ಮೈಸೂರು: 2019ರ ಪ್ರವಾಹದಲ್ಲಿ ಮನೆಗಳನ್ನು ಕಳೆದುಕೊಂಡಿದ್ದ ಸರಗೂರು ತಾಲ್ಲೂಕಿನ ಬಿದರಹಳ್ಳಿ ಸರ್ಕಲ್ನ ನೆರೆ ಸಂತ್ರಸ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಬುಧವಾರದಿಂದ ಆರಂಭಿಸಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರ ಭರವಸೆ ಮೇರೆಗೆ ವಾಪಸ್ ಪಡೆದರು.
‘ಸಂತ್ರಸ್ತರಿಗೆ ಹೊಸ ಮನೆಗಳನ್ನು ನಿರ್ಮಿಸಿ ಕೊಡಲಾಗಿದೆ ಎಂದು ಸರ್ಕಾರ ಜುಲೈ 26ರಂದು ಜಾಹೀರಾತು ಪ್ರಕಟಿಸಿತು. ಆದರೆ, ನಾವು ಕುಸಿಯಲಿರುವ ಮನೆಯಲ್ಲೇ ವಾಸಿಸುತ್ತಿದ್ದೇವೆ. ಆ ಕುರಿತು ಎರಡು ವರ್ಷಗಳಿಂದ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದು ನೆರೆ ಸಂತ್ರಸ್ತರ ಹೋರಾಟ ಸಮಿತಿಯ ಸಂಚಾಲಕಿ ಹಾಗೂ ಸಂತ್ರಸ್ತೆ ಚೆಲುವಿ ಆಕ್ರೋಶ ವ್ಯಕ್ತಪಡಿಸಿದರು.
‘42 ಕುಟುಂಬಗಳಿಗೆ ಹೊಸ ಮನೆ ನಿರ್ಮಿಸಿಕೊಡುವ ಸಲುವಾಗಿ ಸರ್ಕಾರ ಕಾವೇರಿ ನೀರಾವರಿ ನಿಗಮದ ಜಮೀನನ್ನು ಗುರುತಿಸಿದ್ದರೂ ಕಂದಾಯ ಇಲಾಖೆಗೆ ಹಸ್ತಾಂತರವಾಗಿರುವ ಕುರಿತು ಆದೇಶ ಪತ್ರ ಹೊರಡಿಸಿಲ್ಲ. ಕೂಡಲೇ ಆದೇಶ ಪತ್ರ ನೀಡಿ, ಕಂದಾಯ ಇಲಾಖೆಯು ಮನೆ ನಿರ್ಮಾಣ ಕಾಮಗಾರಿ ಆರಂಭಿಸಬೇಕು’ ಎಂದು ಒತ್ತಾಯಿಸಿದರು.
ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಜಿ.ಎಸ್.ಸೀಮಾ, ಎಐಯುಟಿಯುಸಿ ಮುಖಂಡರಾದ ಪಿ.ಎಸ್.ಸಂಧ್ಯಾ, ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ಸುನಿಲ್, ಎಸ್ಯುಸಿಐ ಜಿಲ್ಲಾ ಕಾರ್ಯದರ್ಶಿ ಬಿ.ರವಿ ಹಾಗೂ ಸಂತ್ರಸ್ತೆಯರಾದ ಕಾಳಿಯಮ್ಮ, ಯಶೋಧಾ, ಪದ್ಮಾ, ಉದಯಕುಮಾರಿ, ಮಂಜುಳಾ ಇದ್ದರು.