ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಲ್ಟಾ ಹೊಡೆದ ದೂರುದಾರ: ಅನಾಮಧೇಯ ದೂರು ತನಿಖೆ ಅಗತ್ಯವಿಲ್ಲ ಎಂದ ಸರ್ಕಾರ

Last Updated 7 ಮಾರ್ಚ್ 2021, 21:09 IST
ಅಕ್ಷರ ಗಾತ್ರ

ಬೆಂಗಳೂರು: ಜಲ ಸಂಪನ್ಮೂಲ ಸಚಿವರಾಗಿದ್ದ ರಮೇಶ ಜಾರಕಿಹೊಳಿ ಯುವತಿಯೊಬ್ಬಳನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿನೀಡಿದ್ದ ದೂರನ್ನು ಹಿಂಪಡೆಯುವುದಾಗಿ ಸಾಮಾಜಿಕ ಕಾರ್ಯಕರ್ತ ದಿನೇಶ್‌ ಕಲ್ಲಹಳ್ಳಿ ಭಾನುವಾರ ದಿಢೀರ್‌ ಬೆಳವಣಿಗೆಯಲ್ಲಿ ತಿಳಿಸಿದ್ದಾರೆ.

ರಮೇಶ ಜಾರಕಿಹೊಳಿ ವಿರುದ್ಧ ಇದೇ 2ರಂದು ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದ ದಿನೇಶ್‌, ಪ್ರಕರಣಕ್ಕೆ ಸಂಬಂಧಿಸಿದ್ದು ಎನ್ನಲಾದ ವಿಡಿಯೊ ಮತ್ತು ಆಡಿಯೊ ತುಣುಕುಗಳುಳ್ಳ ಸಿ.ಡಿಗಳನ್ನು ಸಲ್ಲಿಸಿದ್ದರು. ಮರುದಿನ ರಮೇಶ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಶನಿವಾರ ಪೊಲೀಸ್‌ ಠಾಣೆಗೆ ಹಾಜರಾಗಿದ್ದ ದಿನೇಶ್‌, ಭಾನುವಾರ ಮಧ್ಯಾಹ್ನ ವಕೀಲರ ಮೂಲಕ ಐದು ಪುಟಗಳ ಪತ್ರ ರವಾನಿಸಿ, ದೂರು ಹಿಂಪಡೆಯುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.

‘ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇನೆ’ ಎಂದು ಆಗಾಗ ಹೇಳುತ್ತಲೇ ಇದ್ದ ದಿನೇಶ್‌ ಕಲ್ಲಹಳ್ಳಿ, ದಿಢೀರ್‌ ದೂರು ಹಿಂಪಡೆಯುವ ನಿರ್ಧಾರಕ್ಕೆ ಬಂದಿದ್ದಾರೆ. ದೂರು ಹಿಂಪಡೆಯುವಂತೆ ರಾಜಕೀಯ ಒತ್ತಡಗಳು ಬಂದಿಲ್ಲ ಎಂದು ಅವರು ಹೇಳಿದ್ದಾರೆ.

‘ಸಿ.ಡಿ ಬಿಡುಗಡೆ ಹಿಂದೆ ₹ 5 ಕೋಟಿ ಡೀಲ್‌ ನಡೆದಿದೆ ಎಂದು ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ಇದರಿಂದ ನೊಂದು ಮತ್ತು ಸಂತ್ರಸ್ತೆ ಚಾರಿತ್ರ್ಯಹರಣಕ್ಕೆ ನಡೆಯುತ್ತಿರುವ ಕಾರಣ ದೂರು ಹಿಂಪಡೆಯಲು ನಿರ್ಧರಿಸಿದೆ’ ಎಂದರು.

ಹೊಸ ಸುತ್ತೋಲೆ ಅನ್ವಯ?: ಸರ್ಕಾರಿ ಅಧಿಕಾರಿಗಳು ಮತ್ತು ನೌಕರರ ವಿರುದ್ಧ ಬರುವ ಅನಾಮಧೇಯ ದೂರು ಆಧರಿಸಿ ತನಿಖೆ ನಡೆಸುವ ಅಗತ್ಯವಿಲ್ಲ ಎಂಬ ಮಾ.5 ರಂದುಸುತ್ತೋಲೆ ಹೊರಡಿಸಲಾಗಿದೆ. ದೂರುದಾರರ ವಿಳಾಸ ಖಚಿತ
ಪಡಿಸಿಕೊಂಡು, ಪೂರಕ ದಾಖಲೆಗಳನ್ನು ಪಡೆದು, ಮೇಲ್ನೋಟಕ್ಕೆ ಸತ್ಯ ಎನಿಸಿದರಷ್ಟೇ ಪ್ರಾಥಮಿಕ ವಿಚಾರಣೆ ನಡೆಸಬೇಕು ಎಂದು ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಈ ಸುತ್ತೋಲೆಯನ್ನು ಈಗಿನ ಸಿ.ಡಿ ಪ್ರಕರಣಕ್ಕೂ ಅನ್ವಯಿಸಿ ಸಂತ್ರಸ್ತೆ ಎನ್ನಲಾದ ಯುವತಿ ದೂರು ನೀಡಲು ಬಾರದಿದ್ದರೆ ಪ್ರಕರಣ ಮುಕ್ತಾಯಗೊಳಿಸುವ ಯೋಚನೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಸಿಬಿಐ ತನಿಖೆಗೆ ಆಗ್ರಹ: ಈ ಎಲ್ಲ ಬೆಳವಣಿಗೆಗಳ ನಡುವೆಯೇ ಭಾನುವಾರ ತುರ್ತು ಪತ್ರಿಕಾಗೋಷ್ಠಿ ನಡೆಸಿದ ರಮೇಶ ಜಾರಕಿಹೊಳಿ ಅವರ ತಮ್ಮ, ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ, ‘ಬಿಜೆಪಿ ಮತ್ತು ತಮ್ಮ ಕುಟುಂಬದ ವಿರುದ್ಧದ ಸಂಚಿನ ಭಾಗವಾಗಿ ಸಿ.ಡಿ ಬಿಡುಗಡೆ ಆಗಿದೆ. ಈ ಬಗ್ಗೆ ಸಿಬಿಐ ಅಥವಾ ಸ್ವತಂತ್ರ ಸಂಸ್ಥೆಯಿಂದ ತನಿಖೆಗೆ ಆದೇಶಿಸಬೇಕು’ ಎಂದು ಆಗ್ರಹಿಸಿದರು.

‘ರಮೇಶ ಅವರನ್ನು ಸಚಿವ ಸ್ಥಾನದಿಂದ ಕೆಳಕ್ಕೆ ಇಳಿಸುವುದು ಮತ್ತು ಐದು ರಾಜ್ಯಗಳ ಚುನಾವಣೆ ಸಮಯದಲ್ಲಿ ಬಿಜೆಪಿಗೆ ಮುಜುಗರ ಮೂಡಿಸುವುದು ಈ ಕೃತ್ಯದ ಹಿಂದಿನ ಉದ್ದೇಶ. ಇಬ್ಬರು ಯೋಜನೆ ರೂಪಿಸಿದ್ದು, ಮೂವರ ಒಂದು ತಂಡ ಮತ್ತು ನಾಲ್ವರ ಒಂದು ತಂಡ ಕಾರ್ಯರೂಪಕ್ಕೆ ತಂದಿವೆ. ಇಬ್ಬರು ಸಿಕ್ಕರೆ ಉಳಿದ ಎಲ್ಲರೂ ಪತ್ತೆಯಾಗುತ್ತಾರೆ’ ಎಂದರು.

‘ಈ ಕೃತ್ಯಕ್ಕೆ ₹ 15 ಕೋಟಿ ವಿನಿಯೋಗಿಸಲಾಗಿದೆ. ಆ ಯುವತಿಗೆ ₹ 50 ಲಕ್ಷ ಮತ್ತು ದುಬೈನಲ್ಲಿ ಉದ್ಯೋಗದ ಆಮಿಷ ಒಡ್ಡಲಾಗಿತ್ತು. ‘ಹನಿಟ್ರ್ಯಾಪ್‌’ ಮೂಲಕ ರಮೇಶ ತೇಜೋವಧೆಗೆ ಯತ್ನಿಸಿದ್ದರು. ಕೊನೆಯಲ್ಲಿ ನಕಲಿ ಸಿ.ಡಿ ತಯಾರಿಸಿ ಬಿಡುಗಡೆ ಮಾಡಿದ್ದಾರೆ. ಅದನ್ನು ರಷ್ಯಾದಲ್ಲಿ ಯುಟ್ಯೂಬ್‌ಗೆ ಅಪ್‌ಲೋಡ್‌ ಮಾಡಲಾಗಿದೆ’ ಎಂದು ಬಾಲಚಂದ್ರ ಆರೋಪಿಸಿದರು.

‘ಸಿ.ಡಿ ಅಸಲಿಯಲ್ಲ. ಈ ಕುರಿತು ಪರೀಕ್ಷೆ ಮಾಡಿಸಬೇಕು. ತಾವೂ ಖಾಸಗಿಯಾಗಿ ತನಿಖೆ ನಡೆಸಲು ಸಿದ್ಧ. ತಿಂಗಳೊಳಗೆ ಸತ್ಯಾಂಶ ತೆರೆದಿಡಲಾಗುವುದು. ದಿನೇಶ್ ಕಲ್ಲಹಳ್ಳಿ ಕೂಡ ದುರುಪಯೋಗಕ್ಕೆ ಒಳಗಾಗಿರಬಹುದು’ ಎಂದರು.

‘ಆ ಯುವತಿಯನ್ನು ‘ಸಂತ್ರಸ್ತೆ’ ಎಂದು ಯಾರೂ ಕರೆಯಬೇಡಿ. ರಾಜ್ಯದಲ್ಲಿ ‘ಹನಿಟ್ರ್ಯಾಪ್‌’ ಮಾಡುವುದಕ್ಕಾಗಿಯೇ ತಂಡವಿದೆ. ಅವರ ಮೊಬೈಲ್‌ ನಂಬರ್‌ ಸೇರಿ ಎಲ್ಲ ವಿವರಗಳನ್ನೂ ಪೊಲೀಸರು ಸಂಗ್ರಹಿಸಿದ್ದಾರೆ’ ಎಂದರು.

ಸಿ.ಡಿ ಬೆದರಿಕೆ ತಡೆಗೆ ಕಾನೂನು
‘ಸಚಿವರು, ಶಾಸಕರು ಸೇರಿದಂತೆ ರಾಜಕಾರಣಿಗಳ ವಿರುದ್ಧ ಸಿ.ಡಿಗಳನ್ನು ಸೃಷ್ಟಿಸಿ, ಬೆದರಿಕೆ ಒಡ್ಡುವುದನ್ನು ತಡೆಯಲು ಕಾನೂನು ರಚಿಸುವಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದೇವೆ. ಹಲವು ಶಾಸಕರು ಈ ಒತ್ತಾಯ ಮಾಡಿದ್ದಾರೆ. ಗೃಹ ಸಚಿವರು ಈಗಾಗಲೇ ಮಸೂದೆಯ ಕರಡು ಸಿದ್ಧಪಡಿಸುತ್ತಿದ್ದಾರೆ’ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.

‘ತನಿಖೆ ಮುಂದುವರಿಯಲಿದೆ’
‘ಸಂತ್ರಸ್ತೆಯ ಹೇಳಿಕೆ ಇಲ್ಲದೇ ನೀಡಿದ ದೂರನ್ನು ಸ್ವೀಕರಿಸಿದ ನಂತರ ತನಿಖೆ ನಡೆಸಿ, ಎಫ್‌ಐಆರ್‌ ದಾಖಲಿಸಲು 15 ದಿನಗಳ ಕಾಲಾವಕಾಶವಿದೆ. ತನಿಖೆ ಮುಂದುವರಿದಿದ್ದು, ಈ ಹಂತದಲ್ಲಿ ದೂರು ಹಿಂಪಡೆಯಲು ಅವಕಾಶವಿಲ್ಲ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ದಿನೇಶ್‌ ಕಲ್ಲಹಳ್ಳಿ ಪರವಾಗಿ ವಕೀಲರು ಪತ್ರ ತಲುಪಿಸಿದ್ದಾರೆ. ದೂರುದಾರರನ್ನೇ ಠಾಣೆಗೆ ಕಳುಹಿಸುವಂತೆ ಸೂಚಿಸಲಾಗಿದೆ. ಅವರು ಬಂದ ಬಳಿಕ ಮತ್ತಷ್ಟು ಮಾಹಿತಿ ಪಡೆಯಲಾಗುವುದು. ಸಾಕ್ಷ್ಯಗಳನ್ನು ಸಂಗ್ರಹಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಈ ಮಾತನ್ನೇ ವಕೀಲರಿಗೂ ತಿಳಿಸಲಾಗಿದೆ’ ಎಂದು ಮೂಲಗಳು ಹೇಳಿವೆ.

*
ರಮೇಶ ಜಾರಕಿಹೊಳಿ ಮೊದಲು ಮನೆಯಿಂದ ಹೊರಬಂದು ಪೊಲೀಸರಿಗೆ ದೂರು ನೀಡಬೇಕು. ಅವರನ್ನು ಭೇಟಿ ಮಾಡಿ ಈ ಬಗ್ಗೆ ಮನವೊಲಿಸುತ್ತೇನೆ.
–ಬಾಲಚಂದ್ರ ಜಾರಕಿಹೊಳಿ

*
ರಮೇಶ ಜಾರಕಿಹೊಳಿ ಯಾಕೆ ರಾಜೀನಾಮೆ ನೀಡಿದರು? ಸುಸಂಸ್ಕೃತರಾಗಿದ್ದರೆ ಆರು ಸಚಿವರು ಕೋರ್ಟ್‌ನಿಂದ ತಡೆಯಾಜ್ಞೆ ತರುತ್ತಿದ್ದರೇ?
–ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

*
ಶಾಸಕರ ಹೆಸರು ಕೇಳಿದಾಕ್ಷಣ ಜನರು ‘ಛೀ... ಥೂ... ಕಳ್ಳ...’ ಎಂದು ಉಗುಳುತ್ತಿದ್ದಾರೆ. ಇಂಥ ಕೆಟ್ಟ ಪರಿಸ್ಥಿತಿಯನ್ನು ಬಿಜೆಪಿ ಶಾಸಕರು ತಂದಿಟ್ಟಿದ್ದಾರೆ.
–ಡಿ.ಕೆ. ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT