ಬೆಂಗಳೂರು: ವಿಧಾನ ಪರಿಷತ್ ಕಲಾಪ ಮಂಗಳವಾರ ಬೆಳಿಗ್ಗೆ ಆರಂಭವಾಗುತ್ತಿದ್ದಂತೆ, ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವೀಕ್ಷಣೆಗೆ ಸದಸ್ಯರನ್ನು ಆಹ್ವಾನಿಸಿ ಸಭಾಪತಿ ಬಸವರಾಜ ಹೊರಟ್ಟಿ ಹೊರಡಿಸಿದ ಪ್ರಕಟಣೆ ಗದ್ದಲಕ್ಕೆ ಕಾರಣವಾಯಿತು.
ಸದನದಲ್ಲಿ ಮಾಡಿದ ಘೋಷಣೆ ವಾಪಸು ಪಡೆಯಬೇಕು ಎಂದು ಪಟ್ಟುಹಿಡಿದ ಕಾಂಗ್ರೆಸ್ ಸದಸ್ಯರು, ಸಭಾಪತಿ ಪೀಠದ ಎದುರು ಧರಣಿಗೆ ಮುಂದಾದರು.
‘ಕೆಲವರು ಸದನದಲ್ಲಿ ನೀಲಿಚಿತ್ರ ನೋಡಿದ್ದಾರೆ. ಹಾಗಾದರೆ, ನಾವೂ ನೀಲಿಚಿತ್ರ ನೋಡಬೇಕೇ?ಪೀಠದಿಂದ ಯಾಕೆ ಇದನ್ನು ಹೇಳಿಸ್ತೀರಾ? ಎಂದು ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ವಾಗ್ದಾಳಿ ನಡೆಸಿದರು.
ಆಗ ಸಭಾಪತಿ, ‘ಸರ್ಕಾರ ಕಳುಹಿಸಿದ ಪ್ರಕಟಣೆಯನ್ನು ನಾನು ಓದಿದ್ದೇನೆ. ಇಷ್ಟ ಇದ್ದವರು ಹೋಗಿ ಇಲ್ಲದವರು ಬಿಡಿ’ ಎಂದರು.
ಹರಿಪ್ರಸಾದ್ ಮಾತನಾಡಿ, ‘ಸಭಾಪತಿ ನಿಷ್ಪಕ್ಷಪಾತ ಆಗಿರಬೇಕು. ಈ ಪ್ರಕಟಣೆ ನೀವು ಯಾಕೆ ಹೊರಡಿಸುತ್ತೀರಿ’ ಎಂದಾಗ, ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ, ‘ಹರಿಪ್ರಸಾದ್ ತಾಳ್ಮೆ ಕಳೆದುಕೊಳ್ಳಬೇಡಿ’ ಎಂದರು. ಗದ್ದಲ ಕಡಿಮೆಯಾಗದ ಕಾರಣ ಕಲಾಪವನ್ನು ಸಭಾಪತಿ 10 ನಿಮಿಷ ಮುಂದೂಡಲಾಯಿತು.
ಕಲಾಪ ಮತ್ತೆ ಆರಂಭವಾದಾಗ ಕೋಟ ಶ್ರೀನಿವಾಸ ಪೂಜಾರಿ, ‘ಕಾಶ್ಮೀರಿ ಪಂಡಿತರ ಕುರಿತ ಸಿನಿಮಾ ಇದು. ಇಷ್ಟ ಇದ್ದವರು ನೋಡಬಹುದು. ಇಲ್ಲದವರು ಸುಮ್ಮನಿರಬಹುದು’ ಎಂದು ಅವರು ಹೇಳಿದರು.
ಹರಿಪ್ರಸಾದ್ ಮಾತನಾಡಿ, ‘ಆ ಸಿನಿಮಾದಲ್ಲಿ ಬರೀ ಸುಳ್ಳಿದೆ. ಅಲ್ಲಿ 89 ಜನ ಮಾತ್ರ ಸತ್ತಿರುವುದು. ಆದರೆ, ಸಿನಿಮಾದಲ್ಲಿ ಸಾವಿರಾರು ಮಂದಿ ಸತ್ತಂತೆ ತೋರಿಸಿದ್ದಾರೆ’ ಎಂದರು.