ಬೆಂಗಳೂರು: ಚಿತ್ರದುರ್ಗದಲ್ಲಿ ಜನವರಿ 8ರಂದು ಎಸ್ಸಿ–ಎಸ್ಟಿ ಏಕತಾ ಸಮಾವೇಶ ಹಮ್ಮಿಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ. ಈ ಸಮಾವೇಶಕ್ಕೂ ಮೊದಲು ಸ್ಥಳೀಯವಾಗಿ ಜಾಗೃತಿ ಸಭೆಗಳನ್ನು ಹಮ್ಮಿಕೊಳ್ಳಲು ಕೂಡಾ ತೀರ್ಮಾನಿಸಲಾಗಿದೆ.
‘ಸಮಾವೇಶಕ್ಕೆ 5 ಲಕ್ಷದಿಂದ 10 ಲಕ್ಷ ಜನರನ್ನು ಸೇರಿಸಲು ಚರ್ಚೆ ನಡೆದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪಕ್ಷದ ಪ್ರಮುಖ ನಾಯಕರನ್ನು ಆಹ್ವಾನಿಸಲಾಗುವುದು’ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಪೂರ್ವಭಾವಿ ಸಭೆ ಶಾಸಕ ಸತೀಶ ಜಾರಕಿಹೊಳಿ ಅವರ ಬೆಂಗಳೂರಿನ ನಿವಾಸದಲ್ಲಿ ನಡೆಯಿತು. ಶಾಸಕ ಜಿ. ಪರಮೇಶ್ವರ, ಮುಖಂಡರಾದ ಎಚ್.ಸಿ. ಮಹದೇವಪ್ಪ ಸಭೆಯಲ್ಲಿದ್ದರು.