ಕೋಲಾರ: ‘ಪ್ರಧಾನಿ ಮೋದಿ ಜನ್ಮದಿನವಾದ ಸೆ.17ರಿಂದ ಸಂವಿಧಾನ ದಿನವಾದ ನ.26ರವರೆಗೆ ಬಿಜೆಪಿ ಎಸ್.ಸಿ ಮೋರ್ಚಾದಿಂದ ದೇಶದ 75 ಸಾವಿರ ಹಳ್ಳಿಗಳಲ್ಲಿ ದಲಿತರ ಸಮಸ್ಯೆ ಆಲಿಸಿ ಬಗೆಹರಿಸಲಾಗುವುದು’ ಎಂದು ಬಿಜೆಪಿ ಎಸ್.ಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಲಾಲ್ ಸಿಂಗ್ ಆರ್ಯ ತಿಳಿಸಿದರು.
ನಗರ ಹೊರವಲಯದಲ್ಲಿ ಶುಕ್ರವಾರ ಆರಂಭವಾದ ರಾಜ್ಯ ಬಿಜೆಪಿ ಎಸ್.ಸಿ ಮೋರ್ಚಾ ಪ್ರಶಿಕ್ಷಣ ವರ್ಗಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಮೋದಿ ಜನ್ಮದಿನವನ್ನು ಸೇವಾ ದಿವಸವಾಗಿ ಆಚರಿಸುತ್ತಿದ್ದು, ಮೋರ್ಚಾ ಪದಾಧಿಕಾರಿಗಳು ಕೇಂದ್ರದ ಯೋಜನೆ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ದಲಿತ ಸಮುದಾಯದವರಿಗೆ ಮನದಟ್ಟು ಮಾಡಲಿದ್ದಾರೆ. 70 ದಿನ ನಡೆಯಲಿರುವ ಬಸ್ತಿ ಸಂಪರ್ಕ ಅಭಿಯಾನದಡಿ ಪ್ರತಿ ಜಿಲ್ಲೆಯಲ್ಲಿ 25 ಸಂಪರ್ಕ ಸಭೆ ಆಯೋಜಿಸಲಿದ್ದಾರೆ’ ಎಂದರು.
‘ಕಾಂಗ್ರೆಸ್ ದಲಿತರ ವಿರೋಧಿ ಯಾಗಿದ್ದು, ಸಮುದಾಯವನ್ನು ಅಧಿ ಕಾರದಿಂದ ದೂರವಿಡುವ ಕೆಲಸ ಮಾಡಿ ಕೊಂಡು ಬಂದಿದೆ. ಬಿಜೆಪಿ ಆದಿವಾಸಿ ಸಮುದಾಯಕ್ಕೆ ರಾಷ್ಟ್ರಪತಿಯಂಥ ಹುದ್ದೆ ನೀಡಿ ಗೌರವಿಸಿದೆ’ ಎಂದರು.
ಎಸ್.ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಮಾತ ನಾಡಿ, ‘ಬಿಜೆಪಿ ಯಾವತ್ತೂ ದಲಿತ, ಸಂವಿಧಾನ, ಅಂಬೇಡ್ಕರ್ ವಿರೋಧಿ ಅಲ್ಲ. ಕಾಂಗ್ರೆಸ್ 7 ದಶಕಗಳಿಂದವೋಟ್ ಬ್ಯಾಂಕ್ ಮಾಡಿಕೊಂಡಿದೆ ಎಂದರು.
‘8 ತಿಂಗಳಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ಬರಲಿದ್ದು ಪಕ್ಷ ಸಂಘಟನೆ ಕಾರ್ಯ ನಡೆಯುತ್ತಿದೆ. ಪ್ರಶಿಕ್ಷಣ ವರ್ಗ ಇದಕ್ಕೆ ಸಹಕಾರಿಯಾಗಲಿದೆ ’ ಎಂದರು.
ಸಂಸದ ಎಸ್.ಮುನಿಸ್ವಾಮಿ ಪ್ರಶಿಕ್ಷಣ ವರ್ಗ ಆಯೋಜನೆ ಜವಾಬ್ದಾರಿ ವಹಿಸಿಕೊಂಡಿದ್ದು, ರಾಜ್ಯದ ವಿವಿಧೆಡೆಯಿಂದ 200 ಮುಖಂಡರು ಭಾಗವಹಿಸಿದ್ದಾರೆ. ಪಕ್ಷ ಸಂಘಟನೆ ಸಂಬಂಧ ಸೆ.4ರವರೆಗೆ ಮುಖಂಡರು ಸಮಾಲೋಚನೆ ನಡೆಸಲಿದ್ದಾರೆ.
* ವಿಪಕ್ಷಗಳ ಆರೋಪಗಳಿಗೆ ತಕ್ಕ ಉತ್ತರ ನೀಡಲು ಎಸ್.ಸಿ ಮೋರ್ಚಾದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿಗೆ ತರಬೇತಿ ನೀಡಲಾಗುತ್ತಿದೆ -ಲಾಲ್ ಸಿಂಗ್ ಆರ್ಯ, ಬಿಜೆಪಿ ಎಸ್.ಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ
* ರಾಜ್ಯದಲ್ಲಿ ಶೇ 70ರಷ್ಟು ದಲಿತ ಸಮುದಾಯ ಈಗ ಬಿಜೆಪಿ ತೆಕ್ಕೆಯಲ್ಲಿದೆ. ದಲಿತರು ವ್ಯವಸ್ಥೆ ಅರಿತು ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಿದ್ದಾರೆ -ಛಲವಾದಿ ನಾರಾಯಣಸ್ವಾಮಿ, ರಾಜ್ಯ ಅಧ್ಯಕ್ಷ, ಎಸ್.ಸಿ ಮೋರ್ಚಾ