ರಾಮನಗರ: ರಾಜ್ಯದಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚಿಸಲು ರಾಜ್ಯ ಸರ್ಕಾರ ತುರ್ತು ವಿಧಾನಮಂಡಲ ಅಧಿವೇಶನ ಕರೆಯಬೇಕು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಒತ್ತಾಯಿಸಿದರು.
ಒಂದೆಡೆ ರಾಜ್ಯ ಪ್ರವಾಹದಲ್ಲಿ ಮುಳುಗಿದೆ. ಮತ್ತೊಂದೆಡೆ ಕರಾವಳಿಯಲ್ಲಿನ ಹತ್ಯೆಗಳು ಸರ್ಕಾರದ ನಡವಳಿಕೆಗಳಿಗೆ ಧಕ್ಕೆ ತರುವಂತೆ ಇದೆ. ಕಾನೂನು ಪಾಲನೆಯಲ್ಲಿ ಸರ್ಕಾರ ಎಡವಿದೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಜುಲೈನಲ್ಲಿ ಅಧಿವೇಶನ ನಡೆಯಬೇಕಿತ್ತು. ಆದರೆ ಸಭೆ ನಡೆಯಲಿಲ್ಲ. ಈಗಲಾದರೂ ಕರೆದು ಚರ್ಚಿಸಿ ಏನನ್ನಾದರೂ ಮಾಡಬಹುದು ಎಂದು ಕುಮಾರಸ್ವಾಮಿ ಒತ್ತಾಯಿಸಿದರು.
ಕರಾವಳಿ ಹತ್ಯೆಗಳ ಹಿಂದೆ ಗೃಹ ಹಾಗೂ ಪೊಲೀಸ್ ಇಲಾಖೆ ವೈಫಲ್ಯ ಇದೆ. ಮನಸ್ಸು ಮಾಡಿದ್ದರೆ ಈ ಹತ್ಯೆಗಳನ್ನು ತಡೆಯಬಹುದಿತ್ತು. ಕೇಂದ್ರ ಗೃಹ ಸಚಿವರು ಇನ್ನೊಂದಷ್ಟು ಹೆಣ ಬೀಳಿಸಲು ರಾಜ್ಯಕ್ಕೆ ಬರುತ್ತಿರಬೇಕು ಎಂದು ಅವರು ಟೀಕಿಸಿದರು.
ಬೆಂಗಳೂರು- ಮೈಸೂರು ಹೆದ್ದಾರಿ ಕಾಮಗಾರಿ ಕಳಪೆ ಆಗಿದ್ದು, ಅಲ್ಲಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆ ಆಗಿದೆ. ಹೀಗಿರುವಾಗ ಸಂಸದ ಪ್ರತಾಪ ಸಿಂಹ ಫೋಟೊ ತೆಗೆಸಿಕೊಂಡು ತಮ್ಮ ಗುರು ಪರಂಪರೆ ಮುಂದುವರಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.