ಭಾರತ್ ಜೋಡೊ ಯಾತ್ರೆಗೆ ಕರ್ನಾಟಕದ ಐವರ ಸಾಥ್

ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆಯಲ್ಲಿ ಕರ್ನಾಟಕದ ಐವರು 136 ದಿನವೂ ಹೆಜ್ಜೆ ಹಾಕಿದ್ದಾರೆ.
ಬೆಂಗಳೂರಿನ ಖುಷ್ವಂತ್ ರಾಜ ಶೇಖರಯ್ಯ, ಮೈಸೂರಿನ ಡಾ.ಸುಶ್ರುತಾ, ಪ್ಯಾರಿಜಾನ್, ಹುಬ್ಬಳ್ಳಿಯ ಕಿರಣ್, ಚನ್ನಬಸಪ್ಪ ಜಗಳಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಾರೆ.
‘ಕರ್ನಾಟಕದವರೆಗೆ ಪಾದಯಾತ್ರೆಯಲ್ಲಿ ಭಾಗವಹಿಸಬೇಕು ಎಂದು ನಿರ್ಧರಿಸಿ ಕನ್ಯಾಕುಮಾರಿಗೆ ಹೋಗಿದ್ದೆವು. ರಾಹುಲ್ ಗಾಂಧಿ ಅವರ ಜತೆ ನಡೆಯುತ್ತಾ ಸಾಗಿದಂತೆ ವಾಪಸ್ ಮರಳಲು ಮನಸ್ಸಾಗಲಿಲ್ಲ. ಕಾಲಲ್ಲಿ ಬೊಬ್ಬೆ ಬಂದರೂ ಅವರ ಜತೆ ಹೆಜ್ಜೆ ಹಾಕುತ್ತಾ ಅಂತಿಮ ಕ್ಷಣದವರೆಗೂ ಸಾಗಿದೆವು’ ಎಂದು ಖುಷ್ವಂತ್ ಪ್ರತಿಕ್ರಿಯಿಸಿದರು.
‘ಯಾತ್ರೆ ಉತ್ತರ ಭಾರತ ಪ್ರವೇಶಿಸಿದಾಗ ಅಳುಕಿತ್ತು. ಕಾಶ್ಮೀರ ಭಯೋತ್ಪಾದನೆ, ಅಲ್ಲಿನ ಸ್ಥಿತಿಗೆ ಹೆದರಿದ್ದೆವು. ಅಲ್ಲಿಗೆ ಹೋದಾಗ ಕಾಶ್ಮೀರಿಗಳ ಪ್ರೀತಿ ಕಂಡು ಸೋತಿದ್ದೇವೆ. ನಾವು ಅಂದುಕೊಂಡಿದ್ದಕ್ಕಿಂತ ಅವರು ಭಿನ್ನ. ಕೊರೆವ ಚಳಿಯಲ್ಲೂ ದಾರಿಯುದ್ದಕ್ಕೂ ಅಡುಗೆ ಮಾಡಿ ಬಡಿಸಿದರು’ ಎಂದು ಖುಷ್ವಂತ್ ಮಾಹಿತಿ ನೀಡಿದರು.
‘ಉತ್ತರದ ಕೆಲ ರಾಜ್ಯಗಳಲ್ಲಿ ದಕ್ಷಿಣದ ರಾಜ್ಯಗಳ ಬಗ್ಗೆ ತಪ್ಪು ತಿಳಿವಳಿಕೆಗಳು ಇರುವುದು ಯಾತ್ರೆಯಲ್ಲಿ ಗಮನಕ್ಕೆ ಬಂತು. ಅಂತಹ ತಾರತಮ್ಯ ವ್ಯವಸ್ಥಿತವಾಗಿ ಬಿತ್ತಲಾಗಿದೆ. ಇಂತಹ ಮನೋಭಾವ ತೊಲಗಿಸಲು ದಕ್ಷಿಣದ ರಾಜ್ಯಗಳು ಪ್ರಯತ್ನಿಸಬೇಕು’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.