ್ಟರ್ ಅವರು ನಮ್ಮ ಮನೆಯ ಮದುವೆಗೆ ಬಂದಿದ್ದರಲ್ಲಿ ತಪ್ಪೇನು, ನನ್ನ ಮನೆ ರಾಜಕೀಯ ಶಕ್ತಿ ಕೇಂದ್ರ ಆಗಬಾರದೇಕೆ’ ಎಂದು ಪ್ರಶ್ನಿಸಿದ ಅವರು, ‘ನಾವೆಲ್ಲ ವೀರಶೈವ ಲಿಂಗಾಯತರು’ ಎಂದುಸ್ಪಷ್ಟಪಡಿಸಿದರು.