ಬೆಂಗಳೂರು: ಕೃತಕ ಬುದ್ಧಿಮತ್ತೆ, ಇಂಧನ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಕರ್ನಾಟಕ ಸರ್ಕಾರದ ಜತೆ ಸಹಭಾಗಿತ್ವ ವಹಿಸಲು ಫಿನ್ಲೆಂಡ್ ಉತ್ಸುಕವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.
ಕರ್ನಾಟಕ– ಫಿನ್ಲೆಂಡ್ ನಾವೀನ್ಯತಾ ಕಾರಿಡಾರ್ ಒಡಂಬಡಿಕೆ ಕುರಿತು ಭಾರತದಲ್ಲಿನ ಫಿನ್ಲೆಂಡ್ ರಾಯಭಾರಿ ರಿತಾ ಕೌಕು ರಾಂಡ್ ಅವರೊಂದಿಗೆ ಗುರುವಾರ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ವಾಣಿಜ್ಯ ವಹಿವಾಟು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಹಭಾಗಿತ್ವ ಹೊಂದಲು ಫಿನ್ಲೆಂಡ್ ಸಿದ್ಧವಿರುವುದಾಗಿ ಅಲ್ಲಿನ ರಾಯಭಾರಿ ತಿಳಿಸಿದ್ದಾರೆ’ ಎಂದರು.
ರಾಜ್ಯದಲ್ಲಿನ ನವೋದ್ಯಮಗಳ ಕಾರ್ಯನಿರ್ವಹಣೆ ಕುರಿತು ಆ ರಾಷ್ಟ್ರ ಹೆಚ್ಚು ಆಸಕ್ತಿ ತೋರಿದೆ. ರಾಜ್ಯದಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸಲು ಫಿನ್ಲೆಂಡ್ಗೆ ಅನುಮತಿ ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಮುಕ್ತ ಮನಸ್ಸು ಹೊಂದಿದೆ. ಶಿಕ್ಷಕರ ತರಬೇತಿಗಾಗಿ ಆ ದೇಶದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.
ಫಿನ್ಲೆಂಡ್ ನಿಯೋಗದಲ್ಲಿ ‘ಬಿಜಿನೆಸ್ ಫಿನ್ಲೆಂಡ್’ನ ಭಾರತೀಯ ನಿರ್ದೇಶಕ ಡಾ.ಜುಕ್ಕಾ ಹೋಲಪಾ, ದೂತವಾಸದ ಕಾನ್ಸುಲರ್ಗಳಾದ ಜುಕ್ಕಾ ಇಲೊಮಕಿ, ಡಾ.ಮಿಕಾ ಟಿರೋನೆನ್, ಫಿನ್ಲೆಂಡ್ ಚೇಂಬರ್ ಆಫ್ ಕಾಮರ್ಸ್ ಇನ್ ಇಂಡಿಯಾದ ಪ್ರತಿನಿಧಿ ಸುರೇಶ್ ಕುಮಾರ್ ಉಪಸ್ಥಿತರಿದ್ದರು.