ಬೆಂಗಳೂರು:ವಿದ್ಯಾರ್ಥಿಗಳ ಗೊಂದಲಗಳಿಗೆ ತಜ್ಞರಿಂದ ಪರಿಹಾರ, ಪಿಯುಸಿ ನಂತರ ಮುಂದೇನು ಎನ್ನುವ ತೊಳಲಾಟದಲ್ಲಿರುವ ಮನಸ್ಸುಗಳಲ್ಲಿ ಭವಿಷ್ಯದ ಬದುಕು ರೂಪಿಸಿಕೊಳ್ಳುವ ಶಿಕ್ಷಣದ ಮಾಹಿತಿ, ಸಿಇಟಿ, ಕಾಮೆಡ್–ಕೆ ಕುರಿತ ವಿವರಗಳ ಅನಾವರಣ....
‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ವತಿಯಿಂದ ಶನಿವಾರನಗರದ ಜಯಮಹಲ್ ಪ್ಯಾಲೇಸ್ ಹೋಟೆಲ್ ಆವರಣದಲ್ಲಿಆಯೋಜಿಸಿದ್ದ ಕರ್ನಾಟಕದ ಅತಿ ದೊಡ್ಡ ಶೈಕ್ಷಣಿಕ ಮೇಳ ‘ಎಡ್ಯುವರ್ಸ್’ ಜ್ಞಾನ ದೇಗುಲ–2022 ಕಾರ್ಯಕ್ರಮದಲ್ಲಿವಿದ್ಯಾರ್ಥಿಗಳಿಗೆಶಿಕ್ಷಣ ಕ್ಷೇತ್ರಗಳ ಒಳನೋಟಗಳನ್ನು ಪರಿಚಯಿಸುವ ಮೂಲಕ ಸುಂದರ ಬದುಕು ರೂಪಿಸಿಕೊಳ್ಳುವ ಮಾರ್ಗ ತೋರಿಸುವ ಪ್ರಯತ್ನ ಮಾಡಲಾಯಿತು.
ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಉತ್ತಮ ಮಾರ್ಗದರ್ಶನ ಒದಗಿಸುವ ಉದ್ದೇಶದಈ ಶೈಕ್ಷಣಿಕ ಮೇಳದಲ್ಲಿ ವಿವಿಧೆಡೆಯಿಂದ ಬಂದಿದ್ದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪಿಯುಸಿ ಬಳಿಕ ಲಭ್ಯವಿರುವ ಕೋರ್ಸ್ಗಳು, ಅವಕಾಶಗಳ ಬಗ್ಗೆ ಮಾಹಿತಿ ತಜ್ಞರಿಂದ ದೊರೆಯಿತು. ಸಿಇಟಿ, ನೀಟ್, ಕಾಮೆಡ್–ಕೆ ಕೌನ್ಸೆಲಿಂಗ್ ಕುರಿತು ಅಧಿಕಾರಿಗಳ ಜತೆ ನೇರ ಸಂವಹನ ನಡೆಸುವ ಮೂಲಕ ವಿದ್ಯಾರ್ಥಿಗಳು ಮತ್ತು ಪೋಷಕರು ಗೊಂದಲಗಳನ್ನು ಪರಿಹರಿಸಿಕೊಂಡರು.
ಬಂಜಾರ ಅಕಾಡೆಮಿ ಸಂಸ್ಥಾಪಕ ಮತ್ತು ಅಧ್ಯಕ್ಷ ಡಾ. ಅಲಿ ಖ್ವಾಜಾ, ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬುವ ಮಾತುಗಳ ಮೂಲಕ ಮಾರ್ಗದರ್ಶನ ಮಾಡಿದರು.
ಕಾಮೆಡ್–ಕೆ ಕೌನ್ಸೆಲಿಂಗ್ ಕುರಿತು ಪ್ರೊ.ಶಾಂತಾರಾಮ ನಾಯಕ್, ಸಿಇಟಿ ಪ್ರಕ್ರಿಯೆ ಮತ್ತು ಕೌನ್ಸೆಲಿಂಗ್ ಕುರಿತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀನಿವಾಸಮೂರ್ತಿ ಹಾಗೂ ಮಲ್ಲೇಶ್ವರದ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಎಸ್. ರವಿಕುಮಾರ್ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.
ದೇಶದ ವಿವಿಧೆಡೆಯ 50ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಮಳಿಗೆಗಳನ್ನು ಮೇಳದಲ್ಲಿ ತೆರೆದಿದ್ದು, ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ವಿವಿಧ ಕೋರ್ಸ್ಗಳು ಮತ್ತು ಸೌಲಭ್ಯಗಳು ಕುರಿತು ಮಾಹಿತಿ ನೀಡಲಾಯಿತು.