ಬೆಂಗಳೂರು: ‘ಶಾಲೆ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳನ್ನು ನಿರ್ಲಕ್ಷಿಸದೆ, ಅವರ ಬಗ್ಗೆ ಸಹಾನುಭೂತಿಯಿಂದ ವರ್ತಿಸುವಂತೆ ಚಾಲಕ, ನಿರ್ವಾಹಕರಿಗೆ ನಿರ್ದೇಶನ ನೀಡಬೇಕು’ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಬಳಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.
ಸವದಿಗೆ ಪತ್ರ ಬರೆದಿರುವ ಅವರು, ‘ರಾಜ್ಯದ ವಿವಿಧೆಡೆ ಗ್ರಾಮಾಂತರ ಪ್ರದೇಶಗಳ ಅನೇಕ ವಿದ್ಯಾರ್ಥಿಗಳು ಶಾಲೆ, ಕಾಲೇಜಿಗೆ ಹೊರಟಾಗ ಬಸ್ ನಿಲ್ದಾಣಗಳಲ್ಲಿ ಬಸ್ ನಿಲ್ಲಿಸದೆ ಕೆಎಸ್ಆರ್ಟಿಸಿ ಕೆಲವು ಚಾಲಕರು, ನಿರ್ವಾಹಕರು ನಿರ್ಲಕ್ಷ್ಯ ತೋರುತ್ತಿರುವುದು ಕಂಡುಬರುತ್ತಿದೆ' ಎಂದೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
'ನಾನು ಕಳೆದ ಶನಿವಾರ ತುಮಕೂರು ಜಿಲ್ಲೆಯ ಪ್ರವಾಸದಲ್ಲಿದ್ದಾಗ ಪಿನಗಾನಹಳ್ಳಿ ಮಾರ್ಗದ ಬಸ್ಸೊಂದು ನಿಲುಗಡೆ ಕಡ್ಡಾಯವಾಗಿದ್ದರೂ ಬಸ್ ನಿಲ್ಲದಿದ್ದಾಗ ವಿದ್ಯಾರ್ಥಿಗಳು ತೊಂದರೆ ಅನುಭವಿಸಿರುವುದನ್ನು ಗಮನಿಸಿದ್ದೇನೆ. ಬಸ್ ನಿಲ್ಲಿಸದಿದ್ದರೆ ಮಕ್ಕಳಿಗೆ ಆಗುವ ತೊಂದರೆ ಕುರಿತು ಆ ಬಸ್ ಚಾಲಕ ಮತ್ತು ನಿರ್ವಾಹಕರಿಗೆ ಮನದಟ್ಟು ಮಾಡಿದ್ದೇನೆ' ಎಂದೂ ಪತ್ರದಲ್ಲಿ ಅವರು ಸುರೇಶ್ಕುಮಾರ್ ಬರೆದಿದ್ದಾರೆ.