ಬೆಂಗಳೂರು: ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಹೆಸರಿನಲ್ಲಿ ನೀಡುತ್ತಿರುವ ಪ್ರಶಸ್ತಿಗೆ ಆಯ್ಕೆಯಾದ ಸಾಧಕರ ಹೆಸರನ್ನು ಸರ್ಕಾರ ಗುರುವಾರ ಪ್ರಕಟಿಸಿದೆ.
ಪ್ರವಾಹ ಮತ್ತು ಕೋವಿಡ್ ಕಾರಣದಿಂದ ಕಳೆದ ಮೂರು ವರ್ಷಗಳಿಂದ ಪ್ರಶಸ್ತಿ ನೀಡಿರಲಿಲ್ಲ. ಮೂರು ವರ್ಷಗಳ ಪ್ರಶಸ್ತಿಯ ಆಯ್ಕೆಗಾಗಿ ರಚಿಸಲಾಗಿದ್ದ ಆಯ್ಕೆ ಸಮಿತಿ ಅರ್ಹರನ್ನು ಆಯ್ಕೆ ಮಾಡಿದೆ. ಶುಕ್ರವಾರ (ಆ.20) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಪ್ರಶಸ್ತಿ ಪ್ರದಾನ ಮಾಡುವರು ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಪ್ರಶಸ್ತಿಯು ₹ 5 ಲಕ್ಷ, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ ಒಳಗೊಂಡಿದೆ ಎಂದು ಅವರು ತಿಳಿಸಿದರು.
ಪ್ರಶಸ್ತಿ ವಿಜೇತರ ಪರಿಚಯ:
ಬಸವಪ್ರಭು ಲಖಮಗೌಡ ಪಾಟೀಲ(2019–20) ಬೆಳಗಾವಿ ಜಿಲ್ಲೆಯ ಅಥಣಿಯ ಇವರು ದೇಶದಲ್ಲೇ ಮೊದಲ ಬಾರಿಗೆ ದೇವದಾಸಿ/ ವೇಶ್ಯೆಯರ ಮಕ್ಕಳಿಗಾಗಿ ವಸತಿ ಶಾಲೆಯನ್ನು ಆರಂಭಿಸಿದರು. ಬಡವರು ಮತ್ತು ದಲಿತರಿಗೆ ಕಾನೂನು ನೆರವು, ಜನತಾ ನ್ಯಾಯಾಲಯ ನಡೆಸಿಕೊಂಡು ಬಂದಿದ್ದಾರೆ.
ಎಸ್.ಜಿ.ಸುಶೀಲಮ್ಮ(2020–21) ಬೆಂಗಳೂರು ಚಾಮರಾಜಪೇಟೆಯ ಇವರು ಸುಮಂಗಲಿ ಸೇವಾಶ್ರಮದ ಮೂಲಕ ದಿಕ್ಕುಗಾಣದ ಅನಾಥ ಮತ್ತು ನೊಂದ ಹೆಣ್ಣು ಮಕ್ಕಳ ಏಳಿಗೆಗಾಗಿ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. 29 ಯೋಜನೆಗಳ ಮೂಲಕ 15 ಲಕ್ಷ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಿದೆ.
ಕೆ. ಭಾಸ್ಕರ ದಾಸ್ ಎಕ್ಕಾರು(2021–22) ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ತೆಂಕ ಎಕ್ಕಾರು ಗ್ರಾಮದ ಇವರು ಅಲೆಮಾರಿ ಸೂಕ್ಷ್ಮ, ಅತಿಸೂಕ್ಷ್ಮ, ಪರಿಶಿಷ್ಟ ಜಾತಿಯ 51, ಪರಿಶಿಷ್ಟ ಪಂಗಡಗಳ 23 ಮತ್ತು ಹಿಂದುಳಿದ ವರ್ಗಗಳ 46 ಸಮುದಾಯಗಳ ಅಲೆಮಾರಿಗಳನ್ನು ಮುಖ್ಯವಾಹಿನಿಗೆ ತರಲು ಶ್ರಮಿಸಿದ್ದಾರೆ.