ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರಸಭೆ ಮಹಿಳಾ ಸದಸ್ಯೆ ಮೇಲೆ ದೌರ್ಜನ್ಯ ಪ್ರಕರಣ ಅಧಿವೇಶನದಲ್ಲಿ ಪ್ರಸ್ತಾವ: ಡಿಕೆಶಿ

Last Updated 5 ಡಿಸೆಂಬರ್ 2020, 10:33 IST
ಅಕ್ಷರ ಗಾತ್ರ

ಬೆಂಗಳೂರು: ‘ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರ ಪುರಸಭೆ ಮಹಿಳಾ ಸದಸ್ಯೆಯ ನಡೆದ ದೌರ್ಜನ್ಯ ಪ್ರಕರಣದಲ್ಲಿ ಮುಖ್ಯಮಂತ್ರಿಯಾಗಲಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಲಿ, ಬಿಜೆಪಿ ಮಹಿಳಾ ಸಂಘಟನೆಗಳಾಗಲಿ ಮೌನ ವಹಿಸಿರುವುದೇಕೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.

ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಈ ವಿಚಾರವಾಗಿ ನಾನು ಮತ್ತು ವಿರೋಧ ಪಕ್ಷದ ನಾಯಕರು, ಮಹಿಳಾ ಶಾಸಕರು ಸಂತ್ರಸ್ತೆಯ ಪರ ನಿಲ್ಲುತ್ತೇವೆ. ಅಧಿವೇಶನದಲ್ಲೂ ಈ ವಿಷಯ ಪ್ರಸ್ತಾಪಿಸಿ, ಹೋರಾಟ ಮಾಡುತ್ತೇವೆ’ ಎಂದರು.

‘ಭ್ರೂಣ ಹತ್ಯೆ ಎಂದರೆ ಕೊಲೆಗೆ ಸಮ. ಜತೆಗೆ ಮಹಿಳೆಯರ ಮೇಲೆ ಹಲ್ಲೆ, ದೌರ್ಜನ್ಯ ನಡೆದಿದೆ. ಇದು ಮಾನಭಂಗ ಹಾಗೂ ದೌರ್ಜನ್ಯ ಪ್ರಕರಣ. ಮಹಾಭಾರತದಲ್ಲಿ ದುಶ್ಶಾಸನನ ದೌರ್ಜನ್ಯ ಕಣ್ಣೆದುರು ಕಂಡಂತೆ ಈ ಪ್ರಕರಣವನ್ನು ಮಾಧ್ಯಮಗಳು ತೋರಿಸಿವೆ. ಆದರೂ, ಪೊಲೀಸರು ಪ್ರಕರಣ ದಾಖಲಿಸಿ, ಯಾರೊಬ್ಬರನ್ನೂ ಬಂಧಿಸಿಲ್ಲ’ ಎಂದು ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

‘ಮುಖ್ಯಮಂತ್ರಿಗಳಾಗಲಿ, ಮಹಿಳಾ ಸಚಿವರಾಗಲಿ, ಶೋಭಾ ಕರಂದ್ಲಾಜೆಯಾಗಲಿ, ದೇಶದಲ್ಲಿರುವ ಮಹಿಳಾ ಸಂಘಟನೆಗಳಾಗಲಿ ಯಾರೊಬ್ಬರೂ ಈ ಬಗ್ಗೆ ಬಾಯಿ ಬಿಟ್ಟಿಲ್ಲ. ಇದು ಕೇವಲ ದೇಶ ಮಟ್ಟದಲ್ಲ, ಅಂತರರಾಷ್ಟ್ರೀಯ ಮಟ್ಟದ ಪ್ರಕರಣ. ಬಿಜೆಪಿಯವರು ದೌರ್ಜನ್ಯ ಎಸಗಿದ ತಮ್ಮ ಶಾಸಕನ ರಕ್ಷಣೆಗಾಗಿ ನಿಂತಿರುವುದು ನಾಚಿಕೆಗೇಡಿನ ವಿಚಾರ. ಮುಖ್ಯಮಂತ್ರಿಗಳೇ ಇದೇ ಪರಿಸ್ಥಿತಿ ನಿಮ್ಮ ಮನೆಯ ಹೆಣ್ಣುಮಕ್ಕಳಿಗೆ ಬಂದಿದ್ದರೆ, ಶೋಭಾ ಕರಂದ್ಲಾಜೆ ಅವರೇ ಹಾಗೂ ಶಶಿಕಲಾ ಜೊಲ್ಲೆ ಅವರೇ ನಿಮಗೆ ಈ ರೀತಿ ಆಗಿದ್ದರೆ ಏನು ಮಾಡುತ್ತಿದ್ದಿರಿ’ ಎಂದೂ ಪ್ರಶ್ನಿಸಿದರು.

‘ಈ ಪ್ರಕರಣ ಮಾನವೀಯತೆ ಹಾಗೂ ಹೆಣ್ಣಿನ ಕುಲಕ್ಕೆ ಮಾಡಿರುವ ಅಪಮಾನ. ದೌರ್ಜನ್ಯಕ್ಕೆ ಒಳಗಾದ ಮಹಿಳೆಯೇ ಆ ಘಟನೆಗೆ ಕಾರಣರಾದವರ ಬಗ್ಗೆ ಹೇಳಿದ ನಂತರವೂ ಇನ್ನು ಅವರನ್ನು ಬಂಧಿಸಿಲ್ಲ ಎಂದರೆ, ಈ ಸರ್ಕಾರದಲ್ಲಿ ಮಹಿಳೆಯರಿಗೆ ಯಾವ ರೀತಿಯ ರಕ್ಷಣೆ, ಗೌರವ ಸಿಗುತ್ತದೆ ಎಂಬುದು ಗೊತ್ತಾಗುತ್ತದೆ’ ಎಂದರು.

ಅಧಿಕಾರಕ್ಕಾಗಿ ಸಮಾಜ ಒಡೆಯಲಾಗುತ್ತಿದೆ: ‘ಅಧಿಕಾರಕ್ಕಾಗಿ ಬಿಜೆಪಿಯು ಸಮಾಜವನ್ನು ಜಾತಿ, ಧರ್ಮ ಹಾಗೂ ಇತರೆ ವಿಚಾರವಾಗಿ ಒಡೆದು ಆಳುತ್ತಿದೆ. ಈ ಬಗ್ಗೆ ನಾನು ಮುಂದಿನ ದಿನಗಳಲ್ಲಿ ಮಾತನಾಡುತ್ತೇನೆ. ಪ್ರಾಧಿಕಾರ ರಚನೆ ವಿಚಾರವಾಗಿ ನಾವು ಈಗಲೇ ಮಾತನಾಡುವುದಿಲ್ಲ. ಅದನ್ನು ಯಾವ ಕಾರಣಕ್ಕಾಗಿ ಮಾಡಿದ್ದಾರೆ? ಬಡವರು, ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದವರ ಅಭಿವೃದ್ಧಿಗೆ ಮಾಡಿದರೆ ನಾವು ವಿರೋಧಿಸುವುದಿಲ್ಲ. ಆದರೆ, ರಾಜಕೀಯ ಉದ್ದೇಶದಿಂದ ಮಾಡುವುದು ಸರಿಯಲ್ಲ' ಎಂದು ಅಭಿಪ್ರಾಯಪಟ್ಟರು.

ಲವ್ ಜಿಹಾದ್ ಹಾಗೂ ಗೋಹತ್ಯೆ ನಿಷೇಧ ಕಾಯ್ದೆ ವಿಚಾರದಲ್ಲಿ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT