ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು, ಕಡೂರು, ತರೀಕೆರೆ, ಅಜ್ಜಂಪುರ ಮತ್ತು ಚಿತ್ರದುರ್ಗ ಜಿಲ್ಲೆಯ ಗ್ರಾಮಗಳು, ಪಟ್ಟಣಗಳು ಮತ್ತು ಜನವಸತಿಗಳಿಗೆ ₹ 1,829 ಕೋಟಿ ವೆಚ್ಚದಲ್ಲಿ ಭದ್ರಾ ಜಲಾಶಯದಿಂದ ಕುಡಿಯುವ ನೀರು ಪೂರೈಸುವ ಯೋಜನೆಗೆ ಸಂಪುಟ ಸಭೆ ಗುರುವಾರ ಒಪ್ಪಿಗೆ ನೀಡಿದೆ.
ಲಕ್ಕವಳ್ಳಿಯಲ್ಲಿರುವ ಭದ್ರಾ ಜಲಾಶಯದಿಂದ ಕೊಳವೆ ಮಾರ್ಗದ ಮೂಲಕ ಚಿಕ್ಕಮಗಳೂರು ತಾಲ್ಲೂಕಿನ 136 ಗ್ರಾಮಗಳು, ಕಡೂರು ತಾಲ್ಲೂಕಿನ 436 ಗ್ರಾಮಗಳು, ತರೀಕೆರೆ ತಾಲ್ಲೂಕಿನ 156 ಗ್ರಾಮಗಳು, ಅಜ್ಜಂಪುರ ಪಟ್ಟಣ ಹಾಗೂ ಸುತ್ತಮುತ್ತಲಿನ 172 ಜನವಸತಿಗಳು ಮತ್ತು ಹೊಸದುರ್ಗ ತಾಲ್ಲೂಕಿನ 346 ಗ್ರಾಮಗಳಿಗೆ ಈ ಯೋಜನೆಯಿಂದ ಕುಡಿಯುವ ನೀರು ಪೂರೈಸಲಾಗುವುದು ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.
‘ಐದೂ ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ಅಭಾವವಿದೆ. ಭದ್ರಾ ಜಲಾಶಯದಿಂದ ಕುಡಿಯುವ ನೀರು ಪೂರೈಸಲು ಯಾವುದೇ ಅನುಮತಿ ಪಡೆಯಬೇಕಿಲ್ಲ’ ಎಂದು ಹೇಳಿದರು.