ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈ ಭೀಮ್, ಜನ ಗಣ ಮನ ಸಿನಿಮಾಗಳು ನನ್ನ ಮನ ಕಲಕಿವೆ: ಎಚ್.ಡಿ. ಕುಮಾರಸ್ವಾಮಿ

ಅಕ್ಷರ ಗಾತ್ರ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರಿಗೆಇತ್ತೀಚೆಗೆ ಕೋವಿಡ್‌–19 ದೃಢಪಟ್ಟಿತ್ತು. ಮನೆಯಲ್ಲೇ ಉಳಿದು ಚಿಕಿತ್ಸೆ ಪಡೆದ ಸಂದರ್ಭದಲ್ಲಿ ಪುಸ್ತಕ ಓದುತ್ತಾ, ಸಿನಿಮಾಗಳನ್ನು ನೋಡುತ್ತಾ ಸಮಯ ಕಳೆದೆ ಎಂದು ಅವರು ಹೇಳಿಕೊಂಡಿದ್ದಾರೆ.

ತಮಿಳು ನಟ ಸೂರ್ಯ ಅಭಿನಯದ 'ಜೈ ಭೀಮ್‌' ಹಾಗೂ ಮಲಯಾಳಂ ನಟ ಪೃಥ್ವಿರಾಜ್‌ ಸುಕುಮಾರನ್‌ ನಟಿಸಿರುವ 'ಜನ ಗಣ ಮನ' ಸಿನಿಮಾಗಳನ್ನು ವೀಕ್ಷಿಸಿದ್ದಾಗಿ ತಿಳಿಸಿರುವ ಕುಮಾರಸ್ವಾಮಿ, ಈ ಎರಡೂ ಸಿನಿಮಾಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸರಣಿ ಟ್ವೀಟ್‌ ಮಾಡಿದ್ದಾರೆ.

'ಕೋವಿಡ್ ಸೋಂಕಿನಿಂದ ಒಂದು ವಾರ ಮನೆಯಲ್ಲೇ ಚಿಕಿತ್ಸೆ ಪಡೆದ ನಾನು, ಓದು ಮತ್ತು ಸಿನಿಮಾ ವೀಕ್ಷಣೆಯಲ್ಲಿಯೇ ಸಮಯ ಕಳೆದೆ. ಈ ಬಿಡುವಿನಲ್ಲಿ ಎರಡು ಸಿನಿಮಾಗಳನ್ನು ವೀಕ್ಷಿಸಿದೆ. 1.ಜೈ ಭೀಮ್. 2.ಜನ ಗಣ ಮನ. ಸೂಕ್ಷ್ಮ ಕಥಾಹಂದರದ ಈ ಸಿನಿಮಾಗಳೆರಡೂ ನನ್ನ ಮನ ಕಲಕಿವೆ ಮತ್ತು ತೀವ್ರ ತಳಮಳಕ್ಕೆ ಕಾರಣವೂ ಆಗಿವೆ' ಎಂದಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ, 'ಸುಪ್ರೀಂ ಕೋರ್ಟ್‌ನ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳಾದ ರಮಣ ಅವರು; ವಿಚಾರಣಾಧೀನ ಕೈದಿಗಳ ದುಸ್ಥಿತಿಯ ಬಗ್ಗೆ ಜೈಪುರದಲ್ಲಿ ನೀಡಿದ್ದ ಹೇಳಿಕೆ ಮತ್ತು ʼಜೈ ಭೀಮ್ʼ ಚಿತ್ರದಲ್ಲಿ ಅದೇ ಕೈದಿಗಳ ಸುತ್ತ ಬಿಚ್ಚಿಕೊಳ್ಳುವ ಕಠೋರ ಕಹಿಸತ್ಯಗಳ ಬಗ್ಗೆ ಇಡೀ ಭಾರತವೇ ಆಲೋಚಿಸಬೇಕು. ನಾನು ಆಲೋಚಿಸುತ್ತಿದ್ದೇನೆ. ಬದಲಾವಣೆಗೆ ಖಂಡಿತಾ ಪ್ರಯತ್ನಿಸುವೆ' ಎಂದು ಹೇಳಿದ್ದಾರೆ.

'ಭಾರತೀಯ ನ್ಯಾಯ ವ್ಯವಸ್ಥೆ ಬಡವರು ದಲಿತರು, ಅಶಕ್ತರಿಗೆ ಗಗನ ಕುಸುಮವಾ? ಓರ್ವ ಸಿರಿವಂತ ಅಪರಾಧಿಗೆ ಕೆಲ ಗಂಟೆಗಳಲ್ಲೇ ಜಾಮೀನು ಸಿಕ್ಕಿದರೆ, ಅದೇ ಬಡ ಅಪರಾಧಿಗಳ (ಅನೇಕ ಪ್ರಕರಣಗಳಲ್ಲಿ ಮುಗ್ಧರು) ಅರ್ಜಿಗಳಿಗೆ ಮೋಕ್ಷವೇ ಕಾಣುವುದಿಲ್ಲ. ಸರಳುಗಳ ಹಿಂದಿನ ನರಕವನ್ನು ʼಜೈ ಭೀಮ್ʼ ನೈಜವಾಗಿ ತೋರಿಸಿದೆ' ಎಂದು ಇನ್ನೊಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಹಾಗೆಯೇ, 'ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳು ಹೇಳಿದ್ದು ಇದನ್ನೇ. ವಿಚಾರಣೆಯೇ ಇಲ್ಲದೆ ಕೈದಿಗಳ ದೀರ್ಘಾವಧಿ ಸೆರೆ ಪ್ರಶ್ನಾರ್ಹ. ನಮ್ಮ ದೇಶದಲ್ಲಿ ಸೆರೆವಾಸದಲ್ಲಿರುವ 6.10 ಲಕ್ಷ ಕೈದಿಗಳಲ್ಲಿ ಶೇ.80ರಷ್ಟು ಜನ ವಿಚಾರಣಾಧೀನ ಕೈದಿಗಳೇ! ಇವರೆಲ್ಲರೂ ವಿಚಾರಣೆ ಪೂರ್ಣಗೊಳ್ಳದೇ ಕಂಬಿಗಳ ಹಿಂದೆ ಜೀವಶ್ಚವಗಳಂತೆ ಬದುಕುತ್ತಿದ್ದಾರೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

'2017ರಲ್ಲಿ ಛತ್ತೀಸಗಡದಲ್ಲಿ ಸಿಆರ್‌ಪಿಎಫ್‌ ಜವಾನರ ಮೇಲೆ ನಡೆದ ದಾಳಿ ಪ್ರಕರಣದಲ್ಲಿ 121 ಬುಡಕಟ್ಟು ಜನರನ್ನು ಬಂಧಿಸಲಾಗಿತ್ತು. 5 ವರ್ಷ ಅವರು ಜೈಲುಗಳಲ್ಲಿ ನರಕ ಅನುಭವಿಸಿದರು. ಕೊನೆಗೆ ಅವರ ಪಾತ್ರದ ಬಗ್ಗೆ ಸಾಕ್ಷ್ಯ ಇಲ್ಲ ಎಂದು ಎನ್ಐಎ ಕೋರ್ಟ್ ತೀರ್ಪು ನೀಡಿ, ಆ ಮುಗ್ಧರನ್ನು ಖುಲಾಸೆಗೊಳಿಸಿದೆ. ಇದು ಸಮಾಧಾನದ ಸಂಗತಿ.ಹಾಗಾದರೆ, 5 ವರ್ಷಗಳ ಅವರ ಸೆರೆವಾಸಕ್ಕೆ ಉತ್ತರದಾಯಿಗಳು ಯಾರು? ಅವರ ಕುಟುಂಬ ಸದಸ್ಯರು ಅನುಭವಿಸಿದ ಕಷ್ಟಕ್ಕೆ ಪರಿಹಾರವೇನು?' ಎಂದು ಪ್ರಶ್ನಿಸಿದ್ದಾರೆ.

'ಆತುರಗೆಟ್ಟ ಆರೋಪ ಪಟ್ಟಿ, ವಿವೇಚನೆ ಇಲ್ಲದ ಬಂಧನ, ಜಾಮೀನು ಪಡೆಯಲು ಹೆಣಗಾಟದ ಕರಾಳತೆಯ ಮೇಲೆ ʼಜೈ ಭೀಮ್ʼ ಬೆಳಕು ಚೆಲ್ಲಿದೆ. ಮಾನ್ಯ ಮುಖ್ಯ ನ್ಯಾಯಮೂರ್ತಿಗಳು ಇದನ್ನೇ ಹೇಳಿ ಕಳವಳ ವ್ಯಕ್ತಪಡಪಡಿಸಿದ್ದಾರೆ. ಅವರ ದನಿ ದೇಶಕ್ಕೇ ಕೇಳಿಸಿದೆ. ಹಾಗಾದರೆ, ನಾವು ಬದಲಾಗುವುದು ಯಾವಾಗ? ಸುಧಾರಣೆಗಳು ಎಂದು?ನಾನು ಪ್ರಾಮಾಣಿಕವಾಗಿ ಪ್ರಯತ್ನಿಸುವೆ' ಎಂದು ಭರವಸೆ ನೀಡಿದ್ದಾರೆ.

'ಸಂವಿಧಾನ ನಮಗೆ ಶ್ರೇಷ್ಠ ನ್ಯಾಯಾಂಗವನ್ನು ಕೊಟ್ಟಿದೆ. ಕಷ್ಟ ಎದುರಾದಾಗ ಬಿಲಿಯನೇರ್‌ನಿಂದ ಕಟ್ಟಕಡೆಯ ಬಡಪ್ರಜೆವರೆಗೂ ಎಲ್ಲರೂ ಕೋರ್ಟ್ ಕಡೆ ನೋಡುತ್ತಾರೆ. ಎಲ್ಲರೂ ಇಲ್ಲಿ ಸಮಾನರು. ಅದು ಹಕ್ಕು ಹೌದು. ತಮಿಳುನಾಡಿನ ಕಡಲೂರಿನಲ್ಲಿ ನಡೆದ ನೈಜ ಘಟನೆ ಆಧರಿಸಿದ 'ಜೈ ಭೀಮ್' ಚಿತ್ರ ಮನುಷ್ಯತ್ವಕ್ಕೇ ಸವಾಲೆಸೆಯುವ ಅನೇಕ ಪ್ರಶ್ನೆಗಳನ್ನು ಎತ್ತಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.

''ಜನ ಗಣ ಮನ' ಚಿತ್ರ ಇವತ್ತಿನ ರಾಜಕೀಯ ಕಪಟತೆ, ಕುಟಿಲತೆ, ಲಂಪಟತೆಯನ್ನು ಮನೋಜ್ಞವಾಗಿ ತೆರೆದಿಟ್ಟಿದೆ. ರಾಜಕೀಯದ ಕಪಿಮುಷ್ಠಿಗೆ ಸಿಲುಕಿ ನರಳುವ ವ್ಯವಸ್ಥೆಯ ಅಸಹಾಯಕ ಮುಖದ ದರ್ಶನ ಮಾಡಿಸಿದೆ. ವ್ಯವಸ್ಥೆಗೆ ಕನ್ನಡಿಯಂತಿರುವ ಸಿನಿಮಾಗಳು ಆವೇಶಕ್ಕೆ, ಆಲೋಚನೆಗೆ ದೂಡುತ್ತವೆ. ಎರಡೂ ಚಿತ್ರಗಳ ನಿರ್ದೇಶಕರು ಅಭಿನಂದನಾರ್ಹರು' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT