ಬೆಂಗಳೂರು: 40 ವರ್ಷ ದಾಟಿದ ಸರ್ಕಾರಿ ನೌಕರರು ವರ್ಷಕ್ಕೊಮ್ಮೆ ವೈದ್ಯಕೀಯ ತಪಾಸಣೆಗೆ ಮಾಡಿಸಿಕೊಂಡು, ಅದರ ಮೊತ್ತ ಮರುಪಾವತಿಸಿಕೊಳ್ಳುವ ಅವಕಾಶ ಕಲ್ಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಈ ಸಂಬಂಧ, ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮ ತಿದ್ದುಪಡಿ ಮಾಡಿ, ಕರಡು ಅಧಿಸೂಚನೆ ಹೊರಡಿಸಲಾಗಿದೆ. ನಿಯಮ ತಿದ್ದುಪಡಿಗೆ ಆಕ್ಷೇಪಣೆ ಸಲ್ಲಿಸಲು 15 ದಿನಗಳ ಒಳಗೆ ಕಾಲಾವಕಾಶ ನೀಡಲಾಗಿದೆ.
ತಿದ್ದುಪಡಿ ಪ್ರಕಾರ, ಪ್ರತಿ ಕ್ಯಾಲೆಂಡರ್ ವರ್ಷದಲ್ಲಿ ಒಂದು ಬಾರಿ ಮಾತ್ರ ನಿಗದಿಪಡಿಸಿದ ವೈದ್ಯಕೀಯ ತಪಾಸಣೆ ಮಾಡಿ ಹಣ ಮರುಪಾವತಿ ಮಾಡಿಕೊಳ್ಳಬಹುದು.ಹಿಮೋಗ್ಲೋಬಿನ್, ರಕ್ತದಲ್ಲಿರುವ ಸಕ್ಕರೆ ಅಂಶ, ಯಕೃತ್, ಕಿಡ್ನಿ, ಥೈರಾಯ್ಡ್, ಇಸಿಜಿ ತಪಾಸಣೆ ಮಾಡಿಸಿಕೊಳ್ಳಬಹುದು.
ಆದರೆ, ಈ ತಪಾಸಣೆಗಳನ್ನು ಸರ್ಕಾರಿ ಆಸ್ಪತ್ರೆಗಳ ಡಯೋಗ್ನಾಸ್ಟಿಕ್ ಸೆಂಟರ್ಗಳಲ್ಲಿ ಮಾಡಬೇಕು. ಅಲ್ಲಿ ಸೌಲಭ್ಯ ಇಲ್ಲದೇ ಇದ್ದರೆ ಮಾತ್ರ ಸರ್ಕಾರಿ ಆಸ್ಪತ್ರೆಯಿಂದ ಶಿಫಾರಸು ಮಾಡಿದರೆ, ಸರ್ಕಾರ ಮಾನ್ಯತೆ ನೀಡಿರುವ ಖಾಸಗಿ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಬಹುದು ಎಂಬುದು ಕರಡು ನಿಯಮದಲ್ಲಿದೆ.