ಬೆಂಗಳೂರು: ಪುನೀತ್ ಅವರ ಹತ್ತಾರು ಭಾವ ಭಂಗಿಗಳ ಬೃಹತ್ ಕಟೌಟ್ಗಳು. ಅವುಗಳಲ್ಲಿ ರಾರಾಜಿಸಿದ ಅಭಿಮಾನದ ಹಾರಗಳು. ಅಪ್ಪು ಸಮಾಧಿಗೆ ತುಳಸಿ ಹಾರ ಮತ್ತು ಬಿಳಿ ಹೂಗಳ ಸಿಂಗಾರ. ಭಾವಚಿತ್ರದ ಸುತ್ತ ಅಪ್ಪಟ ‘ಗಂಧದಗುಡಿ’ ಥೀಮ್ನ ಅಲಂಕಾರ. ಕಂಗೊಳಿಸುತ್ತಿದ್ದ ಅಪ್ಪು ಅವರ ನಗುಮೊಗದ ಭಾವಚಿತ್ರ. ಗೌರವನಮನ ಸಲ್ಲಿಸಲು ಬರುತ್ತಿದ್ದ ಸಾವಿರಾರು ಅಭಿಮಾನಿಗಳ ಸಾಲು...
ಇದು ನಗರದ ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಅಪ್ಪು ಸಮಾಧಿ ಬಳಿ ಕಂಡ ದೃಶ್ಯ. ನಟ ಪುನೀತ್ ರಾಜ್ಕುಮಾರ್ ಅವರು ಅಗಲಿಅ. 29ಕ್ಕೆ ಒಂದು ವರ್ಷ ತುಂಬಿದೆ. ಕಳೆದ ವರ್ಷ ಇದೇ ದಿನ ಹೃದಯಾಘಾತದಿಂದ ಅವರು ನಿಧನರಾಗಿದ್ದರು.
ಅಂದಿನಿಂದ ಇಂದಿನವರೆಗೂ ‘ಅಪ್ಪು’ ಅವರ ಅಭಿನಯದ ಕೊನೆಯ ಚಿತ್ರಗಳ ಬಿಡುಗಡೆ (ಜೇಮ್ಸ್, ಲಕ್ಕಿಮ್ಯಾನ್, ಗಂಧದ ಗುಡಿ), ಅವರ ಹೆಸರಿನಲ್ಲಿ ಸಮಾಜಸೇವಾ ಕಾರ್ಯಗಳ ಮೂಲಕ ಚಿತ್ರರಂಗ ಮತ್ತು ಅವರ ಅಭಿಮಾನಿಗಳು ಪುನೀತ್ ಅವರನ್ನು ಅಮರರನ್ನಾಗಿಸಿದ್ದರು.
ಇಂದು ಅದೇ ಅಭಿಮಾನ ಮತ್ತೆ ಉಕ್ಕಿ ಹರಿಯಿತು.ಪುನೀತ್ ಅವರ ಹೆಸರಿನಲ್ಲಿ ಅನ್ನದಾನ, ರಕ್ತದಾನ, ನೇತ್ರದಾನ ನಡೆದವು. ಸಂಗೀತ ತಂಡವೊಂದು ಪುನೀತ್ ಚಿತ್ರಗಳ ಗೀತಗಾಯನ ನಡೆಸಿಕೊಟ್ಟಿತು.
ಪುನೀತ್ ಪತ್ನಿ ಅಶ್ವಿನಿ,ಕಿರಿಯ ಪುತ್ರಿ ವಂದಿತಾ, ಸಹೋದರರಾದ ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಸೇರಿ ಕುಟುಂಬದ ಸದಸ್ಯರು, ಚಿತ್ರರಂಗದ ಗಣ್ಯರು ಸಮಾಧಿಗೆ ಗೌರವ ಸಲ್ಲಿಸಿದರು.