ನೆಲಮಂಗಲ: ‘ಶ್ರೀಕ್ಷೇತ್ರ ತೈಲೇಶ್ವರ ಗಾಣಿಗರ ಮಹಾ ಸಂಸ್ಥಾನ ಮಠದ ಉದ್ಘಾಟನೆ ಹಾಗೂ ಪೀಠಾರೋಹಣ ನಿಗದಿಯಂತೆ ಭಾನುವಾರ ನಡೆಯಲಿದೆ. ಮುಖ್ಯಮಂತ್ರಿ, ಸಚಿವರು ಹಾಗೂ ಹಿಂದುಳಿದ ವರ್ಗದ ಎಲ್ಲ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ ಎಂದು ಪೂರ್ಣಾನಂದ ಪುರಿ ಶ್ರೀ ( ಬಿ.ಜೆ. ಪುಟ್ಟಸ್ವಾಮಿ) ತಿಳಿಸಿದರು.
‘ಜನಾಂಗದ ಅಭಿವೃದ್ದಿ ಸಹಿಸದ ಕೆಲವರು ನ್ಯಾಯಾಲಯದ ಮಧ್ಯಂತರ ಆದೇಶವನ್ನು ತಿರುಚಿ ತಡೆಯಾಜ್ಞೆ ಎಂದು ಸುದ್ದಿ ಹಬ್ಬಿಸುತ್ತಿದ್ದಾರೆ’ ಎಂದು ತಿಳಿಸಿದರು.
‘ರಾಜ್ಯದಾದ್ಯಂತ ಜನರು ಆಗಮಿಸುವ ಸಂದರ್ಭದಲ್ಲಿ ತೊಂದರೆ ನೀಡುತ್ತಿರುವುದು ಬೇಸರ ತಂದಿದೆ. ಸಣ್ಣ ಜನಾಂಗವಾದ ಗಾಣಿಗರಿಗೆ ಪ್ರಥಮವಾಗಿ ಗುರುಪೀಠ ಸ್ಥಾಪಿಸಲು ಶ್ರಮವಹಿಸಿದ್ದೇನೆ’ ಎಂದರು.
‘ಪಟ್ಟಾಭಿಷೇಕಕ್ಕೆ ತಡೆಯಾಜ್ಞೆ ಇಲ್ಲ’:‘ನ್ಯಾಯಾಲಯವು ವಿಶ್ವ ಗಾಣಿಗರ ಸಮುದಾಯ ಟ್ರಸ್ಟ್ನ ಪೀಠಾಧಿಪತಿಯಾಗಿ ಪಟ್ಟಾಭಿಷೇಕ ಚಟುವಟಿಕೆ ನಿಲ್ಲಿಸಬೇಕೆಂದು ಹೇಳಿದೆ. ಶ್ರೀಕ್ಷೇತ್ರ ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠದ ಪೀಠಾಧಿಪತಿಯಾಗಿ ಪಟ್ಟಾಭಿಷೇಕ ಮಾಡಿಕೊಳ್ಳಲು ತಡೆಯಾಜ್ಞೆ ನೀಡಿರುವುದಿಲ್ಲ. ಕೆಲವರು ದುರುದ್ದೇಶದಿಂದ ನ್ಯಾಯಾಲಯದ ಆದೇಶವನ್ನು ತಿರುಚಿ ಸಮುದಾಯದ ದಾರಿ ತಪ್ಪಿಸುತ್ತಿದ್ದಾರೆ’ ಎಂದು ಹೈಕೋರ್ಟ್ ವಕೀಲ ಡಿ.ಪ್ರಭಾಕರ್ ತಿಳಿಸಿದ್ದಾರೆ.