ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಅಲೆ ತಗ್ಗಿಸುವಲ್ಲಿ ಸರ್ಕಾರ ಯಶಸ್ವಿ: ರಾಜ್ಯಪಾಲ ವಜುಭಾಯಿ​​​ ವಾಲಾ

Last Updated 26 ಜನವರಿ 2021, 7:25 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋವಿಡ್-19ರ ಅಲೆಯನ್ನು ತಗ್ಗಿಸುವಲ್ಲಿ ಜನರ ಸಹಕಾರದೊಂದಿಗೆ ಹಗಲಿರುಳು ಶ್ರಮಿಸಿ. ಕರ್ನಾಟಕ ಸರ್ಕಾರ ಯಶಸ್ವಿಯಾಗಿದೆ’ ಎಂದು ರಾಜ್ಯಪಾಲ ವಜುಭಾಯಿ​​​ ವಾಲಾ ಹೇಳಿದರು.

ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಮಂಗಳವಾರ ನಡೆದ 72 ನೇ ಗಣರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕೋವಿಡ್‌ ಬಿಕ್ಕಟ್ಟಿನ ಅವಕಾಶವನ್ನು ನಮ್ಮ ಸಾಮರ್ಥ್ಯ ವೃದ್ಧಿಸಲು ಮತ್ತು ಆರೋಗ್ಯ ಮೂಲಸೌಕರ್ಯ ಹಾಗೂ ಪಿ.ಪಿ.ಇ. ಕಿಟ್, ವೆಂಟಿಲೇಟರ್ ಉತ್ಪಾದನೆ ಹೆಚ್ಚಿಸಲು ಬಳಸಿಕೊಂಡಿದ್ದೇವೆ. ಇದು ಪ್ರಧಾನಿ ನರೇಂದ್ರ ಮೋದಿಯವರು ದೂರದರ್ಶಿತ್ವ ‘ಆತ್ಮ ನಿರ್ಭರ್ ಭಾರತ್’ ಕಾರ್ಯಕ್ರಮದ ದಿಸೆಯಲ್ಲಿ ಉತ್ತಮ ಹೆಜ್ಜೆ’ ಎಂದು ಬಣ್ಣಿಸಿದರು.

‘ಎಂದಿಗೂ ಮಣಿಯದ ಮಾನವ ಚೈತನ್ಯ ಶಕ್ತಿಗೆ ಈ ಗಣರಾಜ್ಯೋತ್ಸವದ ಸಮಾರಂಭವನ್ನು ಅರ್ಪಿಸುತ್ತೇನೆ. ಇದೊಂದು ಶತ್ರುವಿನ ವಿರುದ್ಧ ಪಡೆದ ಜಯವಾಗಿದೆ. 2020ರಲ್ಲಿ ಹಿಂದೆಂದೂ ಕಂಡರಿಯದ ಕೋವಿಡ್-19ರ ಸವಾಲನ್ನು ಜಗತ್ತು ಎದುರಿಸುತ್ತಿರುವಾಗ, ನಾವು ನವ ಚೈತನ್ಯ ಮತ್ತು ಆಶೋತ್ತರದೊಂದಿಗೆ ಹೊಸ ವರ್ಷ 2021ಕ್ಕೆ ಹೆಜ್ಜೆ ಇರಿಸಿದ್ದೇವೆ’ ಎಂದೂ ವಾಲಾ ಹೇಳಿದರು.

ಸಾಂಪ್ರದಾಯಿಕ ಗುಜರಾತಿ ಪೇಟಾ ಧರಿಸಿ, ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಬಂದಿದ್ದ ವಾಲಾ ರಾಜ್ಯದ ಜನರಿಗೆ ಗಣರಾಜ್ಯೋತ್ಸವದ ಶುಭಾಶಯ ಕೋರಿದರು. ಸುಮಾರು 40 ನಿಮಿಷಗಳಲ್ಲಿ ಮುಕ್ತಾಯವಾದ ಕಾರ್ಯಕ್ರಮದಲ್ಲಿ 12 ಪುಟಗಳ ಭಾಷಣವನ್ನು ರಾಜ್ಯಪಾಲರು ಓದಿದರು. ತಮ್ಮ ಭಾಷಣದಲ್ಲಿ ಸರ್ಕಾರದ ಕಾರ್ಯಕ್ರಮಗಳು, ಯೋಜನೆಗಳನ್ನು ಹೊಗಳುವ ಮೂಲಕ ಸರ್ಕಾರದ ಬೆನ್ನು ತಟ್ಟಿದರು.

‘ಕೋವಿಡ್ ಕೊನೆಯ ಹಂತಕ್ಕೆ ತಲುಪಿದ್ದೇವೆ. ಹಾಗೆಂದು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ದೈಹಿಕ ಅಂತರ, ಮಾಸ್ಕ್ ಧರಿಸುವುದು, ಸ್ಯಾನಿಟೈಸ್ ಬಳಕೆ ಕಡ್ಡಾಯ’ ಎಂದೂ ಅವರು ಸಲಹೆ ನೀಡಿದರು.

‘ಭಾರತ ಲಸಿಕೆ ಉತ್ಪಾದಿಸುತ್ತದೆ. ಈ ಲಸಿಕೆಗಳನ್ನು ವಿದೇಶಗಳಿಗೂ ಸಹ ರಪ್ತು ಮಾಡುತ್ತಿರುವುದು ಗಮನಾರ್ಹ. ಸಮರ್ಥ ನಾಯಕರಾದ ಪ್ರಧಾನಿ ನರೇಂದ್ರ ಮೋದಿ ಜ. 16ರಂದು ಲಸಿಕಾ ಅಭಿಯಾನ ಆರಂಭಿಸಿದರು. ಕೇಂದ್ರ ಸರ್ಕಾರದ ಸಹಕಾರದೊಂದಿಗೆ ಪ್ರತಿಯೊಬ್ಬರಿಗೂ ಲಸಿಕೆ ತಲುಪಿಸಲು ಕ್ರಮ ವಹಿಸಲಾಗಿದೆ. ಕೊರೊನಾ ನಿರ್ವಹಣೆಗೆ ಶ್ರಮಿಸಿದವರು ಹೀರೋಗಳಾಗಿರುತ್ತಾರೆ. ಅವರಿಗೆಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಪ್ರವಾಹ ನಿರ್ವಹಣೆ ಶ್ರಮಿಸಿದವರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಕೃಷಿ ವಲಯದಲ್ಲಿ ಬದಲಾವಣೆ ತರಲು, ಜಲಾನಯನದ ಕಡೆ ಗಮನ ಹರಿಸಿದ್ದೇವೆ’ ಎಂದು ರಾಜ್ಯಪಾಲರು ಹೇಳಿದರು.

‘ಅಭಿವೃದ್ಧಿಗಾಗಿ ಬಜೆಟ್​ನಲ್ಲಿ ಹಣ ಮೀಸಲಿರಿಸಲಾಗಿದೆ. ಇದರಿಂದ ಭೂ ರಹಿತ ಕಾರ್ಮಿಕರಿಗೆ ಮತ್ತು ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಉದ್ಯೋಗವಕಾಶ ದೊರೆಯಲಿದೆ. ಮೊಬೈಲ್ ಮತ್ತು ತಂತ್ರಜ್ಞಾನ ಆಧಾರಿತ ಬೆಳೆ ಸಮೀಕ್ಷೆ ಅಳವಡಿಕೆ ಮಾಡಲಾಗಿದೆ. ಇದರಿಂದ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ರೈತರಿಗೆ ಸಹಾಯಧನ ಸುಗಮವಾಗಿ ದೊರೆಯಲಿದೆ’ ಎಂದು ವಾಲಾ ವಿವರಿಸಿರು.

‘ಈ ಬಾರಿ ಮಹಿಳಾ‌ ಕೇಂದ್ರಿತ ಬಜೆಟ್​ಗೆ ಆದ್ಯತೆ ನೀಡಲಾಗುವುದು. ಅಂಗನವಾಡಿಗಳು, ಸಂತಾನೋತ್ಪತ್ತಿ ಮತ್ತು ಮಹಿಳಾ ಆರೋಗ್ಯ ಕಾರ್ಯಕರ್ತಯರ ಮೂಲಕ ಗರ್ಭಿಣಿ ಮಹಿಳೆಯರಿಗೆ ಸೇವೆ ನೀಡಲು ಪ್ರಯತ್ನ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ₹ 8,015 ಕೋಟಿ ಅನುಮೋದಿತ ಮೊತ್ತದಲ್ಲಿ ಕೆರಗಳ ಸಂರಕ್ಷಣೆ ಮಾಡಿದ್ದೇವೆ. ಸ್ಮಾರ್ಟ್​ ಸಿಟಿ ಯೋಜನೆಯಲ್ಲಿ ನಗರದ ರೂಪವನ್ನೇ ಬದಲಾಯಿಸಲಾಗುತ್ತಿದೆ’ ಎಂದರು.

‘ಬಿಡದಿಯಲ್ಲಿ ₹ 210 ಕೋಟಿ ವೆಚ್ಚದಲ್ಲಿ ತ್ಯಾಜ್ಯದಿಂದ ಇಂಧನ ಎಂಬ ಯೋಜನೆ ಮಾಡಿದ್ದೇವೆ. ಪೊಲೀಸ್ ಪಡೆಯಲ್ಲಿ ಮಹಿಳಾ ಮೀಸಲಾತಿ ಶೇ 25ಕ್ಕೆ ಹೆಚ್ಚಿಸಿದ್ದೇವೆ. ಸಬ್ ಇನ್‌ಸ್ಪೆಪೆಕ್ಟರ್ ನೇಮಕಾತಿಗೆ ವಯೋಮಿತಿ ಎರಡು ವರ್ಷ ಹೆಚ್ಚಿಸಲಾಗಿದೆ. ಪೊಲೀಸ್ ಗೃಹ –2025 ಯೋಜನೆಗೆ ಚಾಲನೆ ನೀಡಲಾಗಿದೆ. ಅಗ್ನಿಶಾಮಕ ತುರ್ತು ಸೇವೆ ಇಲಾಖೆಯಲ್ಲಿ 1,568 ಹುದ್ದೆ ನೇಮಕ ಪ್ರಕ್ರಿಯೆ ಆರಂಭಿಸಲಾಗಿದೆ. ರಾಜ್ಯದಲ್ಲಿ ನಾವೀನ್ಯ ಉತ್ತೇಜನೆಗೆ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಪ್ರಾರಂಭ ಮಾಡಲಾಗಿದೆ. ಹೊಸ ಮಾಹಿತಿ ತಂತ್ರಜ್ಞಾನ ಕಾರ್ಯನೀತಿ 2020-25 ಅನುಷ್ಠಾನ ಮಾಡಲಾಗಿದೆ. ಕೊರೊ‌ನಾ ಸಮಯಲ್ಲಿ ಪಿಯುಸಿ, ಎಸ್ಸೆಸ್ಸೆಲ್ಸಿ ಪರೀಕ್ಷೆ ಯಶಸ್ವಿಯಾಗಿ ನಡೆಸಲಾಗಿದೆ. ಅರಣ್ಯ ಮತ್ತು ಜೀವ ಪರಿಸರ ಇಲಾಖೆಯಿಂದ ದೇಶದಲ್ಲಿ ಮೊದಲ ಬಾರಿಗೆ ಹಸಿರು ಸೂಚ್ಯಂಕಕ ಸಾಧನ ಕಿಟ್ ಅಭಿವೃದ್ಧಿಪಡಿಸಲಾಗಿದೆ. ಗ್ರಾಮ ಪಂಚಾಯಿತಿಳಲ್ಲಿ 6,544 ಜೀವ ವೈವಿಧ್ಯ ನಿರ್ವಹಣ ಸಮಿತಿ ರಚಿಸಲಾಗಿದೆ. ಬೆಂಗಳೂರಿಗೆ ನೀರಿನ ಪೂರೈಸಲು ಎತ್ತಿನಹೊಳೆ ಯೋಜನೆಯಿಂದ 2.5 ಟಿಎಂಸಿ ನೀರು ಹಂಚಿಕೆ ಮಾಡಿದೆ. ಟಿಜಿ ಹಳ್ಳಿ ಕುಡಿಯುವ ನೀರಿನ ಸರಬರಾಜು ಯೋಜನೆ ಹಂತ 1 ಕ್ಕೆ ಚಾಲನೆ ನೀಡಲಾಗಿದೆ. ಪರಿಶಿಷ್ಟ ಜಾತಿ, ಪಂಗಡಗಳ ಜನರ ಅಭಿವೃದ್ಧಿಗೆ ₹ 30 ಸಾವಿರ ಕೋಟಿ ನೀಡಲಾಗಿದೆ’ ಎಂದರು.

‘ತೋಟಗಾರಿಕೆ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಸರ್ಕಾರ ಅದನ್ನು ಮತ್ತಷ್ಟು ಸುಧಾರಿಸುತ್ತಿದೆ. ಅದಕ್ಕಾಗಿ ₹ ‌701 ಕೋಟಿ ಬಿಡುಗಡೆ ಮಾಡಲಾಗಿದೆ. ಅಲ್ಲದೆ, 15,905 ಹೆಕ್ಟೇರ್ ಪ್ರದೇಶವನ್ನು ಆಧುನಿಕ ನೀರಾವರಿ ವ್ಯವಸ್ಥೆಯಡಿ ತರಲಾಗಿದೆ. ಕೋವಿಡ್ ಸಂದರ್ಭದಲ್ಲಿ ತೋಟಗಾರಿಕೆ ಬೆಳೆಗಾರರಿಗೆ ನೆರವಾಗುವ ಸಲುವಾಗಿ 92,070 ಫಲಾನುಭವಿಗಳಿಗೆ ₹ 107 ಕೋಟಿ ನೀಡಲಾಗಿದೆ. ಅದೇ ರೀತಿ ಹೂವು, ತರಕಾರಿ, ಮತ್ತು ಹಣ್ಣು ಬೆಳೆಗಾರರಿಗೆ ಹಣಕಾಸಿನ ನೆರವು ನೀಡಲಾಗಿದೆ’ ಎಂದೂ ಅವರು ಹೇಳಿದರು.

ಮಾಣಿಕ್ ಷಾ ಪರೇಡ್ ಮೈದಾನಕ್ಕೆ ಬಂದ ರಾಜ್ಯಪಾಲರನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ವಾಗತಿಸಿದರು. ನಂತರ ರಾಜ್ಯಪಾಲರು ಧ್ವಜಾರೋಹಣ ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT