ಚಿಂಚೋಳಿ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನನಾಗಾಈದಲಾಯಿ ಕೆರೆ 28 ಹೆಕ್ಟೇರ್ ಪ್ರದೇಶದಲ್ಲಿ ಹರಡಿಕೊಂಡಿದ್ದು,ನೀರು ತುಂಬಿಕೊಂಡು ನಳನಳಿಸುತ್ತಿತ್ತು. ಈಚೆಗೆ ಸುರಿದ ಭಾರಿ ಮಳೆಯಿಂದ ತಡೆಗೋಡೆ ಕೊಚ್ಚಿಹೋಗಿ ಈಗ ಕೆರೆಯಲ್ಲಿಯ ನೀರೆಲ್ಲ ಖಾಲಿಯಾಗಿದೆ. ಊರಿಗೆ ಆಧಾರವಾಗಿದ್ದ ಕೆರೆ ಈಗ ಕೆಸರು ಗದ್ದೆಯಂತಾಗಿದೆ.
ತಾಲ್ಲೂಕಿನ ದೋಟಿಕೊಳ, ಹುಲ್ಸಗೂಡ, ಹೂಡದಳ್ಳಿ ಬೃಹತ್ ಕೆರೆಗಳೂ ಒಡೆದಿದ್ದು, ಎಲ್ಲ ನೀರು ಹರಿದು ಹೋಗಿದೆ. ಈ ಕೆರೆಗಳು ಸರಾಸರಿ ತಲಾ 350 ಎಕರೆ ಪ್ರದೇಶಕ್ಕೆ ನೀರಾವರಿಗೆ ಮೂಲವಾಗಿದ್ದವು. ಇತರೆ ಸಣ್ಣಪುಟ್ಟ ಕೆರೆಗಳಿಗೂ ಹಾನಿಯಾಗಿದೆ.
‘ನಾಗಾಈದಲಾಯಿ ಕೆರೆಯು ನಾಗಾಈದಲಾಯಿ ತಾಂಡಾ, ಕುಸ್ರಂಪಳ್ಳಿ, ಕುಸ್ರಂಪಳ್ಳಿ ತಾಂಡಾ ರೈತರ ಜಾನುವಾರುಗಳ ದಾಹ ನೀಗಿಸುತ್ತಿತ್ತು. ಈಗ ನೀರಿಲ್ಲದೇ ಮುಂದೇನು ಎಂಬ ಚಿಂತೆ ಕಾಡುತ್ತಿದೆ’ ಎನ್ನುತ್ತಾರೆ ಗ್ರಾಮಸ್ಥ ನೆಲ್ಲಿ ಮಲ್ಲಿಕಾರ್ಜುನ.
‘ಎರಡುವರ್ಷಗಳ ಹಿಂದೆ ಮಳೆಯ ಅಭಾವದಿಂದ ಕೆರೆ ಒಣಗಿತ್ತು. ರೈತರೇ ಕೂಡಿ ಹೂಳು ತೆಗೆದಿದ್ದೆವು. ಈಗ ಆ ಕೆರೆ ಒಡೆದು ಖಾಲಿ ಆಗಿದೆ’’ ಎಂದು ಹೂಡದಳ್ಳಿಯ ಬಸವರಾಜ ಬಿರಾದಾರ ಹೇಳಿದರು.
‘ನಮ್ಮೂರಿನ ಕೆರೆ ನಿರ್ಮಿಸಿ 51 ವರ್ಷಗಳು ಗತಿಸಿವೆ. ಭಾರಿ ಪ್ರವಾಹದಿಂದ ಬಂಡ್ಗೆ ಹಾನಿಯಾಗಿದೆ’ ಎನ್ನುತ್ತಾರೆ ದೋಟಿಹಾಳದ ವಿಠಲರಾವ್ ಕುಲಕರ್ಣಿ.
‘ಕೆರೆಗಳಿಗೆ ಉಂಟಾಗಿರುವ ಹಾನಿ ಸರಿಪಡಿಸಲು ಅಂದಾಜು ₹ 15 ಕೋಟಿ ಅನುದಾನದ ಅಗತ್ಯವಿದೆ’ ಎನ್ನುವುದು ಸಣ್ಣ ನೀರಾವರಿ ಇಲಾಖೆಯ ಉಪ ವಿಭಾಗದ ಎಇಇ ಶಿವಶರಣಪ್ಪ ಕೇಶ್ವಾರ್ ಅವರ ಹೇಳಿಕೆ.