ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಸಾಹಿತ್ಯ ಅಕಾಡೆಮಿ ಪ್ರಕಟಣೆಯಲ್ಲಿ ಲಂಕೇಶ್‌ಗೆ ಅಪಮಾನ

Last Updated 11 ಅಕ್ಟೋಬರ್ 2020, 13:14 IST
ಅಕ್ಷರ ಗಾತ್ರ
ADVERTISEMENT
""
""
""

ಸಾಂಸ್ಕೃತಿಕ ನೀತಿಯೊಂದು ರಾಜ್ಯದಲ್ಲಿ ರೂಪಿಸಬೇಕು ಎನ್ನುವ ಒತ್ತಾಯ ದೀರ್ಘಕಾಲದಿಂದ ಇದೆ. ಅದರ ಬೆನ್ನಿಗೆ ಈ ತನಕ ಅನೀತಿ ಇತ್ತೇ ಎನ್ನುವ ಪ್ರಶ್ನೆ ಕೂಡ ಕೇಳಿ ಬಂದಿದೆ. ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಚುನಾಯಿತ ಜನಪ್ರತಿನಿಧಿಗಳನ್ನೇ ಮೊದಲು ನೇಮಿಸಲಾಗುತ್ತಿತ್ತು. 1976ರ ನಂತರ ಅದು ಬದಲಾಯಿತು. ಆದರೆ ಈಗಲೂ ಸಾಂಸ್ಕೃತಿಕ ವಲಯದಲ್ಲಿ ರಾಜಕೀಯ ಹಸ್ತಕ್ಷೇಪ ತಪ್ಪಿಲ್ಲ. ರಾಜನೀತಿಯ ದೃಷ್ಟಿಯಲ್ಲಿ ಕಲೆ ಮತ್ತು ಸಂಸ್ಕೃತಿಯನ್ನು ನೋಡಬಾರದು ಎನ್ನುವ ಕಾಳಜಿ ಸಾಂಸ್ಕೃತಿಕ ನೀತಿಯ ಬೇಡಿಕೆಯನ್ನು ಮಂಡಿಸುತ್ತದೆ. ಈ ಬೇಡಿಕೆ ಹಿನ್ನೆಲೆಯಲ್ಲಿ ಸಂಸ್ಕೃತಿ ಚಿಂತಕ ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದ ಸಮಿತಿ ವರದಿಯೊಂದನ್ನು ಆರು ವರ್ಷದ ಹಿಂದೆ ಸರ್ಕಾರಕ್ಕೆ ಸಲ್ಲಿಸಿದೆ. ಸರ್ಕಾರ ವರದಿಯ ಕೆಲವು ಅಂಶವನ್ನು ಜಾರಿಗೊಳಿಸುವ ಬಗ್ಗೆ ಸಂಪುಟ ಸಭೆಯ ಅನುಮೋದನೆಯನ್ನು ಪಡೆದಿದೆ. ಆದರೂ ಈ ತನಕ ಆ ನೀತಿ ಜಾರಿಯಾಗಿಲ್ಲ.

ವಿಶ್ವವಿದ್ಯಾಲಯಗಳ ಉಪಕುಲಪತಿಗಳನ್ನು ನೇಮಕಾತಿ ಸಮಿತಿಯಂತೆ ಅಕಾಡೆಮಿ ಅಧ್ಯಕ್ಷರ ನೇಮಕದಲ್ಲಿಯೂ ಸಮಿತಿ ಒಂದು ಇರಬೇಕು. ರಾಜಕೀಯ ಸ್ಥಿತ್ಯಂತರಗಳು ಅವುಗಳ ಮೇಲೆ ಯಾವ ಪರಿಣಾಮವನ್ನೂ ಬೀರಬಾರದು. ಹಾಗಾದರೆ ‘ಪ್ರಭಾವಕ್ಕೆ’ ಒಂದಿಷ್ಟಾದರೂ ಕಡಿವಾಣ ಹಾಕಲು ಸಾಧ್ಯ ಇತ್ತು. ಜೊತೆಗೆ ಸರ್ಕಾರ ಬದಲಾದ ಕೂಡಲೇ ಎಲ್ಲ ಅಕಾಡೆಮಿ– ಪ್ರಾಧಿಕಾರಗಳ ಆಡಳಿತ ಮಂಡಳಿ ಬದಲಾಗುವುದಿಲ್ಲ.

ರಾಜಕೀಯ ಪಕ್ಷಗಳ ಕೃಪಾಪೋಷಿತ ವ್ಯವಸ್ಥೆಯ ಓಲೈಕೆ ಅನೇಕ ಎಡವಟ್ಟುಗಳನ್ನು ಆಗಾಗ ಮಾಡುತ್ತಿರುತ್ತದೆ. ಸಭೆ– ಸಮಾರಂಭದ ಔಚಿತ್ಯವನ್ನು ಮೀರಿದ ‘ಶಿಷ್ಟಾಚಾರ’ ಕೆಲವೊಮ್ಮೆ ಸಭಾ ಮರ್ಯಾದೆಗೆ ಧಕ್ಕೆ ತಂದಿದೆ. ಯಾವುದೋ ಪ್ರಭಾವಳಿ ಅಥವಾ ಮುಲಾಜಿನಿಂದ ಅಧಿಕಾರಕ್ಕೆ ಬಂದವರು ಇನ್ನೇನೋ ದಾಕ್ಷಿಣ್ಯಕ್ಕೆ ಒಳಗಾಗಿ ಅಕಾಡೆಮಿಯ ಉದ್ದೇಶಿತ ಕಾರ್ಯಕ್ಕಿಂತ ಕೃಪೆಯ ಕೃತಜ್ಞತೆ ಪ್ರದರ್ಶನವೇ ಹೆಚ್ಚಾಗುತ್ತದೆ. ಇದನ್ನು ತಪ್ಪಿಸಲು ರಾಜಕೀಯ ನಿರಪೇಕ್ಷಿತ ಒಂದು ವ್ಯವಸ್ಥೆ ಇರಬೇಕು. ಸಾಂಸ್ಕೃತಿಕ ನೀತಿ ಎನ್ನುವುದು ಇದ್ದರೆ ಅಕಾಡೆಮಿ– ಪ್ರಾಧಿಕಾರಿಗಳ ನೇಮಕಾತಿಗಳಲ್ಲಿ ಶಿಫಾರಸುಗಳನ್ನು ಕಡಿಮೆ ಮಾಡಬಹುದು. ಸಾಧಕ ಸಾಹಿತಿ ಕಲಾವಿದರಿಗೆ ಶಿಷ್ಟಾಚಾರದ ಹಂಗಿಲ್ಲದಂತೆ ಸ್ವಾಯತ್ತವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ಕೃತಿ

ರಾಜ್ಯ ಸರ್ಕಾರ ಮೂರು ಪ್ರಾಧಿಕಾರ ಮತ್ತು 13 ವಿವಿಧ ಅಕಾಡೆಮಿಗಳನ್ನು ಸ್ಥಾಪಿಸಿದೆ. ಅದರ ಅಧ್ಯಕ್ಷರಾಗುವುದು ಗೌರವದ ಪ್ರತೀಕವೇ ಹೊರತು ಅದು ಲಾಭದಾಯಕ ಹುದ್ದೆ ಅಲ್ಲ. ಸದಸ್ಯರಿಗೆ ಸಭಾ ಭತ್ಯೆ ಮತ್ತು ಸಾರಿಗೆ ವೆಚ್ಚ ಬಿಟ್ಟರೆ ಬೇರೆ ಯಾವುದೇ ಸೌಲಭ್ಯ ಇಲ್ಲ. ಆದರೂ ಆ ಜವಾಬ್ದಾರಿ ನಿರ್ವಹಿಸಲು ಪೈಪೋಟಿ ಇರುತ್ತದೆ.

ಅಕಾಡೆಮಿಯು ಸಾಹಿತ್ಯ ಅಧ್ಯಯನ, ಸಂಶೋಧನೆ ಸೇರಿದಂತೆ ಲೇಖಕರನ್ನು ಪ್ರೋತ್ಸಾಹಿಸುತ್ತಿದೆ. ಉದಯೋನ್ಮುಖ ಲೇಖಕರಿಗೆ ಸಂಭಾವನೆ ನೀಡಿ ಪ್ರವಾಸ ಅಧ್ಯಯನ, ಸಂಶೋಧನಾ ಅಧ್ಯಯನ ಮಾಡಿಸಿ ನಿಯಮಿತವಾಗಿ ಗ್ರಂಥವನ್ನು ಪ್ರಕಟಿಸುತ್ತಿದೆ. ಅದರಲ್ಲಿ ‘ಕನ್ನಡ ಸಾಹಿತ್ಯ ಮತ್ತು ಸಮಕಾಲೀನ ಪತ್ರಿಕೆಗಳು’ಸಂಶೋಧನಾ ಅಧ್ಯಯನ ಕೂಡ ಒಂದು. ಅದನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ 2019ರಲ್ಲಿ ಪ್ರಕಟಿಸಿದೆ. ಆ ಕೃತಿ ಪೀತ ಪತ್ರಿಕೆಗಳನ್ನು ಗುರುತಿಸಿರುವ ಕ್ರಮ ಮತ್ತು ವಿಶ್ಲೇಷಣೆ ಮಾಡಿರುವುದು ಪ್ರತಿಕೋದ್ಯಮ ಮತ್ತು ಸಾಹಿತ್ಯಕ್ಕೆ ಕಳಂಕವಾಗಿದೆ.

ಅಧ್ಯಯನಕ್ಕೆ ಅಕಾಡೆಮಿ ನೆರವು

ಸಂಶೋಧನಾ ಅಧ್ಯಯನಕ್ಕೆ ಅಕಾಡೆಮಿ ಒಬ್ಬ ಮಾರ್ಗದರ್ಶಕರ ನೆರವನ್ನು ನೀಡಿ ಒಂದು ಲಕ್ಷ ರೂಪಾಯಿ ಆರ್ಥಿಕ ನೆರವು ನೀಡುತ್ತದೆ. ಅಧ್ಯಯನ ನಿರತರು ಶೋಧಿಸಿದ ಬರಹವನ್ನೂ ಅಕಾಡೆಮಿ ಪ್ರಕಟಿಸುತ್ತದೆ. ಲೇಖಕರಿಗೆ ಗೌರವ ಪ್ರತಿಗಳನ್ನು ನೀಡಿ ಉಳಿದ ಕೃತಿಗಳನ್ನು ಅದೇ ಮಾರಾಟ ಮಾಡುತ್ತದೆ. ಅಕಾಡೆಮಿ ಪ್ರಕಟಿಸುವ ಇಂತಹ ಕೃತಿಗಳಲ್ಲಿ ಸಾಕಷ್ಟು ತಪ್ಪುಗಳು ನುಸುಳುವುದು ಸಹಜ. ಆದರೆ ಇಲ್ಲಿ ಗ್ರಹಿಕೆಯೇ ಊನ ಆಗಿರುವುದು ಅಕ್ಷಮ್ಯ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ‘ಕನ್ನಡ ಸಾಹಿತ್ಯ ಮತ್ತು ಸಮಕಾಲೀನ ಪತ್ರಿಕೆಗಳು’ ಕೃತಿಯಲ್ಲಿ ಪ್ರತಿಕಾ ಭಾಷೆ ಬಗ್ಗೆ ‘ಪತ್ರಿಕೋದ್ಯಮದಲ್ಲಿ ಒಂದು ಸಸ್ಯಹಾರಿ ಮತ್ತು ಮಾಂಸಹಾರಿ ಭಾಷೆ ಎರಡೂ ಬಳಕೆಯಲ್ಲಿವೆ’ (ಪುಟ: 195) ಈ ವಾಕ್ಯವೊಂದೇ ಸಾಕು. ಅಕಾಡೆಮಿಯ ಸಂಶೋಧನಾ ಕೃತಿಯಲ್ಲಿನ ಕಾಗುಣಿತ ದೋಷ, ವಾಕ್ಯ ದೋಷ, ಗ್ರಹಿಕೆಯಲ್ಲಿಯೂ ಇರುವ ದೋಷವನ್ನು ಗುರುತಿಸಲು. ಇಷ್ಟೇ ಆಗಿದ್ದರೆ ಏನೋ ಎಂದು ಬಿಡಬಹುದಿತ್ತು. ಈ ಕೃತಿಯನ್ನು ಪ್ರಕಟಿಸುವ ಮೂಲಕ ದೊಡ್ಡ ಎಡವಟ್ಟನ್ನು ಅಕಾಡೆಮಿ ಮಾಡಿದೆ. ಕನ್ನಡ ಸಾಹಿತ್ಯದಲ್ಲಿ ದೊಡ್ಡ ಓದುಗ ವಲಯವನ್ನು ಸೃಷ್ಟಿಸಿದ ಲಂಕೇಶ್‌ ಮತ್ತು ರವಿ ಬೆಳಗೆರೆ ಅವರನ್ನು ಪೀತ ಪತ್ರಕರ್ತರು ಎಂದು ಅವರ ಹೆಸರಿಗೆ ಮಸಿ ಬಳಿದಿದೆ. ಯಾವುದೇ ಆಧಾರ ಇಲ್ಲದೆ ಕೆಲವೊಂದು ಆಕ್ಷೇಪಾರ್ಹ ಸಂಗತಿಯನ್ನೂ ಈ ಪ್ರಕಟಣೆಯಲ್ಲಿ ದಾಖಲಿಸಿದೆ.

ಭ್ರಷ್ಟ ಪತ್ರಿಕೋದ್ಯಮ!

ಇದು ಕೃತಿಯ ಉಪ ಶೀರ್ಷಿಕೆ! ‘ಪ್ರಾಮಾಣಿಕ ಪತ್ರಿಕೋದ್ಯಮಕ್ಕೆ ಕಳಂಕಪ್ರಾಯವಾಗಿರುವ ಭ್ರಷ್ಟ ಪತ್ರಿಕೆಗಳ ಉದ್ಯಮವನ್ನು ಪೀತ ಪತ್ರಿಕೋದ್ಯಮ ಎಂಬುದಾಗಿ ನಾವುಗಳು ಹಿಂದಿನಿಂದಲೂ ಕರೆಯುತ್ತಾ ಬರುತ್ತಿದ್ದೇವೆ.’ (ಪುಟ:197). ಇಲ್ಲಿ ಲೇಖಕರ ಅಧ್ಯಯನದ ಗುಣಮಟ್ಟ ಎದ್ದು ಕಾಣಿಸುತ್ತದೆ. ಮುಂದೆ ಅವರು ಕನ್ನಡದ ಕೆಲ ಪೀತ ಪತ್ರಿಕೆಗಳು ಎಂದು ನೇರವಾಗಿ ಲಂಕೇಶ್ ಪತ್ರಿಕೆಯನ್ನು ಗುರುತಿಸುತ್ತಾರೆ. ಅದಕ್ಕೆ ಯಾವುದೇ ಸಣ್ಣ ಪುರಾವೆಯನ್ನೂ ನೀಡುವುದಿಲ್ಲ. ಲಂಕೇಶ್‌ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಕೊನೆಗೆ ‘ಪತ್ರಿಕೆಯೊಂದನ್ನು ನಡೆಸಿ ಮನುಷ್ಯ ಬದುಕು ಕಟ್ಟಿಕೊಳ್ಳಬಹುದು ಭ್ರಷ್ಟ ವ್ಯವಸ್ಥೆಯನ್ನು ಕೊನೆಗೊಳಿಸಬಹುದು ಎಂದು ಸಾಧಿಸಿ ತೋರಿಸಿದ್ದು ಲಂಕೇಶ್‌’ (ಪುಟ: 200) ವಿರೋಧಾಭಾಸದ ಅಭಿಪ್ರಾಯ ಇದೇ ಕೃತಿಯಲ್ಲಿ ವ್ಯಕ್ತವಾಗಿದೆ.

‘ಹಾಯ್‌ ಬೆಂಗಳೂರ್‌ ವಾರಪತ್ರಿಕೆಯು ಸಹ ಪೀತ ಪತ್ರಿಕೆಯೆಂದು ಹೆಸರು ಮಾಡಿದ್ದು. ಅದರಲ್ಲಿ ಬರುತ್ತಿದ್ದ ಕ್ರೈಮ್‌ ವರದಿಗಳು ಎಲ್ಲರನ್ನೂ ಕಾಯುವಂತೆ ಮಾಡುತ್ತಿತ್ತು’ (ಪುಟ 200). ‘ಪೀತ ಪತ್ರಿಕೆ ಕೇವಲ ರಾಜಕಾರಣಿಗಳನ್ನು ಉದ್ಯಮಿಗಳನ್ನು ಬ್ಲಾಕ್ಮೇಲ್‌ ಮಾಡುವುದರ ಜೊತೆಗೆ ಸಂಪಾದಕ ವೈಯಕ್ತಿಕ ವರ್ಚಸ್ಸು, ಹಿಮಾಲಯದೆಡೆಗೆ ಅವರ ಪಯಣ ಅಲ್ಲಿಯ ಅವರ ಜೀವನಾನುಭವ, ಪಾಕಿಸ್ತಾನ....’ ಹೀಗೆ ಏನೋ ಅಸಂಬದ್ಧವಾಗಿ ನಿರೂಪಣೆ ಮಾಡಲಾಗಿದೆ.

ಭಾರತೀಯ ಸಾಹಿತ್ಯ ನಿರ್ಮಾಪಕ ಲಂಕೇಶ್‌

ಲಂಕೇಶ್‌

ಲಂಕೇಶ್‌ ಜಾಗತಿಕ ಸಾಹಿತ್ಯವನ್ನು ಅರಿತವರು. ಪ್ರಯೋಗಶೀಲ ಕ್ರಿಯೆಗೆ ತಮ್ಮ ಬದುಕನ್ನೇ ಒಡ್ಡಿಕೊಂಡಿದ್ದರು. ಅವರ ಬರಹ ಮತ್ತು ಸಾಧನೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ನಾಟಕ ಅಕಾಡೆಮಿ, ಭಾರತೀಯ ಸಾಹಿತ್ಯ ಅಕಾಡೆಮಿ ಸೇರಿದಂತೆ ‘ಪಲ್ಲವಿ’ ನಿರ್ದೇಶನಕ್ಕೆ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದಾರೆ.

ಲಂಕೇಶ್‌ ವ್ಯಕ್ತಿತ್ವವನ್ನು ಪರಿಚಯಿಸುವ ಸಂಬಂಧ ‘ಭಾರತೀಯ ಸಾಹಿತ್ಯ ನಿರ್ಮಾಪಕರು’ ಎಂಬ ಮಾಲಿಕೆಯಲ್ಲಿ ‘ಸಾಹಿತ್ಯ ಅಕಾದೆಮಿ’ (ಭಾರತೀಯ ಸಾಹಿತ್ಯ ಅಕಾಡೆಮಿ) ‘ಪಿ. ಲಂಕೇಶ್‌’ ಕೃತಿಯನ್ನು 2008ರಲ್ಲಿ ಪ್ರಕಟಿಸಿದೆ. ಲಂಕೇಶರ ಬದುಕಿನ ಮೈಲುಗಲ್ಲನ್ನು ಅದರಲ್ಲಿ ಲೇಖಕಕೆ. ಮರುಳಸಿದ್ದಪ್ಪ ಗುರುತಿಸಿದ್ದಾರೆ. ಲಂಕೇಶರ ಎಲ್ಲ ಸಾಹಿತ್ಯ ಕೃತಿಗಳು – ಪತ್ರಿಕೆಯನ್ನೂ ಲೇಖಕರು ಅವಲೋಕಿಸಿದ್ದಾರೆ. ದೇಶದಲ್ಲಿ ರಾಜಕೀಯ ಸಂಕ್ರಮಣ ಕಾಲದಲ್ಲಿ ಲಂಕೇಶ್‌ ತಮ್ಮ ಹೆಸರಿನ ಪತ್ರಿಕೆಯನ್ನು ಆರಂಭಿಸಿದ್ದರು. ಆಗ ಚಳವಳಿ– ರಾಜಕೀಯ ಮತ್ತು ಸಾಂಸ್ಕೃತಿಕ ಹೋರಾಟಗಳಿಗೆ ಪತ್ರಿಕೆ ಹೇಗೆ ಸ್ಪಂದಿಸಿತು ಎಂಬ ವಿವರವನ್ನೂ ಸಕ್ಷಿಪ್ತವಾಗಿ ನೀಡಿದ್ದಾರೆ.

‘ಲಂಕೇಶ್‌ ತಮ್ಮ ಜೀವಿತಾವಧಿಯಲ್ಲಿ ಯಾವುದೇ ರಾಜಕೀಯ ಪಕ್ಷ ಅಧಿಕಾರದಲ್ಲಿದ್ದರೂ ಅದರೊಂದಿಗೆ ರಾಜಿ ಮಾಡಿಕೊಳ್ಳಲಿಲ್ಲ ತಪ್ಪುಗಳನ್ನು ಖಂಡಿಸುತ್ತಲೇ ವಿರಳವಾಗಿ ಕಾಣಿಸುತ್ತಿದ್ದ ಕೆಲವೇ ಕೆಲವು ಅಧಿಕಾರಸ್ಥರನ್ನೂ ಪ್ರಶಂಸಿಸಿದರು. ಜನತಾ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಅಬ್ದುಲ್‌ ನಜೀರ್‌ ಸಾಬ್‌ ಅವರಿಗೆ ಲಂಕೇಶ್‌ ಕೊಟ್ಟ ಪ್ರೋತ್ಸಾಹವನ್ನು ಇದಕ್ಕೆ ನಿದರ್ಶನವಾಗಿ ಹೇಳಬಹುದು.’ ಕೊನೆಗೆ ‘ಲಂಕೇಶ್‌... ಭ್ರಷ್ಟರು ಸ್ವಾರ್ಥಿಗಳು ಅಹಂಕಾರಿಗಳ ಬಗೆಗೆ ರಿಯಾಯಿತಿ ತೋರಿಸುತ್ತಿರಲಿಲ್ಲ.’ (ಪಿ. ಲಂಕೇಶ್‌ 2008 ಸಾಹಿತ್ಯ ಅಕಾದೆಮಿ ಪುಟ 151) ‘ಕನ್ನಡ ಸಾಹಿತ್ಯ ಮತ್ತು ಸಮಕಾಲೀನ ಪತ್ರಿಕೆಗಳು’ ಎಂಬ ಅಧ್ಯಯನದ ಸಂದರ್ಭದಲ್ಲಿ ‘ಪಿ. ಲಂಕೇಶ್‌’ ಓದಿದ್ದರೂ ಇಂತಹ ಪ್ರಮಾದ ಆಗುತ್ತಿರಲಿಲ್ಲ.

ಲಂಕೇಶ್‌ ಅಸಂಖ್ಯಾತ ಓದುಗರನ್ನು ಸೃಷ್ಟಿಸುವ ಜೊತೆಗೆ ಅನೇಕ ಹೊಸ ಬರಹಗಾರರಿಗೆ ತಮ್ಮ ಪತ್ರಿಕೆಯನ್ನೇ ವೇದಿಕೆಯನ್ನಾಗಿ ಮಾಡಿದ್ದರು. ಸರಳ ಭಾಷೆ ನಿಶ್ಚಲ ನಿಲುವಿನ ಲಂಕೇಶ್‌ ಬರಹಕ್ಕೆ ಸಾರ್ವಕಾಲಿಕ ಓದುಗ ವರ್ಗ ಇದ್ದೇ ಇರುತ್ತದೆ. ಅನೇಕ ವರ್ಷ ಪಿಯುಸಿ ಕನ್ನಡ ಪಠ್ಯದಲ್ಲಿ ‘ಮೋಕ್ಷ ಹುಡುಕುತ್ತಾ ಪ್ರೀತಿಯ ಬಂಧನದಲ್ಲಿ’ ಎಂಬ ಪಾಠ ಅಳವಡಿಸಲಾಗಿತ್ತು. ಕೃತಿಕಾರರು ಈ ಪಾಠ ಓದಿದ್ದರೂ ಲಂಕೇಶ್‌ ಬಗ್ಗೆ ಅಂತಹ ನಿಲುವನ್ನು ತಾಳುತ್ತಿರಲಿಲ್ಲ. ಏಕೆಂದರೆ ಆ ಗದ್ಯ ಅವರ ಸಂಪಾದಕೀಯ ಬರಹದಲ್ಲಿ ಒಂದು.

ಬರಹ ಧ್ಯಾನಿಸುವ ಬೆಳಗೆರೆ

ರವಿ ಬೆಳಗೆರೆ

ಮೂಲತಃ ಕಥೆಗಾರ ರವಿ ಬೆಳಗೆರೆ ಅತ್ಯುತ್ತಮ ಗದ್ಯ ಬರಹಗಾರ. ಪುಟ್ಟ ಪುಟ್ಟ ಸಂಗತಿಗಳನ್ನೂ ನವಿರಾಗಿ ಓದುಗರ ಮನಸಿನಾಳಕ್ಕೆ ಇಳಿಸುವ ಮೋಡಿಗಾರ. ಅವರ ಬರಹ ಅನೇಕರಿಗೆ ಬೆರಗನ್ನು ಹುಟ್ಟಿಸಿದೆ. ಸಂಗೀತ ಪ್ರೇಮಿ ಬೆಳಗೆರೆ ಹಲವು ಭಾಷೆಗಳನ್ನು ಬಲ್ಲವರು. ಉತ್ತಮ ಕೃತಿಗಳನ್ನು ಭಾಷಾಂತರ ಮಾಡಿ ಕನ್ನಡ ಸಾಹಿತ್ಯಕ್ಕೆ ನೀಡಿದ್ದಾರೆ. ಅವರ ಕೃತಿಗಳಿಗೆ ಬಹುಬೇಡಿಕೆ ಇವತ್ತಿಗೂ ಇದೆ. ಅಂತಹ ದೈತ್ಯ ಬರಹಗಾರ ರವಿ ಬೆಳಗೆರೆ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಎರಡು ಬಾರಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಯನ್ನೂ ನೀಡಿ ಅವರನ್ನು ಶ್ಲಾಘಿಸಿದೆ.

ಹೀಗಿರುವಾಗ ‘ಕನ್ನಡ ಸಾಹಿತ್ಯ ಮತ್ತು ಸಮಕಾಲೀನ ಪತ್ರಿಕೆಗಳು’ ಕೃತಿ ಕನ್ನಡದಲ್ಲಿ ಎರಡು ಪತ್ರಿಕೆಗಳನ್ನು ಗುರುತಿಸಿ ಪೀತ ಪತ್ರಿಕೆ ಎಂದು ಆರೋಪಿಸಿದೆ. ಅದಕ್ಕೆ ಸಣ್ಣ ಪುರಾವೆಯನ್ನೂ ಹುಡುಕಲು ಪ್ರಯತ್ನ ಮಾಡದೆ ಸಾಹಿತಿಗಳಿಬ್ಬರನ್ನು ಅವಮಾನಿಸಲು ಈ ಅಧ್ಯಯನ ಸೀಮಿತವಾಗಿದೆ. ಅನೇಕ ರೀತಿಯಲ್ಲಿ ಯುವ ತಲೆಮಾರುಗಳನ್ನು ಪ್ರಭಾವಿಸಿರುವ ಈ ಇಬ್ಬರು ಲೇಖಕರು ಕನ್ನಡ ಓದುಗ ವಲಯವನ್ನು ಬೆಳೆಸಲು ಮಾದರಿ ಆಗಿದ್ದಾರೆ. ಯಾವುದೇ ಸರ್ಕಾರಿ ಅಕಾಡೆಮಿಯ ಕೆಲಸಕ್ಕಿಂತ ಇವರ ಕೆಲಸ ಕಡಿಮೆ ಅಲ್ಲ. ಹೀಗಿರುವಾಗ ಅವರಿಗೆ ಅವಮಾನಿಸಿ ತಪ್ಪು ದಾಖಲೆ ಸೃಷ್ಟಿಸಿರುವುದಕ್ಕೆ ಯಾರು ಹೊಣೆ? ನೂರಾರು ವರ್ಷದ ಬಳಿಕ ಸರ್ಕಾರಿ ಸಂಸ್ಥೆಯ ಈ ಪ್ರಕಟಣೆಯೇ ಆಕರ ಗ್ರಂಥವಾದರೆ ಏನೆಲ್ಲ ತಪ್ಪುಗಳು ಸಂಭವಿಸಬಹುದು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT