ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ತ್ಯಾಗದ ಬಲಿಪೀಠ ಏರಿಸಲೆಂದೇ ಕ್ಷಮಯಾಧರಿತ್ರಿ ಎಂಬ ಉಪಮೆ

Last Updated 29 ನವೆಂಬರ್ 2020, 12:00 IST
ಅಕ್ಷರ ಗಾತ್ರ

ರಾಜ್ಯ ಸರ್ಕಾರದಲ್ಲಿ ಮಹತ್ತರ ಬದಲಾವಣೆ ಆಗಲಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸ್ಥಾನಕ್ಕೆ ಸಮರ್ಥರ ಹುಡುಕಾಟ ನಡೆದಿದೆ ಎನ್ನುವ ಚರ್ಚೆ ಜೋರಾಗಿ ನಡೆಯುತ್ತಿದೆ. ಪಕ್ಷ ಅಂದುಕೊಂಡಂತೆ ಅದು ಅಷ್ಟು ಸುಲಭ ಅಲ್ಲ ಎನ್ನುವ ಸಂದೇಶವನ್ನು ಸಿಎಂ ಪರೋಕ್ಷವಾಗಿ ಪಕ್ಷಕ್ಕೆ ನೀಡುತ್ತಲೇ ಇದ್ದಾರೆ. ತಾನು ಇನ್ನೂ ಸಮರ್ಥವಾಗಿ ಸರ್ಕಾರವನ್ನು ನಿಭಾಯಿಸಬಲ್ಲೆ ಎನ್ನುವುದನ್ನು ಅವರು ತೋರಿಸಲು ‘ನಿಗಮ’ ರಾಜಕೀಯ ದಾಳಗಳೇ ಸಾಕ್ಷಿಯಾಗುತ್ತವೆ. ಇಲ್ಲಿಯ ತನಕ ಯಡಿಯೂರಪ್ಪ ಅವರ ಸ್ಥಾನವನ್ನು ತೆರವುಗೊಳಿಸಲಾಗುತ್ತಿದೆ ಎನ್ನುವುದನ್ನು ಅಧಿಕೃತವಾಗಿ ಪಕ್ಷ ಬಹಿರಂಗಪಡಿಸಿಲ್ಲ. ಈ ವಿಚಾರ ಬಿಜೆಪಿ ಶಾಸಕರ ವಲಯದಲ್ಲಿಯೂ ಬಹಿರಂಗ ಪ್ರಸ್ತಾಪ ಆಗಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನಿಷ್ಠರಾಗಿರುವ ನಾಯಕರು ಮಾತ್ರ ಈ ಸರ್ಕಾರ ಸುಭದ್ರ ಎನ್ನುವುದನ್ನೇ ಬಿಂಬಿಸುತ್ತಿದ್ದಾರೆ. ಆದರೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ತಮ್ಮ ಸ್ಥಾನವನ್ನು ಕಿತ್ತುಕೊಳ್ಳುವ ಸಾಧ್ಯತೆ ಇದೆ ಎಂಬ ದುಗುಡವನ್ನು ಹೊರ ಹಾಕುವ ಮೂಲಕ ಬದಲಾವಣೆಯ ಬೆಂಕಿ ಹೊಗೆಯಾಡುತ್ತಿದೆ ಎನ್ನುವುದನ್ನು ಅಧಿಕೃತ ಮಾಡಿದ್ದಾರೆ. ತಮ್ಮ ಸ್ಥಾನವನ್ನು ತೆರೆವು ಮಾಡುವ ಬಗ್ಗೆ ಆತಂಕವನ್ನೂ ಅವರು ವ್ಯಕ್ತಪಡಿಸಿದ್ದಾರೆ. ಜೊತೆಗೆ ‘ಬಿಜೆಪಿ ಸರ್ಕಾರದಲ್ಲಿರುವ ಏಕೈಕ ಮಹಿಳಾ ಸಚಿವೆ ನಾನು. ಹೀಗಿರುವಾಗ ನಾನೇ ಏಕೆ ಸ್ಥಾನ ತ್ಯಾಗ ಮಾಡಬೇಕು’ ಎಂದೂ ಪ್ರಶ್ನಿಸಿದ್ದಾರೆ. ಇದು ಸರ್ಕಾರದಲ್ಲಿ ಆಂತರಿಕ ಬೇಗುದಿಯನ್ನು ಬಹಿರಂಗ ಪಡಿಸುವ ಜೊತೆಗೆ ಸರ್ಕಾರದ ಒಳಗೆ ಎಲ್ಲವೂ ಸರಿ ಇಲ್ಲ ಎನ್ನುವುದನ್ನು ಸ್ಪಷ್ಟವಾಗಿ ಹೇಳುತ್ತದೆ.

ಸರ್ಕಾರ ರಚನೆಯಾಗಿ ಒಂದು ವರ್ಷ ಕಳೆದರೂ ಸಚಿವ ಸಂಪುಟವನ್ನು ಸಂಪೂರ್ಣವಾಗಿ ವಿಸ್ತರಿಸಲು ಸಾಧ್ಯವಾಗಿಲ್ಲ. ಇರುವ ಸಂಪುಟ ಸದಸ್ಯರಲ್ಲಿ ಪಕ್ಷದ ಮೂಲವಾಸಿಗಳಿಗಿಂತ ವಲಸೆ ಬಂದವರದೇ ಸಿಂಹಪಾಲು ಎನ್ನುವ ಅಸಮಾಧಾನದ ಜ್ವಾಲೆಯೂ ಒಳಗೊಳಗೆ ಆಡುತ್ತಿದೆ. ಸದ್ಯ ಯಡಿಯೂರಪ್ಪ ಅವರ ಸಚಿವ ಮಂಡಲ 28 ಮಂದಿ ಸದಸ್ಯರನ್ನು ಒಳಗೊಂಡಿದೆ. ಅದರಲ್ಲಿ ಒಬ್ಬ ಮಹಿಳೆಯನ್ನು ಮಾತ್ರ ಹೊಂದಿದೆ ಎನ್ನುವುದು ರಾಜಕೀಯದಲ್ಲಿ ಲಿಂಗ ಅಸಮಾನತೆಯನ್ನು ತೋರಿಸುತ್ತದೆ. ಮಾತ್ರವಲ್ಲ ಮಹಿಳೆಯರಿಗೆ ರಾಜಕೀಯದಲ್ಲಿ ನೀಡುವ ಪ್ರಾತಿನಿಧ್ಯವನ್ನು ಅಣಕಿಸುವಂತಿದೆ. ಜನಸಂಖ್ಯೆಯ ಸರಿಸುಮಾರು ಅರ್ಧದಷ್ಟು ಇರುವ ಮಹಿಳೆಯರಿಗೆ ರಾಜಕೀಯ ಅವಕಾಶ ಸಿಕ್ಕಿರುವುದೇ ಅತ್ಯಲ್ಪ. ಹೀಗಿರುವಾಗ ಸಚಿವೆ ಜೊಲ್ಲೆ ಅವರು ಎತ್ತಿರುವ ಪ್ರಶ್ನೆ ಸೂಕ್ತವಾಗಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನೂ ಸಹ ಮಹಿಳೆಯರಿಂದ ಕಿತ್ತುಕೊಳ್ಳುವುದು ಎಷ್ಟು ಸರಿ ಎನ್ನುವ ಅವರ ಆಕ್ಷೇಪ ಅರ್ಥಗರ್ಭಿತವಾಗಿದೆ. ತೆರವಾಗುವ ಅವರ ಸ್ಥಾನಕ್ಕೆ ಮತ್ತೊಬ್ಬ ಮಹಿಳೆ ಬರುತ್ತಾರೆ ಎನ್ನುವ ಯಾವ ಭರವೆಸೆಯೂ ಇಲ್ಲ ಎನ್ನುವುದೇ ಅವರ ಮಾತು ಧ್ವನಿಸುತ್ತದೆ. ಅವರನ್ನು ಬಿಟ್ಟರೆ ಬಿಜೆಪಿಯಲ್ಲಿ ರೂಪಾಲಿ ನಾಯ್ಕ್‌ ಮತ್ತು ಪೂರ್ಣಿಮಾ ಶ್ರೀನಿವಾಸ್‌ ಇಬ್ಬರು ಶಾಸಕಿಯರಿದ್ದಾರೆ. ಜೊಲ್ಲೆಯವರ ಹಿನ್ನೆಲೆ ಮತ್ತು ಹಿರಿತನದ ಮುಂದೆ ಅವರಿಬ್ಬರೂ ಕಿರಿಯರು ಆಗುತ್ತಾರೆ. ಅವರು ಸದ್ಯ ಸಚಿವರಾಗುವ ಬಯಕೆಯನ್ನೂ ವ್ಯಕ್ತಪಡಿಸಿಲ್ಲ. ಪಕ್ಷದ ಆಂತರಿಕ ಅಸಮಾಧಾನ ಹೋಗಲಾಡಿಸಲು ಸಂಪುಟಕ್ಕೆ ಸರ್ಜರಿ ಮಾಡುವುದು ಖಚಿತ. ಆದರೆ ಮಹಿಳೆಗೆ ಅವಕಾಶ ಸಿಗಲಾರದು ಎನ್ನುವುದೂ ಅಷ್ಟೇ ನಿಶ್ಚಿತ. ಹೀಗಿರುವಾಗ ವಲಸೆ ಬಂದವರನ್ನು ತೃಪ್ತಗೊಳಿಸಲು ಜೊಲ್ಲೆ ಅವರು ಏಕೆ ತಮ್ಮ ಸ್ಥಾನ ತ್ಯಾಗ ಮಾಡಬೇಕು? ಎನ್ನುವ ಅವರ ಪ್ರಶ್ನೆ ಇನ್ನೂ ಮಹತ್ವವನ್ನು ಪಡೆದುಕೊಳ್ಳುತ್ತದೆ. ಮೂಲತಃ ಉದ್ಯಮಿಯಾಗಿರುವ ಜೊಲ್ಲೆಯವರ ಕುಟುಂಬ ಸಂಘಪರಿವಾರದ ನಂಟನ್ನು ಹೊಂದಿದೆ. ಪಕ್ಷಕ್ಕೂ ಎಲ್ಲ ರೀತಿಯಿಂದಲೂ ಬೆಂಬಲ ನೀಡುತ್ತಾ ಬಂದಿದೆ. ಅವರ ಪತಿ ಅಣ್ಣಾಸಾಹೇಬ ಜೊಲ್ಲೆ ಕೂಡ ಚಿಕ್ಕೋಡಿ ಲೋಕಸಭಾ ಕ್ಷೇತ್ರವನ್ನು ಬಿಜೆಪಿಯಿಂದ ಪ್ರತಿನಿಧಿಸಿದ್ದಾರೆ. ಪಕ್ಷದಲ್ಲಿ ಇಷ್ಟೆಲ್ಲಾ ಹಿಡಿತ ಇದ್ದೂ ಅವರಿಗೆ ಸಚಿವೆ ಸ್ಥಾನ ಕೈ ತಪ್ಪುವ ಸಾಧ್ಯತೆ ಇದೆ ಎನ್ನುವುದು ಅಚ್ಚರಿ ಮೂಡಿಸುತ್ತದೆ.

ಬದಲಾವಣೆಯ ಗಾಳಿ ಬೀಸಿದ್ದಾದರೂ ಏಕೆ?

ಜಿಲ್ಲಾವಾರು ಪ್ರಾತಿನಿಧ್ಯದ ಹಿನ್ನೆಲೆಯಲ್ಲಿ ಬೆಳಗಾವಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದರಿಂದ ಯಾರಾದರೂ ಒಬ್ಬರು ತ್ಯಾಗ ಮಾಡಬೇಕು ಎನ್ನುವ ತರ್ಕ ಕೇಳಿಬಂದಿದೆ. ಶಶಿಕಲಾ ಜೊಲ್ಲೆ ಅವರನ್ನು ಹೊರತುಪಡಿಸಿ ಬೆಳಗಾವಿ ಜಿಲ್ಲೆಯ ಲಕ್ಷ್ಮಣ ಸವದಿ (ವಿಧಾನಪರಿಷತ್‌ ಸದಸ್ಯ), ರಮೇಶ ಜಾರಕಿಹೊಳಿ, ಶ್ರೀಮಂತ ಪಾಟೀಲ ಸಚಿವರಾಗಿದ್ದಾರೆ. ಪ್ರಾದೇಶಿಕ ಸಮಾನ ಹಂಚಿಕೆಗೆ ಜೊಲ್ಲೆ ಅವರಂತಹ ಪಕ್ಷ ನಿಷ್ಠರಿಂದ ರಾಜೀನಾಮೆಯನ್ನು ಪಕ್ಷ ಬಯಸುತ್ತಿದೆ ಎನ್ನಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಅದು ಮಹಿಳೆಯೇ ಏಕಾಗಬೇಕು ಎನ್ನುವ ಜೊಲ್ಲೆಯವರ ಪ್ರಶ್ನೆಯೂ ಸರಿಯಾಗಿಯೇ ಇದೆ. ರಾಜಕೀಯ ಪಡಸಾಲೆಯಲ್ಲಿ ಜಾತಿ– ಧರ್ಮ– ಪ್ರಾದೇಶಿಕ ಅನನ್ಯತೆಗೆ ನಿಡುವ ಮಾನ್ಯತೆಯನ್ನು ಲಿಂಗ ತಾರತಮ್ಯಕ್ಕೂ ನೀಡಬೇಕು ಎಂಬ ಪ್ರಸ್ತಾಪವೇ ಆಗುವುದಿಲ್ಲ. ರಾಜಕೀಯ ಚಳವಳಿಯಲ್ಲಿ ಮಹಿಳೆ ಏಕೆ ತನ್ನ ಪಾಲನ್ನು ಸಮಾನವಾಗಿ ಪಡೆಯುವಲ್ಲಿ ಹಿಂದೆ ಬಿದ್ದಿದ್ದಾಳೆ. ಈ ನಿಟ್ಟಿನಲ್ಲಿ ರಚನಾತ್ಮಕ ಹೋರಾಟವನ್ನು ಮಹಿಳಾ ಚಳವಳಿ ರೂಪಿಸಿಲ್ಲ ಎಂದು ಅರ್ಥವೇ? ವಿಧಾನ ಸಭೆ ಮತ್ತು ಲೋಕಸಭೆಗೆ ಶೇ 33ರಷ್ಟು ಮಹಿಳೆಯರಿಗೆ ಮೀಸಲು ಕಲ್ಪಿಸಬೇಕು ಎನ್ನುವ ಮಸೂದೆಯನ್ನು ಎರಡು ದಶಕಗಳು ಉರುಳಿದರೂ ಸಂಸತ್ತು ಏಕೆ ಅನುಮೋದಿಸಿಲ್ಲ? ಅಂತಹ ಜನಪರ ಮಸೂದೆ ಇಷ್ಟು ದೀರ್ಘಕಾಲ ನನೆಗುದಿಗೆ ಬಿದ್ದರೂ ಯಾವ ಪಕ್ಷವೂ ಅದರ ಬಗ್ಗೆ ಏಕೆ ಸೊಲ್ಲೆತ್ತುವುದಿಲ್ಲ? ಅಂದರೆ ಎಲ್ಲ ಪಕ್ಷಗಳ ಆಂತರಿಕ ಬಯಕೆ ಲಿಂಗ ರಾಜಕಾರಣದಲ್ಲಿ ಒಂದೇ ಎನ್ನುವುದನ್ನು ತೋರಿಸುತ್ತದೆ.

ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಸಂಪುಟದಲ್ಲಿ ಮೋಟಮ್ಮ, ರಾಣಿ ಸತೀಶ್‌, ನಫೀಸಾ ಫಜಲ್‌, ಸುಮಾ ವಸಂತ್‌ ಅವರಿಗೆ ಅವಕಾಶ ನೀಡಿದ್ದರು. ಆ ನಂತರ ಆ ಪ್ರಮಾಣದ ಮಹಿಳಾ ಪ್ರಾತಿನಿಧ್ಯವನ್ನು ಯಾವ ಸರ್ಕಾರವೂ ನೀಡಲಿಲ್ಲ. ಕುಮಾರಸ್ವಾಮಿ ಅವರ ಹಿಂದಿನ ಸರ್ಕಾರದಲ್ಲಿ ಒಬ್ಬರಿಗೂ ಅವಕಾಶ ನೀಡಿರಲಿಲ್ಲ ಎನ್ನುವುದೂ ಕೂಡ ಅದರ ಮಿತಿಯನ್ನು ತೋರಿಸುತ್ತದೆ.

ಪ್ರಾದೇಶಿಕತೆಯನ್ನು ಬಿಟ್ಟರೆ ಸಚಿವೆ ಜೊಲ್ಲೆಯವರು ತಮ್ಮ ಸ್ವಕ್ಷೇತ್ರ ನಿಪ್ಪಾಣಿಯನ್ನು ಬಿಟ್ಟು ಹೊರ ಬಂದೇ ಇಲ್ಲ ಎನ್ನುವ ಆರೋಪವೂ ಇದೆ. ಈ ಆರೋಪ ಅವರಿಗೆ ಮಾತ್ರ ಏಕೆ ಅನ್ವಯವಾಗಬೇಕು? ಸಂಪುಟದ ಅನೇಕರು ಜಲ ಪ್ರವಾಹದಂತಹ ಸಂದರ್ಭದಲ್ಲಿಯೂ ತಮ್ಮ ತಮ್ಮ ಕೇಂದ್ರ ಸ್ಥಾನದಿಂದ ವಿಚಲಿತರಾಗಲಿಲ್ಲ. ಅಂದ ಮೇಲೆ ಅವರಷ್ಟೇ ಏಕೆ ಸಚಿವ ಸ್ಥಾನವನ್ನು ತ್ಯಾಗ ಮಾಡಬೇಕು? ಎನ್ನುವ ಅಂಶವನ್ನೂ ಅವರ ತಕರಾರು ಸೂಚ್ಯವಾಗಿ ಹೇಳುವಂತಿದೆ. ಒಟ್ಟಾರೆ ತ್ಯಾಗದ ಬಲಿಪೀಠದಲ್ಲಿ ಸಹಗಮನ – ಅನುಗಮನವನ್ನು ಪಾಲಿಸಿದ ಪರಂಪರೆಯ ಪಳೆಯುಳಿಕೆ ರಾಜಕೀಯ ಅಸಮಾನತೆ ಸಾಧಿಸುವಲ್ಲಿಯೂ ಉಳಿದುಕೊಂಡಿದೆ ಎನ್ನುವುದನ್ನು ಇದು ತೋರಿಸುತ್ತದೆ.

ಅಂಗನವಾಡಿಗೆ ಮಾತ್ರ ಸೀಮಿತವಲ್ಲ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಮಹಿಳೆ, ಮಕ್ಕಳು ಸೇರಿದಂತೆ ಅಂಗವಿಕಲ ಮತ್ತು ಹಿರಿಯ ನಾಗರಿಕರ ಸಬಲೀಕರಣವನ್ನೂ ಒಳಗೊಂಡಿದೆ. ಅದರ ಒಟ್ಟಾರೆ ಚಟುವಟಿಕೆ ಅಂಗನವಾಡಿಗೆ ಮಾತ್ರ ಸೀಮಿತವಾದಂತಿದೆ. ಈ ಇಲಾಖೆ ರಾಜ್ಯದ ಪ್ರತಿ ಮನೆಯನ್ನೂ ತಲುಪಬೇಕು. ಏಕೆಂದರೆ ಇದು ಎಲ್ಲ ಮನೆಗಳನ್ನು ಒಳಗೊಳ್ಳುವಷ್ಟು ವಿಸ್ತಾರವಾದ ಇಲಾಖೆ. ಮಕ್ಕಳು– ಮಹಿಳೆ ಇಲ್ಲದ ಮನೆ ತೀರ ಅಪರೂಪವೇ ಸರಿ. ಹೀಗೆಂದ ಮೇಲೆ ಮನೆ ಮನೆಗೂ ಇಲಾಖೆಯನ್ನು ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಕಾರ್ಯಸೂಚಿ ರೂಪಿಸಿದ್ದರೆ ರಾಜೀನಾಮೆ ಕೇಳುವ ಪ್ರಶ್ನೆ ಏಳುತ್ತಿರಲಿಲ್ಲ ಎಂದೆನಿಸುತ್ತದೆ. ಇಲ್ಲಿಯ ತನಕ ಆ ಖಾತೆಯನ್ನು ಅಂಗನವಾಡಿಗೆ ಸೀಮಿತಗೊಳಿಸುತ್ತಾ ಬಂದಿರುವುದು ಕೂಡ ಸರ್ಕಾರಗಳ ಸಂಕುಚಿತ ಮನೋಭಾವವನ್ನು ತೋರಿಸುತ್ತದೆ. ಬಜೆಟ್‌ ಹಂಚಿಕೆ ಪ್ರಮಾಣದಲ್ಲಿಯೂ ಕಂದಾಯ– ಕೈಗಾರಿಕೆ– ಲೋಕೋಪಯೋಗಿ– ಗೃಹ ಇಲಾಖೆಯಷ್ಟು ಪ್ರಾಮುಖ್ಯತೆಯನ್ನು ನೀಡುತ್ತಿಲ್ಲ. ಹಾಗೆಂದು ಅದರ ಚಟುವಟಿಕೆಯನ್ನು ಅಂಗನವಾಡಿಗೆ ಮಾತ್ರ ಸೀಮಿತ ಮಾಡದೆ ರಾಜ್ಯದ ಪ್ರತಿ ಮನೆಯನ್ನೂ ತಲುಪಿಸುವ ನಿಟ್ಟಿನಲ್ಲಿ ಇಲಾಖೆಯನ್ನೇ ಮೊದಲು ಸಬಲಗೊಳಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT