ಹೊಸಪೇಟೆ (ವಿಜಯನಗರ): ದೇವದಾಸಿ ಪದ್ಧತಿಯನ್ನು ಮುಂದುವರೆಸಿಕೊಂಡು ಹೋಗಲು ಕೊಟ್ಟೂರುತಾಲ್ಲೂಕಿನ ಜೋಳದಕೂಡ್ಲಿಗಿಯ ಕುಟುಂಬವೊಂದು ಮನೆಯ ಮಗನನ್ನು ಆಯ್ಕೆ ಮಾಡಿದೆ.
ಏ.18ರಂದು ಜೋಳದಕೂಡ್ಲಿಗಿ ಗ್ರಾಮದಲ್ಲಿ ನಡೆದ ವಾರ್ಷಿಕ ಜಾತ್ರೆಯಲ್ಲಿ 22 ವರ್ಷ ವಯಸ್ಸಿನ ಶಿವಣ್ಣ ಎಂಬುವರಿಗೆ ‘ಮುದ್ರೆ ಹಾಕುವ’ ಆಚರಣೆ ಮೂಲಕ ‘ಪವಿತ್ರ ಆತ್ಮ’ ಅಥವಾ ‘ದಾಸಪ್ಪ’ ಎಂದು ಘೋಷಿಸಿದ್ದಾರೆ. ಶಿವಣ್ಣ ಅವರ ಅಜ್ಜಿ ಗತಿಸಿ ಹೋದ 15 ವರ್ಷಗಳ ನಂತರ ಶಿವಣ್ಣನ ಮೂಲಕ ಹಳೆಯ ಸಂಪ್ರದಾಯವನ್ನು ಮುಂದುವರೆಸಿದ್ದಾರೆ. ಶಿವಣ್ಣ ಅವರ ಅಜ್ಜಿ ಪುನರ್ವಸತಿ ಕಲ್ಪಿತ ದೇವದಾಸಿಯಾಗಿದ್ದರು.
ದೇವದಾಸಿ ಪದ್ಧತಿ ನಿರ್ಮೂಲನೆಗೆ ರಾಜ್ಯ ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಅದಾಗಿಯೂ ಸಮಾಜ ಭಿನ್ನ ಮಾರ್ಗಗಳ ಮೂಲಕ ಅದನ್ನು ಜೀವಂತವಾಗಿಡಲು ಸತತವಾಗಿ ಪ್ರಯತ್ನಿಸುತ್ತಿದೆ. ಈ ಸಲ ಮಹಿಳೆ ಬದಲಾಗಿ ಪುರುಷನನ್ನು ದೇವರಿಗಾಗಿ ಸಮರ್ಪಿಸಿರುವುದು ವಿಶೇಷ.
ದಾಸಪ್ಪ ಅಥವಾ ಶಿವಣ್ಣ ಅವರು ಆಧ್ಯಾತ್ಮಿಕ ಜೀವನ ಒಪ್ಪಿಕೊಂಡಿದ್ದರೂ ವೈವಾಹಿಕ ಜೀವನ ನಡೆಸಬಹುದು. ಅವರನ್ನು ಯಾವುದೇ ಕಾರಣಕ್ಕೂ ಲೈಂಗಿಕ ಶೋಷಣೆಗೆ ದೂಡುವಂತಿಲ್ಲ. ಚಲವಾದಿ, ನಾಯಕ, ಮಾದಿಗ, ಉಪ್ಪಾರ ಸಮುದಾಯಗಳಲ್ಲಿ ಈಗಲೂ ಈ ಪದ್ಧತಿ ಆಚರಣೆಯಲ್ಲಿದೆ.