ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಮೃತರ ಸಂಖ್ಯೆ ಇಳಿಕೆಯತ್ತ ಸಾಗಿದೆ.24 ಗಂಟೆಗಳಲ್ಲಿ120 ಮಂದಿ ಅಸುನೀಗಿದ್ದಾರೆ. ಇದು ಹಿಂದಿನ ಎರಡು ತಿಂಗಳಲ್ಲಿ ವರದಿಯಾದ ಕನಿಷ್ಠ ಪ್ರಕರಣ. ಇದರೊಂದಿಗೆ ಮರಣ ಪ್ರಮಾಣ ದರ ಶೇ 1.75ಕ್ಕೆ ತಗ್ಗಿದೆ.
ಸೋಂಕಿತರ ಸಂಖ್ಯೆಯೂ ಮತ್ತಷ್ಟು ಇಳಿದಿದೆ. ಒಂದು ದಿನದಲ್ಲಿ 6,835 ಮಂದಿಯಲ್ಲಿ ಕೋವಿಡ್ ದೃಢಪಟ್ಟಿದೆ. ಕಳೆದ ಎರಡು ತಿಂಗಳಲ್ಲಿ ವರದಿಯಾದ ಅತಿ ಕಡಿಮೆ ಪ್ರಕರಣಗಳು ಇವಾಗಿವೆ. ರಾಜ್ಯಕ್ಕೆ ಕೋವಿಡ್ ಕಾಲಿಟ್ಟ ದಿನದಿಂದ ಈವರೆಗೆ ಒಟ್ಟು27.71 ಲಕ್ಷ ಜನ ಸೋಂಕಿಗೊಳಗಾಗಿದ್ದಾರೆ. ಸೋಮವಾರ15,409 ಜನರಿಗೆ ಕಾಯಿಲೆ ವಾಸಿಯಾಗಿದೆ. ಹೀಗಾಗಿ ಚೇತರಿಸಿಕೊಂಡವರ ಒಟ್ಟು ಸಂಖ್ಯೆ25.66 ಲಕ್ಷಕ್ಕೆ ಏರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ1.72 ಲಕ್ಷಕ್ಕೆ ಇಳಿದಿದೆ.
ಕೋವಿಡ್ ಪರೀಕ್ಷೆಗಳ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆ. ಒಂದು ದಿನದಲ್ಲಿ 1.49 ಲಕ್ಷ ಮಂದಿಯ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಕೋವಿಡ್ ದೃಢ ಪ್ರಮಾಣ ಶೇ 4.56ಕ್ಕೆ ಕುಸಿದಿದೆ.
ಕೋವಿಡ್ ಪೀಡಿತರ ಪೈಕಿ ಮೈಸೂರಿನಲ್ಲಿ (25) ಅಧಿಕ ಮಂದಿ ಮರಣ ಹೊಂದಿದ್ದಾರೆ. ಬೆಂಗಳೂರಿನಲ್ಲಿ12 ಜನ ಮೃತರಾಗಿದ್ದಾರೆ. ದಾವಣಗೆರೆ ಹಾಗೂ ಧಾರವಾಡದಲ್ಲಿ ತಲಾ10 ಮಂದಿ ಅಸುನೀಗಿದ್ದಾರೆ. ರಾಜ್ಯದಲ್ಲಿ ಈವರೆಗಿನ ಮೃತರ ಒಟ್ಟು ಸಂಖ್ಯೆ 33,033ಕ್ಕೆ ಹೆಚ್ಚಿದೆ.
ಬೆಂಗಳೂರಿನಲ್ಲಿ ಹೊಸದಾಗಿ1,470 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ದಕ್ಷಿಣ ಕನ್ನಡ (648), ಹಾಸನ (507) ಹಾಗೂ ಮೈಸೂರಿನಲ್ಲಿ (670) ಅಧಿಕ ಪ್ರಕರಣಗಳು ವರದಿಯಾಗಿವೆ. ಉಳಿದ ಜಿಲ್ಲೆಗಳಲ್ಲಿ ಸೋಂಕು ಪಸರಿಸುವಿಕೆ ತಗ್ಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.