‘ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಶಾಸಕರು ಪತ್ರ ಬರೆದಿದ್ದಾರೆ ಎಂಬ ವರದಿಯನ್ನು ಪತ್ರಿಕೆಗಳಲ್ಲಿ ಓದಿದ್ದೇನೆ. ಆದರೆ, ಇದು ಸತ್ಯಕ್ಕೆ ದೂರವಾದ ವರದಿ. ಈ ಸುದ್ದಿ ಬೆಂಗಳೂರಿನಲ್ಲಿ ಮಾತ್ರ ಓಡಾಡುತ್ತಿದೆ. ದೆಹಲಿ ಅಥವಾ ಬೇರೆಲ್ಲೂ ಇಲ್ಲ. ಈ ರೀತಿಯ ಬೆಳವಣಿಗೆಗಳು ನಡೆದಿರುವುದು ನನ್ನ ಗಮನಕ್ಕೆ ಬಂದಿಲ್ಲ. ಸಣ್ಣ ಪುಟ್ಟ ವ್ಯತ್ಯಾಸ ಇದ್ದರೆ ಮುಖ್ಯಮಂತ್ರಿ ಸರಿಪಡಿಸುತ್ತಾರೆ. ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಇನ್ನೂ ಎರಡೂವರೆ ವರ್ಷ ಅಧಿಕಾರ ನಡೆಸಲಿದ್ದಾರೆ. ಅಲ್ಲದೇ, ಮುಂದಿನ ಚುನಾವಣೆಯೂ ಅವರ ನೇತೃತ್ವದಲ್ಲೇ ನಡೆಯಲಿದೆ’ ಎಂದು ಸ್ಪಷ್ಟಪಡಿಸಿದರು.