ಬೆಂಗಳೂರು: ಆರ್.ಆರ್. ನಗರ ಕ್ಷೇತ್ರದ ವಿವಿಧ ಪ್ರದೇಶಗಳಲ್ಲಿ ಶುಕ್ರವಾರ ರೋಡ್ ಶೋ ನಡೆಸಿದ ಚಿತ್ರ ನಟ ದರ್ಶನ್, ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಮತಯಾಚಿಸಿದರು.
ಮತ್ತೀಕೆರೆಯಿಂದ ರೋಡ್ ಶೋ ಆರಂಭಿಸಿದ ದರ್ಶನ್, ಜೆ.ಪಿ. ಪಾರ್ಕ್, ಜಾಲಹಳ್ಳಿ, ಗೊರಗುಂಟೆ ಪಾಳ್ಯ, ಲಗ್ಗೆರೆಯಲ್ಲಿ ಮತ ಕೋರಿದರು.
‘ಚಿತ್ರ ನಿರ್ಮಾಪಕರಾಗಿ ಶಾಸಕರಾಗಿ ಮುನಿರತ್ನ ಅವರನ್ನು ನೋಡಿದ್ದೇನೆ. ಅವರು ರಾಜೀನಾಮೆ ಕೊಟ್ಟಿದ್ದಾರೋ ಇನ್ನೊಂದು ಮಾಡಿದ್ದಾರೋ ಗೊತ್ತಿಲ್ಲ. ಕ್ಷೇತ್ರದ ಅಭಿವೃದ್ಧಿ ಮಾಡಿದ್ದಾರೆ. ಜನಗಳಿಗೆ ಏನು ಮಾಡಿದರೂ ಅದು ಲೆಕ್ಕಕ್ಕೆ ಸಿಗುವುದಿಲ್ಲ. ಕೊರೊನಾ ಸಮಯದಲ್ಲಿ ಮುನಿರತ್ನ ಅನ್ನ ಕೊಟ್ಟಿದ್ದಾರೆ. ಅವರಿಗೆ ಮತ ಹಾಕಿ‘ ಎಂದು ದರ್ಶನ್ ಕೋರಿದರು.
ಕಂದಾಯ ಸಚಿವ ಆರ್. ಅಶೋಕ ಮಾತನಾಡಿ, ಆರ್.ಆರ್. ನಗರದ ಜನ ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದ್ದಾಗ ಮುನಿರತ್ನ ನೆರವಿಗೆ ನಿಂತಿದ್ದರು. ಈಗ ಕನಕಪುರದಿಂದ ಬಂದಿರುವ ಡಿ.ಕೆ. ಶಿವಕುಮಾರ್ ಜಾತಿ, ಜಾತಿ ಎಂದಷ್ಟೇ ಹೇಳಿ ಹೋಗುತ್ತಾರೆ ವಿನಃ ಕಷ್ಟಕಾಲದಲ್ಲಿ ನಿಮ್ಮ ಬಳಿಗೆ ಬರಲಾರರು ಎಂದರು.
ಮುನಿರಾಜು ಎಂದ ಉದ್ಘೋಷಕ: ರೋಡ್ ಶೋ ವೇಳೆ ನಮ್ಮೆಲ್ಲರ ನಾಯಕ ಮುನಿರಾಜು ಎಂದು ಪ್ರಚಾರದ ವೇಳೆ ಉದ್ಘೋಷಕರು ಹೇಳಿದ್ದರಿಂದಾಗಿ, ವಾಹನದಲ್ಲಿ ಸಾಗುತ್ತಿದ್ದವರೆಲ್ಲ ತಬ್ಬಿಬ್ಬಾದ ಘಟನೆಯೂ ನಡೆಯಿತು.