ಶಿವಮೊಗ್ಗ: ಈಚೆಗೆ ಕೊಲೆಗೀಡಾಗಿದ್ದ ಹರ್ಷನ ಸಹೋದರಿ ಅಶ್ವಿನಿಗೆ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಅವರಿಗೆ ರಕ್ಷಣೆ ನೀಡಲು ಪೊಲೀಸ್ ಇಲಾಖೆ ಮುಂದಾಗಿದೆ.
ಶಿವಮೊಗ್ಗದಲ್ಲಿ ಶನಿವಾರ ನಡೆದ ಸಾವರ್ಕರ್ ಸಾಮ್ರಾಜ್ಯ ಕಾರ್ಯಕ್ರಮದ ನಂತರ ಇಲ್ಲಿನ ಆಜಾದ್ ನಗರದಲ್ಲಿ ಸಯ್ಯದ್ ಪರ್ವೀಜ್ ಎಂಬುವರು ಮನೆಯ ಮುಂದೆ ನಿಲ್ಲಿಸಿದ್ದ ಇನ್ನೊವಾ ಕಾರು ಜಖಂಗೊಳಿಸಿದ ಬಗ್ಗೆ ಅಶ್ವಿನಿ ಸೇರಿದಂತೆ 10-15 ಜನರ ವಿರುದ್ಧ ದೊಡ್ಡಪೇಟೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಸೀಗೆಹಟ್ಟಿ ನಿವಾಸಿ ಅಶ್ವಿನಿ ಮತ್ತು 10 ರಿಂದ 15 ಜನರ ಗುಂಪು ಕಲ್ಲಪ್ಪನ ಕೇರಿಯಿಂದ ಗುಂಪಾಗಿ ಬೈಕ್ನಲ್ಲಿ ಬಂದು ಕಾರಿನ ಎಡಭಾಗದ ಹೆಡ್ಲೈಟ್, ಸೈಡ್ ಡೋರ್, ಬ್ಯಾಕ್ ಸೈಡ್ ಮಡ್ ಗಾರ್ಡ್, ಜಖಂಗೊಳಿಸಿದ್ದಾರೆ ಎಂದು ದೂರು ನೀಡಲಾಗಿದೆ.
ಈ ಘಟನೆಯ ನಂತರ ಕೆಲವರು ಮನೆಯ ಬಳಿ ಬಂದು ತಮ್ಮ ಕುಟುಂಬದ ವಿರುದ್ಧ ಘೋಷಣೆ ಕೂಗಿದ್ದು, ಜೀವ ಬೆದರಿಕೆ ಹಾಕಿದ್ದಾರೆ. ನಮಗೆ ರಕ್ಷಣೆ ಇಲ್ಲವಾಗಿದೆ ಎಂದು ಅಶ್ವಿನಿ ಅರೋಪಿಸಿದ್ದಾರೆ.
‘ತೊಂದರೆ ಅದ ಎಲ್ಲರಿಗೂ ರಕ್ಷಣೆ ಕೊಡುತ್ತೇವೆ. ಅದೇ ರೀತಿ ಅಶ್ವಿನಿ ಅವರಿಗೂ ರಕ್ಷಣೆ ನೀಡುತ್ತೇವೆ'ಎಂದು ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಮಾಧ್ಯಮದವರಿಗೆ ತಿಳಿಸಿದರು.