ಬೆಂಗಳೂರು: ‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಒಬ್ಬ ಅವಿವೇಕಿ. ಅವರಿಗೆ ತಲೆ ಕೆಟ್ಟಿದೆ’ ಎಂದು ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.
ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ನಳಿನ್ ಕುಮಾರ್ ಕಟೀಲ್ ಅವರು ರಾಹುಲ್ ಗಾಂಧಿ ಬಗ್ಗೆ ಮಾತನಾಡಿದ್ದಾರೆ. ಎಂಥ ಅವಿವೇಕಿಯನ್ನು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷನನ್ನಾಗಿ ಮಾಡಿದೆ ಎನ್ನುವುದನ್ನು ಇದು ತೋರಿಸುತ್ತದೆ’ ಎಂದರು.
‘ನಳಿನ್ ಕುಮಾರ್ ಕಟೀಲ್ ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ. ಬಿಜೆಪಿ ಅಧ್ಯಕ್ಷರಾದ ನಂತರ ಅವರು ಮನಸ್ಸು ಎಷ್ಟು ಕೊಳಕಾಗಿದೆ ಎನ್ನುವುದು ಗೊತ್ತಾಗುತ್ತದೆ. ಅವರಿಗೆ ಕ್ಷಮೆ ಕೇಳುವ ಅರ್ಹತೆಯೂ ಇಲ್ಲಕ. ಆ ಸ್ಥಾನದಿಂದ ಅವರನ್ನು ತಕ್ಷಣ ವಜಾ ಮಾಡಬೇಕು’ ಎಂದು ಆಗ್ರಹಿಸಿದರು.
ಮುಸ್ಲಿಂ ನಾಯಕರನ್ನು ಸಿದ್ದರಾಮಯ್ಯ ತುಳಿಯುತ್ತಿದ್ದಾರೆ ಎಂಬ ಎಚ್.ಡಿ. ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ದಿನೇಶ್, ‘ಕುಮಾರಸ್ವಾಮಿ ಅವರಿಗೆ ಯಾವುದೇ ಬದ್ಧತೆ. ತತ್ವ, ಸಿದ್ದಾಂತ ಯಾವುದೂ ಗೊತ್ತಿಲ್ಲ’ ಎಂದು ಟೀಕಿಸಿದರು.
‘ಸುತ್ತ 15 ಶಾಸಕರು ಇದ್ದರೆ ಅವರಿಗೆ ಸಾಕು ಅವರಿಗೆ. ಅವರು ಬ್ಲ್ಯಾಕ್ ಮೇಲ್ ರಾಜಕೀಯ ಮಾಡುತ್ತಿದ್ದಾರೆ. ಕಿಂಗ್ ಮೇಕರ್ ಆಗಬೇಕು ಅನ್ನುವುದಷ್ಟೆ ಅವರ ಉದ್ದೇಶ. ಅಧಿಕಾರಕ್ಕಾಗಿ ರಾಜಕಾರಣ ಮಾಡುತ್ತಿದ್ದಾರೆ’ ಎಂದೂ ಕಿಡಿಕಾರಿದರು.