ವಿಜಯಪುರ: ‘ಅಯ್ಯೋ... ನನಗೆ ಆರ್.ಎಸ್.ಎಸ್ ಸಹವಾಸ ಬೇಡ. ವಿಧಾನಸಭೆ ಕಲಾಪ ನಡೀತಿದ್ದರೆ ಅದೆಂಥದ್ದೋ ನೀಲಿ ಚಿತ್ರ ನೋಡಿಕೊಂಡುಕೂರೋದು, ಈ ಥರಹದ್ದೇ ತಾನೆ ಅವರ ಶಾಖೆಯಲ್ಲಿ ಅವರಿಗೆ ಕಲಿಸಿದ್ದು. ಅದನ್ನು ಕಲಿಯಲು ಹೋಗಬೇಕಾ?’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಅವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ ಕಟೀಲ್ ಹೇಳಿಕೆಗೆ ತಿರುಗೇಟು ನೀಡಿದರು.
‘ನನಗೆ ಅವರ ಶಾಖೆ ಬೇಡ, ಇಲ್ಲಿದೆಯಲ್ಲಾ ಈಬಡಜನರ ಬಾಂಧವ್ಯದ ಶಾಖೆ ಸಾಕು. ಆರ್.ಎಸ್.ಎಸ್ ನಿಂದ ಬಂದಿರುವ ಹಾಗೂ ಬಿಜೆಪಿ ನಾಯಕರುಗಳ ಬಗ್ಗೆ ಚರ್ಚೆ ಮಾಡೋಕೆ ಹೋದರೆ, ದಿನವೆಲ್ಲಾ ಚರ್ಚೆ ಮಾಡಬಹುದು’ ಎಂದು ಸಿಂದಗಿ ತಾಲ್ಲೂಕಿನ ಬಮ್ಮನಹಳ್ಳಿ ಗ್ರಾಮದಲ್ಲಿ ಸುದ್ದಿಗಾರರ ಪ್ರಶ್ನೆಗೆ ಹೀಗೆ ಉತ್ತರಿಸಿದರು.
ವೈಯಕ್ತಿಕ ಚರ್ಚೆ ಬೇಡ
‘ನಾನು ಕೀಳು ಮಟ್ಟಕ್ಕಿಳಿದು ಚರ್ಚಿಸುವ ಅವಶ್ಯಕತೆ ಇಲ್ಲ. ವೈಯಕ್ತಿಕ ವಿಚಾರಗಳನ್ನುಚರ್ಚೆ ಮಾಡಬೇಡಿ ಎಂದು ಎರಡೂ ಪಕ್ಷಗಳ ನಾಯಕರಿಗೆ ನಾನು ಹೇಳುತ್ತೇನೆ. ನಮಗೆ ಅದು ಬೇಕಿಲ್ಲ. ದೇಶದಲ್ಲಿ ಬಡತನ ಇದೆ, ಬಡತನ ಹೇಗೆ ಹೋಗಲಾಡಿಸಬೇಕು ಎಂಬುದರ ಬಗ್ಗೆ ಚರ್ಚೆ ಮಾಡಿ. ವೈಯಕ್ತಿಕವಾಗಿಯಾವುದೋ ನಾಯಕರಬಗ್ಗೆ ಚರ್ಚಿಸಿದರೆ ಅದಕ್ಕೆ ಮಿತಿ ಇರುವುದಿಲ್ಲ’ ಎಂದು ರಾಹುಲ್ ಗಾಂಧಿ ಪೆಡ್ಲರ್ ಎಂಬ ಬಿಜೆಪಿ ಹೇಳಿಕೆಗೆ ಪ್ರತಿಕ್ರಿಯಿಸಿದರು.
‘ನನ್ನ ಕಂಡರೆ ಸಿದ್ದರಾಮಯ್ಯಗೆ ಭಯ ಇದೆ. ನನಗೇನೂ ಅವರ ಭಯವಿಲ್ಲ. ನಾನೇಕೆ ಭಯ ಬೀಳಲಿ? ಅದಕ್ಕಾಗಿಯೇ ಪದೇ ಪದೇ ಜೆಡಿಎಸ್ ಬಗ್ಗೆ ಮಾತನಾಡುತ್ತಾರೆ. ನಮ್ಮ ಹೆಸರು ಕೆದಕೋದು ಅವರೇ. ವಿಧಿಯಿಲ್ಲದೆ ಸ್ಪಷ್ಟನೆ ಕೊಡೋಕೆ ನಾನು ಮಾತನಾಡುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.