ಬೆಂಗಳೂರು: ‘ಸೈಬರ್ ವಂಚನೆ ಪ್ರಕರಣಗಳಲ್ಲಿ ನಷ್ಟಕ್ಕೆ ಒಳಗಾದವರು ಕೃತ್ಯ ನಡೆದ ಎರಡು ಗಂಟೆಗಳಲ್ಲಿ ಪೊಲೀಸರಿಗೆ ಮಾಹಿತಿ ನೀಡಿದರೆ ಖಾತೆ ಜಪ್ತಿ ಮಾಡಿ, ಹಣ ನಷ್ಟವಾಗುವುದನ್ನು ತಪ್ಪಿಸಲಾಗುವುದು. ಈ ರೀತಿ ಮಾಹಿತಿ ನೀಡಿದ್ದ ಪ್ರಕರಣಗಳಲ್ಲಿ ₹ 70 ಕೋಟಿ ರಕ್ಷಿಸಲಾಗಿದೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ವಿಧಾನಪರಿಷತ್ತಿನಲ್ಲಿ ಬಿಜೆಪಿಯ ಸುನೀಲ್ ವಲ್ಯಾಪುರೆ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಬಸವರಾಜ ಬೊಮ್ಮಾಯಿಯವರು ಗೃಹ ಸಚಿವರಾಗಿದ್ದಾಗ ಪೊಲೀಸ್, ಬ್ಯಾಂಕ್ ಅಧಿಕಾರಿಗಳ ಜೊತೆ ಸಭೆ ನಡೆಸಿ, ವಂಚನೆ ಪ್ರಕರಣಗಳಲ್ಲಿ ಬ್ಯಾಂಕ್ ಖಾತೆ ಜಪ್ತಿಗೆ ಸೂಚಿಸಿದ್ದರು’ ಎಂದರು.
‘2017ರಲ್ಲಿ ಸೈಬರ್ ಅಪರಾಧ ನಿಯಂತ್ರಣಕ್ಕೆ ಪ್ರತ್ಯೇಕ ಠಾಣೆಗಳನ್ನು ಆರಂಭಿಸಲಾಗಿದೆ. ಪ್ರತಿ ಜಿಲ್ಲೆಯಲ್ಲೂ ಒಂದೊಂದು ಸೈಬರ್ ಠಾಣೆ ಆರಂಭಿಸಲಾಗಿದೆ. ಒಟ್ಟು 46 ಠಾಣೆಗಳಿವೆ, ಬೆಂಗಳೂರಿನಲ್ಲಿ ಎಂಟು ಠಾಣೆಗಳು ಕೆಲಸ ನಿರ್ವಹಿಸುತ್ತಿವೆ. ಸಿಐಡಿಯಲ್ಲಿ ಇದಕ್ಕಾಗಿ ಪ್ರತ್ಯೇಕ ಘಟಕ ಆರಂಭಿಸಲಾಗಿದೆ. ಪೊಲೀಸರು ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಿ ತನಿಖೆ ನಡೆಸುತ್ತಿದ್ದಾರೆ’ ಎಂದರು.