ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಕೆಶಿಗೆ ಖೆಡ್ಡಾ ತೋಡಿದ ಸಿದ್ದರಾಮಯ್ಯ ಶಿಷ್ಯ ಪಡೆ: ಸಿ.ಟಿ.ರವಿ

Last Updated 13 ಅಕ್ಟೋಬರ್ 2021, 13:02 IST
ಅಕ್ಷರ ಗಾತ್ರ

ಬೆಂಗಳೂರು: ‘ಸಿದ್ದರಾಮಯ್ಯ ಅವರ ಶಿಷ್ಯ ಪಡೆ ಡಿ.ಕೆ.ಶಿವಕುಮಾರ್‌ ಅವರಿಗೆ ಖೆಡ್ಡಾ ತೋಡಲು ಸಜ್ಜಾಗಿರುವಂತೆ ಕಾಣುತ್ತಿದೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ಡಿ.ಕೆ.ಶಿವಕುಮಾರ್‌ ಕುರಿತು ಕಾಂಗ್ರೆಸ್‌ ನಾಯಕರಾದ ವಿ.ಎಸ್‌.ಉಗ್ರಪ್ಪ ಮತ್ತು ಸಲೀಂ ಮಧ್ಯೆ ನಡೆದ ಸಂಭಾಷಣೆಯ ಕುರಿತು ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿರುವ ರವಿ, ‘ಒಂದು ಕಡೆ ತಮ್ಮ ನಾಯಕನನ್ನು ಹೊಗಳಿ, ಇನ್ನೊಂದು ಕಡೆ ನಿಮ್ಮನ್ನು ಜನತೆ ಮುಂದೆ ಬೆತ್ತಲು ಮಾಡಲು ಹೊರಟಂತಿದೆ. ಯಾವುದಕ್ಕೂ ನೀವು(ಡಿಕೆ) ಎಚ್ಚೆತ್ತುಕೊಳ್ಳುವುದು ಒಳಿತು’ ಎಂದು ವ್ಯಂಗಭರಿತ ಸಲಹೆ ನೀಡಿದ್ದಾರೆ.

‘ಕೊತ್ವಾಲ್‌ ರಾಮಚಂದ್ರನ ಶಿಷ್ಯನ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಅವರದೇ ಪಕ್ಷದ ಮುಖಂಡರು ಕಚೇರಿಯಲ್ಲೇ ಬಹಿರಂಗಪಡಿಸಿದ್ದಾರೆ ಎಂದರೆ ಕೆಪಿಸಿಸಿಗೆ ಎಂಥ ದುರ್ಗತಿ ಬಂದಿರಬಹುದು. ಶಿವಕುಮಾರ್‌ ಕಲೆಕ್ಷನ್‌ ಗುಟ್ಟನ್ನು ಕೊನೆಗೂ ಅವರದೇ ಪಕ್ಷದ ಮುಖಂಡ ಗುಸುಗುಸಿನಲ್ಲೇ ಜಗಜ್ಜಾಹೀರು ಮಾಡಿದ್ದಾರೆ. ಕಾಣದ ಕಲೆಕ್ಷನ್‌ ಎಷ್ಟಿರಬಹುದು’ ಎಂದು ರವಿ ಪ್ರಶ್ನಿಸಿದ್ದಾರೆ.

ಸತ್ಯ ಹೊರಗೆ ಬರಲೇಬೇಕು

‘ಶಿವಕುಮಾರ್‌ ಅವರನ್ನು ಕುಡುಕ, ಕಲೆಕ್ಷನ್‌ ಗಿರಾಕಿ, ಭ್ರಷ್ಟಾಚಾರಿ, ತನಿಖೆ ಮಾಡಿದರೆ ತುಂಬಾ ಹಗರಣ ಹೊರಗೆ ಬರುತ್ತದೆ ಎಂದು ಹೇಳಿದ್ದಾರೆ. ಸತ್ಯ ಯಾವತ್ತಾದರೂ ಹೊರಗೆ ಬರಲೇಬೇಕು ಎಂಬುದು ಸಾಬೀತಾಗಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ.

‘ಡಿಕೆಶಿ ಮೇಲೆ ಇಡಿ, ಸಿಬಿಐ ದಾಳಿಯಾದಾಗ ರಾಜಕೀಯ ಪ್ರೇರಿತ ಎಂದವರಿಗೆ ಅವರದ್ದೇ ಪಕ್ಷದ ಮುಖಂಡರು ಸಾಕ್ಷ್ಯ ನೀಡಿದ್ದಾರೆ. ಐಟಿ– ಇಡಿ ದಾಳಿ ರಾಜಕೀಯ ಪ್ರೇರಿತ ಎಂದು ಬೊಬ್ಬೆ ಹೊಡೆಯುವ ನಾಯಕರೇ ನಿಮ್ಮ ಅಧ್ಯಕ್ಷರ ಬ್ರಹ್ಮಾಂಡ ಭ್ರಷ್ಟಾಚಾರ ಬೆತ್ತಲಾಗಿದೆ. ಭ್ರಷ್ಟ ಅಧ್ಯಕ್ಷನನ್ನು ಇಟ್ಟುಕೊಂಡು ಉಪಚುನಾವಣೆಯಲ್ಲಿ ಯಾವ ಮುಖವಿಟ್ಟುಕೊಂಡು ಮತ ಕೇಳುತ್ತೀರಿ’ ಎಂದೂ ಕಟಕಿಯಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT