ಧಾರವಾಡ: ನಕಲಿ ದಾಖಲೆ ಸೃಷ್ಟಿಸಿ, ಕಾನೂನುಬಾಹಿರವಾಗಿ ಭೂ ಖರೀದಿ ಮಾಡಿದ್ದಾರೆ ಎನ್ನುವ ಆರೋಪದಡಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ವಿರುದ್ಧ ಸಮನ್ಸ್ ಜಾರಿಗೊಳಿಸಲು ಬೆಂಗಳೂರಿನ 10ನೇ ಎಸಿಎಂಎಂ ವಿಶೇಷ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಬೆಂಗಳೂರು ಕೆ.ಆರ್.ಪುರಂನಲ್ಲಿ 22 ಎಕರೆ ಜಮೀನನ್ನು 2003ರಲ್ಲಿ ಕಾನೂನು ಬಾಹಿರವಾಗಿ ಖರೀದಿ ಮಾಡಿದ್ದಾರೆ ಎಂದು ಮಾದಪ್ಪ ಎನ್ನುವವರು ಖಾಸಗಿ ದೂರು ಸಲ್ಲಿಸಿದ್ದರು. ದೂರಿಗೆ ಸಂಬಂಧಿಸಿ ಆರೋಪಿ ವಿರುದ್ಧ ಸಮನ್ಸ್ ಜಾರಿಗೊಳಿಸುವಂತೆ ಕೆಳ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ತಡೆ ನೀಡಬೇಕು ಮತ್ತು ಎಫ್ಐಆರ್ ಅನೂರ್ಜಿತಗೊಳಿಸುವಂತೆ ಕೋರಿ ಬೈರತಿ ಬಸವರಾಜ ಹೈಕೋರ್ಟ್ ಪ್ರಧಾನಪೀಠದಲ್ಲಿ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ಪ್ರಧಾನ ಪೀಠದಲ್ಲೇ ನಡೆದಿತ್ತು. ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಸುನೀಲದತ್ತ ಯಾದವ ಅವರು ಸದ್ಯ ಧಾರವಾಡ ಪೀಠದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಮಂಗಳವಾರ ಸಮನ್ಸ್ಗೆ ಮಧ್ಯಂತರ ತಡೆ ನೀಡಿ ಆದೇಶ ಪ್ರಕಟಿಸಿದರು.