ತೋರಣಗಲ್ಲು: ‘ರಾಜ್ಯದಲ್ಲಿ ಕೋವಿಡ್ನಿಂದ ಸಾವಿಗೀಡಾದವರ ಕುರಿತು ರಾಜ್ಯ ಸರ್ಕಾರ ಸುಳ್ಳು ಲೆಕ್ಕ ಕೊಡುತ್ತಿದೆ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.
ಸೋಮವಾರ ಸಂಡೂರಿಗೆ ತೆರಳುವ ಮುನ್ನ ಜಿಂದಾಲ್ ಸಂಸ್ಥೆಯ ವಿದ್ಯಾನಗರದ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘35 ಸಾವಿರ ಮಂದಿ ಮೃತಪಟ್ಟಿದ್ದಾರೆ ಎಂದು ಸರ್ಕಾರ ಹೇಳಿದೆ. ಆದರೆ ಅದಕ್ಕಿಂತಲೂ ಹೆಚ್ಚು ಮಂದಿ ಕೋವಿಡ್ನಿಂದ ಮೃತಪಟ್ಟಿದ್ದಾಎ’ ಎಂದು ದೂರಿದರು.
‘ಶಾಸಕ ರಮೇಶ್ ಜಾರಕಿಹೊಳಿಯವರನ್ನು ಬಿಜೆಪಿ ಸರ್ಕಾರ ಸಂಪೂರ್ಣವಾಗಿ ರಕ್ಷಣೆ ಮಾಡುತ್ತಿದೆ’ ಎಂದು ದೂರಿದ ಅವರು, ‘17 ಬಂಡಾಯ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಅವರನ್ನು ಯಾವುದೇ ಕಾರಣಕ್ಕೂ ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದರು.
‘ಜಿಂದಾಲ್ ಸಂಸ್ಥೆಯು 3,667 ಎಕರೆ ಭೂಮಿಯನ್ನು ಪ್ರಸಕ್ತ ಮಾರುಕಟ್ಟೆ ಬೆಲೆಗೆ ಖರೀದಿಸಲಿ. ನನ್ನ ಅಭ್ಯಂತರವಿಲ್ಲ’ ಎಂದರು.
‘ಸಿದ್ಧರಾಮಯ್ಯ ಅವರೇ ಮತ್ತೆ ಮುಖ್ಯಮಂತ್ರಿಯಾಗಬೇಕು. ಅವರ ನೇತೃತ್ವದಲ್ಲೇ ಮುಂದಿನ ಚುನಾವಣೆಯನ್ನು ಎದುರಿಸುತ್ತೇವೆ’ ಎಂದು ಶಾಸಕರಾದ ಎಲ್ಬಿಪಿ ಭೀಮಾನಾಯ್ಕ ಮತ್ತು ಜೆ.ಎನ್.ಗಣೇಶ್ ಇದೇ ಸಂದರ್ಭದಲ್ಲಿ ಹೇಳಿದರು.
ಅದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಅದು ಅವರ ವೈಯಕ್ತಿಕ ಅಭಿಪ್ರಾಯ. ಮುಖ್ಯಮಂತ್ರಿಯಾಗುತ್ತೇನೆ ಎಂದು ನಾನು ಎಲ್ಲಿಯೂ ಹೇಳಿಲ್ಲ. ಅದು ಶಾಸಕರು ಮತ್ತು ಜನರ ಕೂಗು. ಹಾಗೆಂದು ಹೇಳಿ ಎಂದು ನಾನು ಅವರಿಗೆ ಹೇಳಿಲ್ಲ’ ಎಂದರು.
ಶಾಸಕ ಬೈರತಿ ಸುರೇಶ್, ಸಂತೋಷ ಲಾಡ್, ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶಿವಯೋಗಿ, ಮುಖಂಡರಾದ ಪ್ರಕಾಶ್ ರಾಥೋಡ್, ಅಶೋಕ ಪಟ್ಟಣ ಶೆಟ್ಟಿ, ಏಕಾಂಬ್ರಪ್ಪ, ಕುಡುತಿನಿ ಶ್ರೀನಿವಾಸ್ಇದ್ದರು.