ಬೆಂಗಳೂರು: ‘ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ತಮ್ಮ ಕಾದಂಬರಿ ‘ಭರತ ನಗರಿ’ಯಲ್ಲಿ ರಾಷ್ಟ್ರಗೀತೆಯನ್ನು ಅವಹೇಳನ ಮಾಡಿದ್ದು, ಭಾರತವನ್ನು ‘ಜಡ ಭರತ’ ಎಂದು, ಗಂಗಾನದಿಯನ್ನು ‘ಹಾದರ’ ಎಂದು ಕರೆದಿದ್ದು, ಇವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕ್ರಮ ತೆಗೆದುಕೊಳ್ಳಬೇಕು’ ಎಂದು ಆರೋಪಿಸಿರುವ ಬಿಜೆಪಿಯ ಕಾನೂನು ಪ್ರಕೋಷ್ಠ ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದೆ.
ಸುದ್ದಿಗಾರರ ಜತೆ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್, ‘ದೇಶ, ರಾಷ್ಟ್ರಗೀತೆ ಮತ್ತು ಭಾರತೀಯ ಸಂಸ್ಕೃತಿಯ ಬಗ್ಗೆ ಅಭಿಮಾನ ಹೊಂದಿರುವವರು ಇದನ್ನು ಸಹಿಸಿಕೊಂಡು ಕುಳಿತುಕೊಳ್ಳಲು ಸಾಧ್ಯವಿಲ್ಲ. ಬರಗೂರು ನಾಡಿಗೆ ಮತ್ತು ದೇಶಕ್ಕೆ ಅವಹೇಳನ ಮಾಡಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯ ಏನು ಹೇಳುತ್ತಾರೆ’ ಎಂದು ಪ್ರಶ್ನಿಸಿದರು.
‘ಕಲೆ, ಸಂಸ್ಕೃತಿ, ದೇಶ, ಅಂಬೇಡ್ಕರ್ ಮತ್ತು ಸಾಹಿತ್ಯದ ಬಗ್ಗೆ ಭಾಷಣ ಮಾಡುವ ಬರಗೂರು ಈ ರೀತಿ ಬರೆದುದಾದರೂ ಹೇಗೆ? 1983ರಲ್ಲಿ ಈ ಕಾದಂಬರಿ ಬರೆದುದಾಗಿ ಹೇಳಿಕೊಂಡಿದ್ದಾರೆ. ಈ ಕಾದಂಬರಿಯನ್ನು ನಿಷೇಧಿಸಬೇಕು’ ಎಂದರು. ‘ರಾಷ್ಟ್ರಧ್ವಜಕ್ಕೆ ಆದ ಅವಮಾನದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದೇವೆ. ಕಾನೂನು ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜತೆ ಚರ್ಚಿಸಿ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸ್ ಆಯುಕ್ತರು ಭರವಸೆ ನೀಡಿದರು’ ಎಂದರು.
ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ‘ರಾಷ್ಟ್ರಗೀತೆ, ರಾಷ್ಟ್ರಧ್ವಜದ ಬಗ್ಗೆ ವಿಕೃತಿ ಮೆರೆದಿರುವುದು ಗೊತ್ತಾಗಿದೆ. ಭರತ ನಗರಿಯಲ್ಲಿ ವಾಜಪೇಯಿ, ಚಂದ್ರಶೇಖರ್, ಮೊರಾರ್ಜಿ ದೇಸಾಯಿ, ಚರಣಸಿಂಗ್ ಅವರ ಹೆಸರುಗಳನ್ನು ವಿಕೃತಿಯಿಂದ ಬಳಸಿದ್ದಾರೆ’ ಎಂದಿದ್ದಾರೆ.