ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿದೆಯಾದರೂ, ಸಾವಿನ ಸಂಖ್ಯೆ ಏರುತ್ತಲೇ ಇದೆ.
ಸೋಮವಾರ 529 ಮಂದಿ ಅಸುನೀಗಿದ್ದಾರೆ. ಇದರೊಂದಿಗೆ ಮೃತರ ಒಟ್ಟು ಸಂಖ್ಯೆ 25,811ಕ್ಕೆ ಹೆಚ್ಚಿದ್ದು, ಸಾವಿನ ಪ್ರಮಾಣ ಶೇ 2.09ಕ್ಕೆ ಏರಿದೆ.
ಹಿಂದಿನ 24 ಗಂಟೆಗಳಲ್ಲಿ 25,311 ಮಂದಿಗೆ ಹೊಸದಾಗಿ ಸೋಂಕು ತಗುಲಿದೆ. ಒಂದೇ ದಿನದಲ್ಲಿ 57,333 ಜನ ಗುಣಮುಖರಾಗಿರುವುದರಿಂದ ಚೇತರಿಸಿಕೊಂಡವರ ಸಂಖ್ಯೆ 19.83 ಲಕ್ಷಕ್ಕೆ ಏರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 4.40 ಲಕ್ಷಕ್ಕೆ ತಗ್ಗಿದೆ.
ರಾಜ್ಯಕ್ಕೆ ಕೋವಿಡ್ ಕಾಲಿಟ್ಟ ದಿನದಿಂದ ಈವರೆಗೆ 24.50 ಲಕ್ಷ ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಸೋಮವಾರ 1.08 ಲಕ್ಷ ಜನರಿಂದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗಿದ್ದು, ಸೋಂಕು ದೃಢಪ್ರಮಾಣ ಪ್ರಮಾಣ ಶೇ 23.28ಕ್ಕೆ ತಲುಪಿದೆ.
ಜಿಲ್ಲೆಗಳಲ್ಲೂ ಸೋಂಕಿತರ ಸಂಖ್ಯೆ ಇಳಿಕೆ ಕಾಣುತ್ತಿದೆ. ಬೆಂಗಳೂರಿನಲ್ಲಿ 5,701 ಮಂದಿಯಲ್ಲಿ ಕೋವಿಡ್ ದೃಢಪಟ್ಟಿದೆ.
ಧಾರವಾಡ (1,058), ಹಾಸನ (1,156), ಮೈಸೂರು (2,680), ತುಮಕೂರು (1,662) ಹಾಗೂ ಉತ್ತರ ಕನ್ನಡ (1,110) ಜಿಲ್ಲೆಗಳಲ್ಲಿ ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ.